ಬೆಂಗಳೂರಿನ ಧಾವಂತದ ಬದುಕಿನಲ್ಲಿ ಒಪ್ಪೊತ್ತಿನ ಊಟವನ್ನೂ ನೆಮ್ಮದಿಯಾಗಿ ಮಾಡಲು ಸಾಧ್ಯವಿಲ್ಲ. ಕೆಲಸ, ಜಂಜಾಟದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಮಯವಿರುವುದಿಲ್ಲ. ತೀವ್ರತರವಾದ ಕಾಯಿಲೆಗಳು ಬಂದಾಗಲಷ್ಟೇ ಡಾಕ್ಟರ್ ಬಳಿಗೆ ಓಡುವ ನಾವು ಚಿಕ್ಕ ಪುಟ್ಟ ಕಾಯಿಲೆಗಳನ್ನು ಕಡೆಗಣಿಸುತ್ತೇವೆ.
ದೇಹವನ್ನು ಅತಿಯಾಗಿ ಭಾದಿಸುವ ನೋವುಗಳಲ್ಲಿ ಹಲ್ಲು ನೋವು ಕೂಡ ಒಂದು. ಹಲ್ಲುನೋವು ಕೆಲವೊಮ್ಮೆ ತಾನಾಗಿಯೇ ಗುಣ ಹೊಂದುತ್ತದೆ. ಕೆಲವೊಮ್ಮೆ ಡಾಕ್ಟರ್ ಬಳಿ ಹೋಗದೇ ನೋವು ನಿವಾರಣೆಯಾಗಲು ಸಾಧ್ಯವೇ ಇಲ್ಲ.
ಬೆಳಿಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗಬೇಕು, ಸಂಜೆ ಟ್ರಾಫಿಕ್ ಕಿರಿಕಿರಿ ಒಮ್ಮೆ ಮನೆಗೆ ಸೇರಿದರೆ ಸಾಕು ಎನ್ನಿಸಿಬಿಡುತ್ತದೆ. ಆಸ್ಪತ್ರೆಗೆ ಹೋಗಲು ಸಮಯ ಎಲ್ಲಿದೆ?
ಇನ್ನು ಮುಂದೆ ನೀವು ಈ ಬಗ್ಗೆ ಚಿಂತಿಸಬೇಕಿಲ್ಲ. ಒಂದು ಕರೆ ಮಾಡಿ ನಿಮ್ಮ ಹೆಸರು ನೋಂದಾಯಿಸಿಕೊಂಡರೆ ಸಾಕು ದಂತ ವೈದ್ಯರು ನಿಮ್ಮ ಮನೆ ಬಾಗಿಲಿಗೇ ಬರುತ್ತಾರೆ.
ಹಲ್ಲು ನೋವಿನಿಂದ ಬಳಲುವವರಿಗೆ ಮನೆಬಾಗಿಲಿನಲ್ಲಿಯೇ ಚಿಕಿತ್ಸೆ ನೀಡುವ ಉದ್ದೇಶದಿಂದ ‘ವಾತ್ಸಲ್ಯ ಬಾಯಿ ಆರೋಗ್ಯ ಕೇಂದ್ರ’ವೂ ಮನೆಬಾಗಿಲಿಗೆ ತುರ್ತು ದಂತ ಆರೋಗ್ಯ ಸೇವೆ ಒದಗಿಸುತ್ತಿದೆ. ವಾತ್ಸಲ್ಯ ಸಂಸ್ಥೆಯ ಸ್ಥಾಪಕ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಶ್ರೀವತ್ಸ ಭಾರದ್ವಾಜ್ ಕೂಡ ದಂತ ವೈದ್ಯರು.
