ಬೆಂಗಳೂರು: ಬೆಸ್ಕಾಂ 24x7 ಸಹಾಯವಾಣಿಗೆ (1912) ದೂರು ನೀಡಿದ 35 ನಿಮಿಷಗಳಲ್ಲೇ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಸ್ಕಾಂ ಕೇಂದ್ರ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಸಹಾಯವಾಣಿಯ ಕಾರ್ಯವೈಖರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಹಾಯವಾಣಿಯಲ್ಲಿ ಪ್ರತಿ ಪಾಳಿಯಲ್ಲಿ 45 ಮಂದಿಯಂತೆ ಮೂರು ಪಾಳಿಯಲ್ಲಿ 150 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ 30 ಮಂದಿ ಹಾಗೂ ರಾಜಾಜಿನಗರದ ಕಚೇರಿಯಲ್ಲಿ 15 ಮಂದಿ ಸಿಬ್ಬಂದಿ ಇದ್ದಾರೆ. ಗ್ರಾಹಕರು ಕರೆ ಮಾಡಿ ದೂರು ಸಲ್ಲಿಸಬಹುದು ಅಥವಾ ಎಸ್ಎಂಎಸ್ ಮೂಲಕವೂ ದೂರು ಸಲ್ಲಿಸಬಹುದು ಎಂದು ಅವರು ಹೇಳಿದರು.