ರಾಮನಗರ: ಜಿಲ್ಲೆಯಾಗಿ ಎಂಟನೇ ವರ್ಷಕ್ಕೆ ಕಾಲಿಟ್ಟಿದ್ದರೂ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ಇಲ್ಲ ಎಂಬ ಕೊರಗು ಇಲ್ಲಿನ ಜನರನ್ನು ಬಹುವಾಗಿ ಕಾಡು-ತ್ತಿದೆ. ಈ ಕಾರಣದಿಂದಾಗಿಯೇ ಜಿಲ್ಲೆಯ ಕ್ರೀಡಾ ಪ್ರತಿಭೆಗಳು ನರಳುವಂತಾಗಿವೆ.
ಹಾಲಿ ಇರುವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಮತ್ತು ಕ್ರೀಡಾಕೂಟಗಳಿಗೆ ಸೂಕ್ತ ಸೌಲಭ್ಯ, ಸೌಕರ್ಯ ಇಲ್ಲದ ಕಾರಣಕ್ಕೆ ಕೆಲ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಆಡಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಮತ್ತು ಕಾಲೇಜುಗಳ ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹರಸಾಹಸ ಪಡುತ್ತಿವೆ.
ಜಿಲ್ಲೆಯಲ್ಲಿ ಹಾಕಿ, ಷಟಲ್ ಬ್ಯಾಡ್ಮಿಂಟನ್, ಈಜು ಕ್ರೀಡೆಗಳನ್ನು ಆಡಲು ಸೂಕ್ತ ಸ್ಥಳಾವಕಾಶವೇ ಇಲ್ಲವಾಗಿದೆ. ಇದಕ್ಕಾಗಿ ಖಾಸಗಿ ಕ್ಲಬ್ ಮತ್ತು ಖಾಸಗಿ ಕಾಲೇಜುಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸೂಕ್ತ ಕ್ರೀಡಾಂಗಣ ಇಲ್ಲದ ಕಾರಣಕ್ಕೆ ಜಿಲ್ಲೆಯಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಹಾಕಿ, ಬ್ಯಾಸ್ಕೆಟ್ ಬಾಲ್ ಮತ್ತು ಈಜು ಸ್ಪರ್ಧೆಗಳೇ ನಡೆಯುತ್ತಿಲ್ಲ !!
ಅನುಮತಿ ಪಡೆಯುವುದೇ ಕಷ್ಟ: ಇನ್ನು ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಖಾಸಗಿ ಸಂಸ್ಥೆ ಅಥವಾ ಕ್ಲಬ್ಗಳಲ್ಲಿ ಹಾಗೂ ಕೆಲ ಎಂಜಿನಿಯರಿಂಗ್ ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಷಟಲ್ ಬ್ಯಾಡ್ಮಿಂಟನ್ಗೆ ಒಳಾಂಗಣ ಕ್ರೀಡಾಂಗಣ ಇದೆ. ಆದರೆ ಅಲ್ಲಿ ಆಡುವುದಕ್ಕೆ ಅನುಮತಿ ಪಡೆಯುವುದೇ ಶಿಕ್ಷಣ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಹಾಗಾಗಿ ಜಿಲ್ಲಾ ಕೇಂದ್ರದಲ್ಲಿ ನಡೆಯುವ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಹೊರಾಂಗಣದಲ್ಲಿಯೇ ಆಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಖ್ಯಾಂಶಗಳು |
---|
*ಈಜು ಕೊಳ ಮತ್ತು ಲಾನ್ ಟೆನಿಸ್ ಅಂಕಣವೂ ಇಲ್ಲ *ಕೆಲ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಆಡಿಸಲಾಗದಂತಹ ಪರಿಸ್ಥಿತಿ ನಿರ್ಮಾಣ *ಹಾಕಿ, ಷಟಲ್ ಬ್ಯಾಡ್ಮಿಂಟನ್, ಕರಾಟೆ, ಜೂಡೊಗಿಲ್ಲ ಸ್ಥಳಾವಕಾಶ |
ಜಿಲ್ಲೆಯಲ್ಲಿ ಶಾಲಾ ಹಂತದಲ್ಲಿ ಫುಟ್ಬಾಲ್ ಆಡುವ ತಂಡಗಳು ಕಡಿಮೆ ಇವೆ. ಹಾಗಾಗಿ ಕೆಲ ತಾಲ್ಲೂಕು ಮಟ್ಟದಲ್ಲಿ ಫುಟ್ಬಾಲ್ ಪಂದ್ಯಗಳೇ ನಡೆಯುವುದಿಲ್ಲ. ಹೇಗಾದರೂ ಮಾಡಿ ತಾಲ್ಲೂಕಿನಿಂದ ಒಂದೊಂದು ತಂಡವನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಗಳನ್ನು ಆಡಿಸಲು ಮೈದಾನಕ್ಕಾಗಿ ಖಾಸಗಿ ಎಂಜಿನಿಯರ್ ಕಾಲೇಜುಗಳನ್ನು ಕೋರಬೇಕಾದ ದುಸ್ಥಿತಿ ಇದೆ.