1996ರಲ್ಲಿ ವಿದ್ಯಾರ್ಥಿಯಾಗಿದ್ದ ಶ್ರೀವತ್ಸ ಅವರಿಗೆ ಮನೆ ಬಾಗಿಲಿಗೆ ಹೋಗಿ ಹಲ್ಲಿನ ಚಿಕಿತ್ಸೆ ನೀಡಬೇಕು. ಅದರಲ್ಲೂ ಮುಖ್ಯವಾಗಿ ಅಂಗವಿಕಲರಿಗೆ ಸೇವೆಯನ್ನು ಆರಂಭಿಸಬೇಕು ಎಂಬ ಕನಸಿತ್ತು.
ಅಂಗವಿಕಲರು ಓಡಾಡುವುದು ಕಷ್ಟ. ವ್ಹೀಲ್ ಛೇರ್ನಲ್ಲಿ ಬಂದರೂ ಮೊದಲನೇ ಮಹಡಿಯಲ್ಲಿ ಕ್ಲಿನಿಕ್ ಇದ್ದರೆ ಲಿಫ್ಟ್ ಹತ್ತಬೇಕು. ಇದು ಅವರಿಗೆ ಕಷ್ಟ ಎಂದು ಚಿಂತಿಸಿದ ಶ್ರೀವತ್ಸ, ಕ್ಲಿನಿಕ್ಗೆ ಬರಲು ಸಾಧ್ಯವಿಲ್ಲದವರಿಗೆ ಮನೆ ಬಾಗಿಲಿಗೇ ಹೋಗಿ ಚಿಕಿತ್ಸೆ ನೀಡಬೇಕು ಎಂದುಕೊಂಡರು. ತಮ್ಮ ಕೋರ್ಸ್ ಮುಗಿದ ಬಳಿಕ ಮನೆ ಮನೆಗೆ ಹೋಗಿ ಹಲ್ಲು ನೋವಿಗೆ ಚಿಕಿತ್ಸೆ ಪರಿಹಾರ ನೀಡಲಾರಂಭಿಸಿದರು.
ನಂತರದ ದಿನದಲ್ಲಿ ಇಂಟರ್ನ್ಯಾಷನಲ್ ಆಸೋಸಿಯೇಷನ್ ಫಾರ್ ಡಿಸೆಬಿಲಿಟಿ ಆ್ಯಂಡ್ ಓರಲ್ ಹೆಲ್ತ್ಗೆ ಭಾರತದ ಕೌನ್ಸಿಲ್ ಮೆಂಬರ್ ಆಗಿ ಆಯ್ಕೆಯಾದರು. ಆಗ ಬೇರೆ ಬೇರೆ ದೇಶಕ್ಕೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಪದ್ಧತಿಯನ್ನು ನೋಡಿ ಬಂದರು.
ಇತರ ದೇಶಗಳಲ್ಲಿ ತಾವು ಕಂಡ ಚಿಕಿತ್ಸಾ ಮಾದರಿಯನ್ನು ಇಲ್ಲಿಯೂ ಆರಂಭಿಸಲು ಆಲೋಚಿಸಿದರು. ತಮ್ಮ ಜೊತೆಗಿದ್ದ 25 ಜನರ ತಂಡದೊಂದಿಗೆ ಸೇವೆ ಆರಂಭಿಸಿದರು. ನೀವು ನಗರದ ಯಾವುದೇ ಭಾಗದಲ್ಲಿದ್ದರೂ ನಿಮಗೆ ದಂತ ವೈದ್ಯಕೀಯ ಸೇವೆ ಒದಗಿಸಲು ಈ ತಂಡ ಸಿದ್ಧ.
