ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ವಿರುದ್ಧ ರಾಜ್ಯ ಜೀತ ವಿಮೋಚನಾ ಸಂಘಟನೆ ಸದಸ್ಯರು ಜಾತಿನಿಂದನೆ ಆರೋಪದಡಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ಮುಖರ್ಜಿ ಅವರು ಸಂಘಟನೆ ಸದಸ್ಯರ ಜತೆ ಅಗೌರವದಿಂದ ವರ್ತಿಸಿದ್ದಾರೆ. ನಮ್ಮನ್ನು ಅಸ್ಪೃಶ್ಯರಂತೆ ನಡೆಸಿಕೊಂಡಿದ್ದಾರೆ’ ಎಂದು ಸಂಘಟನೆಯ ಮುಖ್ಯಸ್ಥ ಗೋವಿಂದರಾಜು ಆರೋಪಿಸಿದ್ದಾರೆ. ‘ಮುಖ್ಯ ಕಾರ್ಯದರ್ಶಿಗಳು ಕಾರ್ಯಾಂಗದ ಮುಖ್ಯಸ್ಥರಾಗಿದ್ದಾರೆ. ಅವರ ಅಧೀನದಲ್ಲಿ 58 ಇಲಾಖೆಗಳು ಬರುತ್ತವೆ.
ಹೀಗಾಗಿ ಜೀತದಾಳು ಹಾಗೂ ದಲಿತರ ಸಮಸ್ಯೆಗಳ ಸಮಾಲೋಚನೆಗೆ ಅವಕಾಶ ಕೋರಿದ್ದೆವು. ಈ ಹಿಂದೆ ಐದಾರು ಬಾರಿ ಸಮಯ ನಿಗದಿಯಾಗಿತ್ತಾದರೂ, ಕೊನೆ ಕ್ಷಣದಲ್ಲಿ ಸಭೆ ರದ್ದು ಮಾಡಿದ್ದರು. ಕೊನೆಗೂ ಗುರುವಾರ (ಮಾ.5) ಸಂಜೆ 4 ಗಂಟೆಗೆ ಮಾತುಕತೆಗೆ ಕರೆದಿದ್ದರು. ಅದರಂತೆ ಆ ಸಮಯಕ್ಕೆ ಅವರ ಕಚೇರಿಗೆ ಹೋಗಿದ್ದೆವು’ ಎಂದು ಗೋವಿಂದರಾಜು ವಿವರಿಸಿದರು.
‘ಕಚೇರಿ ಹತ್ತಿರ ಹೋಗುತ್ತಿದ್ದಂತೆಯೇ ಕೋಪಗೊಂಡ ಅವರು, ನಮ್ಮ ಅಹವಾಲು ಆಲಿಸುವ ಸೌಜನ್ಯ ಕೂಡ ತೋರಲಿಲ್ಲ. ಜಾತಿ ಹೆಸರಿನಿಂದ ನಿಂದಿಸಿ ಕಚೇರಿಯಿಂದ ಹೊರನಡೆದರು. ಈ ಸಂಬಂಧ ರಾಷ್ಟ್ರಪತಿಗಳು, ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಕೇಂದ್ರ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ’ ಎಂದರು.
ಪ್ರತಿದೂರು: ತಜ್ಞರ ಸಲಹೆ
ಕೌಶಿಕ್ ಮುಖರ್ಜಿ ಅವರ ಆಪ್ತ ಕಾರ್ಯದರ್ಶಿ ಸಣ್ಣಪ್ಪ ಅವರು ರಾಜ್ಯ ಜೀತ ವಿಮೋಚನಾ ಸಂಘಟನೆ ಸದಸ್ಯರ ವಿರುದ್ಧ ಪ್ರತಿದೂರು ಕೊಟ್ಟಿದ್ದಾರೆ. ದೂರು–ಪ್ರತಿದೂರಿನ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.