ವಸಂತ ಧರೆಗೆ ಕಾಲಿಟ್ಟಾಗ ಹೊಸ ಚಿಗುರಿನೊಂದಿಗೆ ನಳನಳಿಸುವ ಸಸ್ಯರಾಶಿ ಹೇಮಂತ ಬಂದಾಗ ಮಾತ್ರ ಮುದುಡಿ ಮುಖ ಮುಚ್ಚಿಕೊಳ್ಳುತ್ತದೆ. ಚಳಿ ಅಡಿ ಇಟ್ಟಿದೆ. ಮೈ ಮನಕ್ಕೆ ಬೆಚ್ಚನೆಯ ಮುಸುಕು ಬೇಕಾಗಿದೆ! ಮೈ ತುಂಬಾ ಸ್ವೆಟರು, ತಿನ್ನಲು ಕುರುಕಲು ತಿಂಡಿ ಇದ್ದರೆ ಚಳಿ ಹಿತ ಅಲ್ಲವೇ.
ಈ ಚಳಿಗಾಲ ಎಲ್ಲ ವಯೋಮಾನದವರಿಗೂ ಬೇರೆಯದ್ದೇ ಆದ ಅನುಭವಗಳನ್ನು ತಂದುಕೊಡುತ್ತದೆ. ಚಿಕ್ಕ ಮಕ್ಕಳು ಬೆಚ್ಚಗೆ ಇರಲು ತಂದೆ ತಾಯಿಗಳು ಮೈ ತುಂಬಾ ಸ್ವೆಟರು ಕವುಚಿದರೆ, ಯುವತಿಯರು ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಯುವಕರೇನು ಕಡಿಮೆ, ಅವರೂ ತಮ್ಮ ಸೌಂದರ್ಯ ಕಳಾಹೀನವಾಗದಂತೆ ಎಚ್ಚರ ವಹಿಸುವರು. ಮನೆಯಲ್ಲಿನ ಅಜ್ಜ–ಅಜ್ಜಿಯರ ಬಗ್ಗೆ ಹೆಚ್ಚು ಗಮನ ವಹಿಸಿ ಅವರನ್ನು ಮತ್ತಷ್ಟು ಬೆಚ್ಚಗಿಡಲಾಗುತ್ತದೆ. ಇನ್ನು ಪ್ರೇಮಿಗಳಿಗಂತೂ ಚಳಿಗಾಲವೆಂದರೆ ನವಿರು ಕಂಪನ.
ಹಿತವಾಗುವ ತಿಂಡಿ–ತಿನಿಸು
ಚಳಿಯಲ್ಲಿ ಕುರುಕಲು ಸೇರಿದಂತೆ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಗೆ ಬೇಡಿಕೆ. ಅಲ್ಲದೆ ಅವು ಬಾಯಿಗೆ ಹಿತವನ್ನೂ ನೀಡುತ್ತವೆ. ಕೆಎಫ್ಸಿಯ ಬಿಸಿಬಿಸಿಯಾದ ಬರ್ಗರ್, ಬೀದಿ ಬದಿಯ ಮಿರ್ಚಿ ಬಜ್ಜಿ, ಚುರುಮುರಿ... ಬಾಯಲ್ಲಿ ನೀರು ತರಿಸಿ, ದೇಹಕ್ಕೆ ಬಿಸಿ ತಾಗಿಸುವ ಈ ಕುರುಕಲುಗಳು ಚಳಿಗಾಲದಲ್ಲಿ ಹಿತ. ಅದರಲ್ಲೂ ಮೆಣಸಿನ ಕಾಯಿ ಬಜ್ಜಿಯಂತೂ ಅಂಗಡಿಯಾತ ಕರಿದು ಪಾತ್ರೆಗೆ ಹಾಕಿದ ತಕ್ಷಣವೇ ಸೋಲ್ಡ್ಔಟ್!
ಮೈ ನಡುಗಿಸುವ ಚಳಿಗೆ ಎದೆಯೊಡ್ಡಿ ನಿಲ್ಲುವವರಿಗಿಂತ ಮುದುಡಿ ಕೂರುವವರ ಸಂಖ್ಯೆಯೇ ಹೆಚ್ಚು. ದೈನಂದಿನ ಕೆಲಸಗಳ ವೇಗವನ್ನೇ ಕುಗ್ಗಿಸುವ ಶಕ್ತಿ ಈ ಚಳಿರಾಯನಿಗಿದೆ. ಹಾಸಿಗೆಯಿಂದ ಎದ್ದು ಬಿಸಿಬಿಸಿ ಚಹಾ ಹೀರಿದ ಮೇಲೂ ನಮ್ಮ ಮನಸ್ಸು ಅದೆಷ್ಟೋ ಹೊತ್ತು ತೂಕಡಿಸುತ್ತಿರುತ್ತದೆ. ರೈತರು, ವಿದ್ಯಾರ್ಥಿಗಳು, ನೌಕರರು, ಗೃಹಿಣಿ, ದಿನಪತ್ರಿಕೆ ಹಂಚುವವರು, ಹಾಲು ಮಾರುವವರು... ಈ ಥಂಡಿ ಯಾರನ್ನೂ ಬಿಡುವುದಿಲ್ಲ.
ಥಂಡಿ ದಿನಗಳ ಅನುಭವವನ್ನು ಮೆಲಕು ಹಾಕುವ ಸಮಯವಿದು. ಎಲ್ಲವನ್ನೂ ಮರೆತು ಹೊದಿಕೆಯನ್ನು ಬಿಗಿಯಾಗಿಸಿಕೊಂಡು ದಿಂಬಿನಲ್ಲಿ ಮುಖ ಹುದುಗಿಸುತ್ತೇವೆ. ಬೇಸಿಗೆಯಲ್ಲಿ ಎಲ್ಲವನ್ನೂ ಕಿತ್ತೊಗೆಯುವುದೇ ಸುಖ. ಚಳಿಯಲ್ಲಿ ಎಲ್ಲವನ್ನೂ ಅಪ್ಪಿಕೊಳ್ಳುವ ಹಿತ.
ಚಳಿಯ ಪರಿಣಾಮದ ಕುರಿತು ಒಂದಷ್ಟು ಜನ ಇಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.