ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು ಚರಿತ್ರೆ: ‘ತಪ್ಪು’ಗಳ ಸಾಮ್ರಾಜ್ಯ!

ಪಠ್ಯದಲ್ಲಿ ಒಂದೇ ಧರ್ಮದ ವೈಭವೀಕರಣ, ಇತಿಹಾಸ ಕಡೆಗಣನೆ–ಆರೋಪ
Last Updated 20 ಸೆಪ್ಟೆಂಬರ್ 2015, 19:52 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಟನ್ನಿನ ಸಮಾಜವಾದಿ, ಮಾನವಹಕ್ಕುಗಳ ಹೋರಾಟಗಾರ್ತಿ ಆ್ಯನಿ ಬೆಸೆಂಟ್‌ ಭಾರತಕ್ಕೆ ಬಂದಿದ್ದು ಯಾವಾಗ?
ಇತಿಹಾಸದಲ್ಲಿ ದಾಖಲಾಗಿರುವ ಪ್ರಕಾರ 1898ರಲ್ಲಿ. ಆದರೆ, ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕದ ಪ್ರಕಾರ, ಅದಕ್ಕಿಂತಲೂ ಮೊದಲೇ ಅವರು ಭಾರತಕ್ಕೆ ಬಂದಿದ್ದಾರೆ.

ಕನ್ನಡದಲ್ಲಿ ಮುದ್ರಣವಾಗಿರುವ ಇತಿಹಾಸ ಪಠ್ಯದ (ಭಾರತದ ಇತಿಹಾಸ) 182ನೇ ಪುಟದಲ್ಲಿ ಒಂದು ಸಾಲು ಹೀಗಿದೆ. ಆ್ಯನಿ ಬೆಸೆಂಟ್‌ 1882ರಲ್ಲಿ ಮದ್ರಾಸ್‌ ಸಮೀಪದ ಅದ್ಯಾರ್‌ನಲ್ಲಿ ಥಿಯೋಸೋಫಿಕಲ್ ಸೊಸೈಟಿ ಸ್ಥಾಪಿಸಿದರು!

ಆದರೆ, ಆ್ಯನಿ ಬೆಸೆಂಟ್‌ ಅವರು ಸೊಸೈಟಿಗೆ ಸೇರ್ಪಡೆಗೊಂಡಿದ್ದು  1889ರ ಮೇ 21ರಂದು ಎಂಬ ಮಾಹಿತಿ ಥಿಯೋಸೋಫಿಕಲ್‌ ವೆಬ್‌ ಸೈಟ್‌ನಲ್ಲಿದೆ.
ಇತಿಹಾಸ ಪಠ್ಯ ಪುಸ್ತಕದಲ್ಲಿನ ಮತ್ತೊಂದು  ಮಾಹಿತಿ: ಲಾರ್ಡ್‌ ಕರ್ಜನ್‌ 1904ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಸ್ಥಾಪಿಸಿದನು (ಪುಟ ಸಂಖ್ಯೆ 19).
ಆದರೆ, ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆರಂಭವಾಗಿದ್ದು 1861ರಲ್ಲಿ. ಲಾರ್ಡ್‌ ಕ್ಯಾನಿಂಗ್‌ ಆಗಿನ ವೈಸ್‌ರಾಯ್‌ ಆಗಿದ್ದ. ಕರ್ಜನ್‌, ಈ ಇಲಾಖೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದ. ನಾಣ್ಯ, ಶಾಸನ, ಉತ್ಖನನ ಮತ್ತು ಸ್ಮಾರಕಗಳ ಸಂರಕ್ಷಣೆ ಜವಾಬ್ದಾರಿಯನ್ನು ಇಲಾಖೆಗೆ ವಹಿಸಿದ್ದ.

ಇನ್ನೊಂದು ಉದಾಹರಣೆ– ಹಂಪಿ, ಐಹೊಳೆ, ಪಟ್ಟದಕಲ್ಲು  ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿವೆ (ಪುಟ ಸಂಖ್ಯೆ 5) ಎಂದು ಇತಿಹಾಸ ಪಠ್ಯ ಹೇಳುತ್ತದೆ. ವಾಸ್ತವದಲ್ಲಿ ಐಹೊಳೆ ವಿಶ್ವಪಾರಂಪರಿಕ ಪಟ್ಟಿಗೆ ಸೇರಿಲ್ಲ.

ಇವು ಕೆಲವು ಉದಾಹರಣೆಗಳಷ್ಟೇ. ಇಂತಹ ಹಲವು ತಪ್ಪುಗಳು ಇತಿಹಾಸ ಪಠ್ಯಪುಸ್ತಕದಲ್ಲಿದೆ. ಎರಡು ವರ್ಷ ಗಳಿಂದ ಇತಿಹಾಸ ಉಪನ್ಯಾಸಕರು ಇದೇ ಪುಸ್ತಕವನ್ನು ಆಧಾರ ವಾಗಿಟ್ಟು ಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ.

ಇಲಾಖೆ ವಿತರಿಸಿದ ಪಠ್ಯದಲ್ಲಿರುವ ಅಂಶಗಳನ್ನು ಮಾತ್ರ ಬೋಧನೆ ಮಾಡಬೇಕು ಎಂಬ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸೂಚನೆ, ಇತಿಹಾಸ ಉಪನ್ಯಾಸಕರನ್ನು ಇನ್ನಷ್ಟು ಪೇಚಿಗೆ ಸಿಲುಕಿಸಿದೆ.