ಅಧಿಕಾರಿ ಹೇಳುವುದೇನು : ‘ಜಿಲ್ಲಾ ಕೇಂದ್ರದಲ್ಲಿ ಕ್ರೀಡೆಗೆ ಸೂಕ್ತ ಸೌಲಭ್ಯಗಳು ಇಲ್ಲವಾಗಿದೆ. ಆಟದ ಮೈದಾನ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಇಲ್ಲದ ಕಾರಣಕ್ಕೆ ಕ್ರೀಡಾಪಟುಗಳು ತೊಂದರೆ ಅನುಭವಿಸುತ್ತಿದ್ದಾರೆ.
ಸೂಕ್ತ ತರಬೇತಿ ಪಡೆಯುವಲ್ಲಿಯೂ ವಿಫಲರಾಗುತ್ತಿದ್ದಾರೆ. ಕ್ರೀಡಾಕೂಟಗಳನ್ನು ಆಯೋಜನೆ ಮಾಡುವಾಗಲೂ ಸಾಕಷ್ಟು ಕಷ್ಟ ಎದುರಾಗುತ್ತಿದೆ’ ಎಂದು ಜಿಲ್ಲಾ ಕ್ರೀಡಾ ಅಧೀಕ್ಷಕ ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೊರಾಂಗಣದಲ್ಲಿ ಷಟಲ್ ಪಂದ್ಯ’ |
---|
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಷೆಟಲ್ ಬ್ಯಾಡ್ಮಿಂಟನ್ನಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚುತ್ತಿದ್ದರೆ, ಬೆಂಗಳೂರಿಗೆ ಕೂಗಳತೆ ದೂರದಲ್ಲಿಯೇ ಇರುವ ರಾಮನಗರದ ಶಾಲಾ ಮಕ್ಕಳಿಗೆ ಒಳಾಂಗಣ ಕ್ರೀಡಾಂಗಣದ ಕೊರತೆ ತೀವ್ರವಾಗಿ ಕಾಡುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಒಂದು ಒಳಾಂಗಣ ಕ್ರೀಡಾಂಗಣ ಇದೆಯಾದರು ಅದು ಖಾಸಗಿಯದ್ದಾಗಿದೆ. ಅಲ್ಲಿ ಮರದ ಹಾಸಿನ ಅಂಕಣಗಳಿದ್ದು, ಆಡಲು ‘ರಬ್ಬರ್ ಶೂ’ಗಳನ್ನು ಹಾಕಿಕೊಳ್ಳಲೇಬೇಕು ಎಂಬ ಷರತ್ತು ಇದೆ. ಜಿಲ್ಲೆಯ ಗ್ರಾಮೀಣ ಭಾಗದ ಕ್ರೀಡಾಪಟುಗಳು ‘ರಬ್ಬರ್ ಶೂ’ಗಳನ್ನು ಖರೀದಿಸಿ, ಆಡುವುದು ದುಬಾರಿಯಾಗುತ್ತದೆ. ಹಾಗಾಗಿ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಶಾಲಾ ಮಟ್ಟದ ತಾಲ್ಲೂಕು ಮತ್ತು ಜಿಲ್ಲಾ ಷಟಲ್ ಪಂದ್ಯಗಳನ್ನು ಹೊರಾಂಗಣದಲ್ಲಿಯೇ ಆಡಿಸಲಾಗುತ್ತದೆ ಎಂದು ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಮಾಹಿತಿ ನೀಡಿದರು. |
‘ಜಿಲ್ಲೆಯಲ್ಲಿ ಸೌಲಭ್ಯಗಳಿಲ್ಲದ ಕಾರಣಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಹಾಕಿ, ಬ್ಯಾಸ್ಕೆಟ್ಬಾಲ್, ಈಜು, ಲಾನ್ ಟೆನಿಸ್, ಕರಾಟೆ, ಜೂಡೊ ಪಂದ್ಯಗಳು ನಡೆಯುವುದೇ ಇಲ್ಲ. ಈ ಪಂದ್ಯಗಳಿಗೆ ತಂಡಗಳು ಬರುವುದೂ ಇಲ್ಲ. ಬಂದರೆ ಆಡಿಸಲು ಸೂಕ್ತ ವ್ಯವಸ್ಥೆಯೂ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹೊರತು ಪಡಿಸಿ ನಡೆಯುವ ಪೈಕಾ, ದಸರಾ ಮತ್ತಿತರ ಕ್ರೀಡಾಕೂಟಗಳ ಸಂದರ್ಭದಲ್ಲಿಯೂ ಈ ಪಂದ್ಯಗಳಿಗೆ ತಂಡಗಳ ಕೊರತೆ ಇರುತ್ತದೆ. ಒಂದೊಂದು ತಂಡ ಬಂದರೆ ಅವುಗಳನ್ನೇ ವಿಭಾಗೀಯ ಮಟ್ಟದ ಕ್ರೀಡಾಕೂಟಕ್ಕೆ ಕಳುಹಿಸಲಾಗುತ್ತದೆ. ಎರಡು–ಮೂರು ತಂಡಗಳು ಬಂದರೆ ಖಾಸಗಿ ಸಂಸ್ಥೆಗಳನ್ನು ಪರಿ ಪರಿಯಾಗಿ ಕೋರಿಕೊಂಡು ಸ್ಪರ್ಧೆಗಳನ್ನು ಆಯೋಜಿಸಬೇಕಾದ ಅನಿವಾರ್ಯತೆ ಇದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.