ವೈಶಿಷ್ಟ್ಯಗಳು
ಸುಮಾರು 25 ಮಂದಿ ಇರುವ ಇವರ ತಂಡದಲ್ಲಿ 15 ಮಂದಿ ವೈದ್ಯರು ಹಾಗೂ 10 ಮಂದಿ ಸಹಾಯಕರಿದ್ದಾರೆ. 24/7 ಸರ್ವಿಸ್ ನೀಡುವ ವ್ಯಾತ್ಸಲ್ಯ ಕೇಂದ್ರದ ಈ ಸೇವೆಯಲ್ಲಿ ರಾತ್ರಿ 2.30ಕ್ಕೆ ಕರೆ ಮಾಡಿದರೂ ನಿಮ್ಮ ಮನೆ ಮುಂದೆ ವೈದ್ಯರು ಹಾಜರಾಗುತ್ತಾರೆ. ಹಲ್ಲಿನ ಚಿಕಿತ್ಸೆಗೆ ಬೇಕಾಗುವ ಉತ್ತಮ ದರ್ಜೆಯ ಹಾಗೂ ಮುಂಚೂಣಿಯಲ್ಲಿರುವ ತಂತ್ರಜ್ಞಾನವುಳ್ಳ ಉಪಕರಣಗಳು ಇವರ ಬಳಿ ಲಭ್ಯವಿದೆ.
ಡೆಂಚರ್ಸ್, ಕ್ಲಿನಿಂಗ್, ಫಿಲ್ಲಿಂಗ್, ರೂಟ್ ಕೆನಾಲ್ನಂತಹ ಎಲ್ಲಾ ಸೌಲಭ್ಯಗಳು ಲಭ್ಯವಿದೆ. ₹100 ನೋಂದಣಿ ಶುಲ್ಕ. ₹200 ಕನ್ಸಲ್ಟೆನ್ಸಿ ಶುಲ್ಕ. ವಾತ್ಸಲ್ಯ ಬಾಯಿ ಆರೋಗ್ಯ ಕೇಂದ್ರದ ಇನ್ನೊಂದು ವಿಶೇಷ ಎಂದರೆ ಡ್ರಿಲ್ಲಿಂಗ್ ಮಾಡದೇ, ಹನಿ ರಕ್ತ ಕೂಡ ಬರದಂತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಫಿಲ್ಲಿಂಗ್ ಮಾಡುವುದು. ಇಷ್ಟೇ ಅಲ್ಲದೆ ₹3,500ನ ವಾರ್ಷಿಕ ಸದಸ್ಯತ್ವ ಯೋಜನೆ ಕೂಡ ವಾತ್ಸಲ್ಯದಲ್ಲಿದೆ. ವ್ಯಾತ್ಸಲ್ಯ ಬಾಯಿ ಆರೋಗ್ಯ ಕೇಂದ್ರದ ತಜ್ಞರು ನಿಮ್ಮ ಮನೆ ಬಾಗಿಲಿಗೆ ಬರಲು ಕರೆ ಮಾಡಿ: 7899399955
ಉತ್ತಮ ಪ್ರತಿಕ್ರಿಯೆ
‘ಹಿಂದೆ ಡಾಕ್ಟರ್ಗಳು ನಮ್ಮ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಚಿಕ್ಕ ಪುಟ್ಟ ಕಾಯಿಲೆಯಿಂದ ದೊಡ್ಡ ಕಾಯಿಲೆಯವರೆಗೂ ಚಿಕಿತ್ಸೆ ಪಡೆಯಲು ನಾವೇ ಆಸ್ಪತ್ರೆಗೆ ಹೋಗಬೇಕಿದೆ. ಹಿಂದಿನ ಆ ಪದ್ಧತಿ ಮತ್ತೆ ಮರುಕಳಿಸಬೇಕು ಎಂಬ ಉದ್ದೇಶ ನನ್ನದು.
ನಮ್ಮ ವಾತ್ಸಲ್ಯ ಡೆಂಟಲ್ ಕ್ಲಿನಿಕ್ ವಿಶ್ವದ ಅತ್ಯುತ್ತಮ ಡೆಂಟಲ್ ಕ್ಲಿನಿಕ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈವರೆಗೆ ನಾವು ಚಿಕಿತ್ಸೆ ನೀಡಿದ ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಮ್ಮ ಸೇವೆಯನ್ನು ದೇಶದಾದ್ಯಂತೆ ವಿಸ್ತರಿಸುತ್ತೇವೆ ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.