ಬಾಳೆಹೊನ್ನೂರು: ಚಿಕ್ಕಮಗಳೂರು ತಾಲ್ಲೂಕಿನ ಸಾರಗೋಡು ಗ್ರಾಮದ ಕಸ್ಕೆಮನೆ ಸಮೀಪದ ಹೆಂಚಿನಮನೆ ಎಂಬಲ್ಲಿ ತಂದೆ ಮತ್ತು ಮಗಳು ಅಸಹಜ ರೀತಿಯಲ್ಲಿ ಮಂಗಳವಾರ ಸಾವನ್ನಪ್ಪಿದ್ದು, ಇದು ಕೊಲೆ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ತಿಮ್ಮೇಗೌಡ (65) ಮತ್ತು ಸುಚಿತಾ (27) ಮೃತಪಟ್ಟವರು. ತಿಮ್ಮೇಗೌಡರ ಮಗ ಸತೀಶ ಎಂಬಾತ ತನಗೆ ಆಸ್ತಿಯಲ್ಲಿ ತಂದೆ ಪಾಲು ನೀಡುತ್ತಿಲ್ಲ ಎಂದು ಸೋಮವಾರ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ನ್ವಯ ಪೊಲೀಸರು ಅವರಿಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ತಿಮ್ಮೇಗೌಡ ಮನೆಯಿಂದ ಸುಮಾರು 300 ಮೀ ದೂರದಲ್ಲಿರುವ ಮಾವಿನ ಮೆರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ, ಮಗಳು ಸುಚಿತಾ ಅಡಿಗೆ ಮನೆಯಲ್ಲಿ ಮಲಗಿದ ಹಾಗೆಯೇ ಮೃತಪಟ್ಟಿ ಸ್ಥಿತಿಯಲ್ಲಿದ್ದುದು ಕಂಡು ಬಂದಿದೆ.
ಮೃತ ತಿಮ್ಮೇಗೌಡ ಅವರ ಬಚ್ಚಲುಮನೆಯಲ್ಲಿ ಸೌದೆ ಸೇರಿಸಿ ಬೆಂಕಿ ಹಚ್ಚಿಕೊಂಡ ಕುರುಹು ಇದೆ. ಮೃತರ ಹೊಟ್ಟೆ ಹಾಗೂ ಕೈಗಳು ಬಹುತೇಕ ಸುಟ್ಟಿದ್ದರೂ ಮೈಮೇಲಿನ ಒಳ ಚಡ್ಡಿಗೆ ಹಾಗೂ ಕೂದಲಿಗೆ ಯಾವುದೇ ಹಾನಿಯಾಗಿಲ್ಲ. ಅಲ್ಲದೆ ನೇಣು ಕುಣಿಕೆ ಸಹ ಸಡಿಲವಾಗಿದ್ದು ಬಿದ್ದಿಲ್ಲದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಸುಚಿತಾ ಶವದ ತಲೆಯ ಪಕ್ಕದಲ್ಲಿ ಹತ್ತು ರೂಪಾಯಿಗಳ ನೋಟು ಹಾಗೂ ಎಲೆ ಅಡಿಕೆಇಟ್ಟು ಉದುಬತ್ತಿ ಹಚ್ಚಲಾಗಿದೆ. ಆಕೆಯ ಕೈಗೂ ಬೆಂಕಿ ತಗುಲಿದ್ದು ಸುಟ್ಟ ಗಾಯ ಕಾಣುತ್ತಿದೆ. ಆದರೆ ಎಲ್ಲೂ ಬಟ್ಟೆಸುಟ್ಟ ಗುರುತು ಇಲ್ಲದಂತಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಆಲ್ದೂರು ಪೊಲೀಸರನ್ನು ಅಡ್ಡಗಟ್ಟಿದ ಸ್ಥಳೀಯರು ಮೃತನ ಮೇಲೆ ಹಲ್ಲೆ ನಡೆಸಿದ ಪೇದೆಯನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು.
ನಂತರ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಜಿ.ಕೃಷ್ಣರಾಜು ಮೃತರ ಸಂಬಂಧಿಕರನ್ನು ಸಂತೈಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಆಸ್ಪತ್ರೆಗೆ ಸಾಗಿಸಿದರು.