ಹೈದರಾಬಾದ್ (ಪಿಟಿಐ): ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಎನ್ ಚಂದ್ರಬಾಬು ನಾಯ್ಡು ಅವರನ್ನು ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಗುರುವಾರ ನೇಮಿಸಿದ್ದಾರೆ.
ಅದಕ್ಕೂ ಮೊದಲು ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕರ ನಿಯೋಗವೊಂದು ಆಂಧ್ರ ಪ್ರದೇಶದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರನ್ನುಇಲ್ಲಿನ ರಾಜಭವನದಲ್ಲಿ ಭೇಟಿ ಮಾಡಿ ಸರ್ಕಾರ ರಚಿಸಲು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಆಹ್ವಾನಿಸುವಂತೆ ಕೋರಿತು.
ಎನ್. ಚಂದ್ರಬಾಬು ನಾಯ್ಡು ಅವರನ್ನು ಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿರುವ ಪತ್ರವನ್ನು ನಿಯೋಗವು ಇದೇ ವೇಳೆ ರಾಜ್ಯಪಾಲರಿಗೆ ನೀಡಿತು.
ತಿರುಪತಿಯಲ್ಲಿ ಬುಧವಾರ ನಡೆದ ಟಿಡಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯ್ಡು ಅವರನ್ನು ಸರ್ವಾನುಮತದಿಂದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.
‘ಸರ್ಕಾರ ರಚಿಸಲು ಚಂದ್ರಬಾಬು ನಾಯ್ಡು ಅವರಿಗೆ ಆಹ್ವಾನ ನೀಡುವಂತೆ ರಾಜ್ಯಪಾಲರನ್ನು ಕೋರಿದ್ದೇವೆ’ ಎಂದು ನಿಯೋಗದಲ್ಲಿದ್ದ ಹಿರಿಯ ಶಾಸಕ ಯನಮಾಲಾ ರಾಮಕೃಷ್ಣುಡು ಅವರು ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಚಂದ್ರಬಾಬು ನಾಯ್ಡು ಅವರು ಜೂನ್ 8ರಂದು ವಿಜಯವಾಡ ಮತ್ತು ಗುಂಟೂರು ಜಿಲ್ಲೆಯ ಮಧ್ಯದಲ್ಲಿರುವ ನಾಗಾರ್ಜುನ ನಗರದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 175 ಸ್ಥಾನಗಳ ಪೈಕಿ ಟಿಡಿಪಿ 102ರಲ್ಲಿ ಜಯ ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.