ಅಂಶಗಳ ಬಗ್ಗೆಯೂ ಆಕ್ಷೇಪ: ಮಾಹಿತಿಗಳ ತಪ್ಪು ಒಂದೆಡೆಯಾದರೆ,  ಇತಿಹಾಸದ ಘಟನಾವಳಿಗಳ ಬಗ್ಗೆ ಪಠ್ಯದಲ್ಲಿರುವ ವಿವರಗಳ ಬಗ್ಗೆಯೂ ಉಪನ್ಯಾಸಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. 

ಪಠ್ಯ ಸಿದ್ಧಪಡಿಸಿದವರು ಚರಿತ್ರೆಯ ವಿಶಾಲ ವ್ಯಾಪ್ತಿಯ ಅಧ್ಯಯನ, ಸಮಕಾಲೀನ ವಿಷಯಗಳ ಅಧ್ಯಯನ ಮಾಡಿಲ್ಲ. ವಾಸ್ತವ ಇತಿಹಾಸವನ್ನು ಸ್ಪಷ್ಟವಾಗಿ ಬಿಂಬಿಸಿಲ್ಲ. ನಿರ್ದಿಷ್ಟ ಧರ್ಮವನ್ನು ವೈಭವೀಕರಿಸಲಾಗಿದೆ. ಅದರಲ್ಲೂ ಹಿಂದೂ ಧರ್ಮದ ಬಗ್ಗೆಯೇ ಹೆಚ್ಚು ಪ್ರಸ್ತಾಪಗಳಿವೆ ಎಂಬುದು ಉಪನ್ಯಾಸಕರ ಆರೋಪ.

ತಮ್ಮ ಆರೋಪವನ್ನು ಸಮರ್ಥಿಸಿಕೊಳ್ಳಲು ಉಪನ್ಯಾಸಕರು ಮಾಡುವ ವಾದ ಹೀಗೆ...
– ‘ಪಠ್ಯ ಪುಸ್ತಕದ ಪುಟ ಸಂಖ್ಯೆ 2 ರಲ್ಲಿ ಸಿಂಧೂ ನಾಗರಿಕತೆಯೊಂದಿಗೆ ವೈದಿಕ ಸಂಸ್ಕೃತಿಯನ್ನು ಮಹಾನ್‌ ನಾಗರಿಕತೆ ಎಂದು ಬಿಂಬಿಸಲಾಗಿದೆ. ಆದರೆ, ವೈದಿಕ ಸಂಸ್ಕೃತಿಯಲ್ಲಿ ನಾಗರಿಕತೆಯ ಲಕ್ಷಣಗಳನ್ನು ಇತಿಹಾಸಕಾರರು ಈವರೆಗೆ ಗುರುತಿಸಿಲ್ಲ’.

ಬೋಧಕರು ನೀಡುವ ಮತ್ತೊಂದು ಉದಾಹರಣೆ ಇದು...
‘ಇಂದಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕತ್ತಲೆಯುಗದಲ್ಲಿದ್ದಾಗ ಭಾರತವು ಬೌದ್ಧಿಕ ಮತ್ತು ಅಧ್ಯಾತ್ಮಿಕ ವೈಭವದ ಉತ್ತುಂಗದಲ್ಲಿತ್ತು ಎಂಬ ಸಾಲು ಐದನೇ ಪುಟದಲ್ಲಿದೆ. ಇದು ಸಿನಿಕತನದ ಹೇಳಿಕೆ. ಅನ್ಯ ರಾಷ್ಟ್ರಗಳನ್ನು ತೆಗಳಿ ನಮ್ಮ  ರಾಷ್ಟ್ರವನ್ನು ವೈಭವೀಕರಿಸುವುದರಿಂದ ವಿದ್ಯಾರ್ಥಿ ಗಳಲ್ಲಿ ದ್ವೇಷ, ಅಸಹಿಷ್ಣುತೆ ಬೆಳೆಸಿದಂತಾ ಗುತ್ತದೆ’.

‘ಇಲಾಖೆಯು ಸಮಗ್ರ ಮತ್ತು ನಿರಂತರ ಮೌಲ್ಯಮಾಪನ (ಸಿ.ಸಿ.ಇ) ವ್ಯವಸ್ಥೆಗೆ ಒಳಪಟ್ಟ ಮೇಲೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಮಾದರಿಯದೇ ಪಠ್ಯ ಕ್ರಮ ಇರಬೇಕು ಎಂದು ಹೊಸ ಪಠ್ಯ ರಚನೆ ಮಾಡಲಾಗಿದೆ. ಆದರೆ, ಅದು ಎನ್‌ಸಿಇಆರ್‌ಟಿ ಮಾದರಿಯ ಶೇ 10 ರಷ್ಟು ಲಕ್ಷಣಗಳನ್ನೂ ಒಳಗೊಂಡಿಲ್ಲ. ಈ ಪುಸ್ತಕ ಗೈಡ್‌ನ ಪ್ರತಿರೂಪದಂತಿದೆ’ ಎಂದು  ಇತಿಹಾಸ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಪಡೆಯುವುದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
*
ಈ ಪಠ್ಯಪುಸ್ತಕವು ಕನಿಷ್ಠ ಪಕ್ಷ ಎನ್‌ಸಿಇಆರ್‌ಟಿ ಮತ್ತು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಮಾನದಂಡ­ಗಳನ್ನೂ  ಅಳವಡಿಸಿಕೊಂಡಿಲ್ಲ.
–ಪ್ರದೀಪ್‌ ಕುಮಾರ್‌,
ಪಿ.ಯು. ಇತಿಹಾಸ ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT