ಚಿಕ್ಕಬಳ್ಳಾಪುರ: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದೆ ತಡ, ಸ್ನೇಹಿತರು, ಶಿಕ್ಷಣ ತಜ್ಞರು ಮತ್ತು ಪ್ರಾಧ್ಯಾಪಕರಿಂದ ಸಲಹೆ, ಸೂಚನೆ ಪಡೆಯುತ್ತಿರುವ ವಿದ್ಯಾರ್ಥಿಗಳು ಯಾವ ಕಾಲೇಜು ಸೂಕ್ತ ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ 77ಕ್ಕೂ ಹೆಚ್ಚು ಕಾಲೇಜುಗಳು ಇದ್ದು, ಎಲ್ಲ ಕಾಲೇಜುಗಳಲ್ಲಿ ಪ್ರವೇಶ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಪ್ರಮುಖ ಕಾಲೇಜುಗಳಿಂದ ಅರ್ಜಿಗಳನ್ನು ತಂದಿರುವ ಪೋಷಕರು ಮತ್ತು ವಿದ್ಯಾರ್ಥಿಗಳು ಯಾವ ಕಾಲೇಜು ಸೂಕ್ತ ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ ಮತ್ತು ಕಲಾ ವಿಭಾಗಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಎಂಜಿನಿಯರ್ ಅಥವಾ ವೈದ್ಯರಾಗುವ ಕನಸು ಕಟ್ಟಿಕೊಂಡಿರುವ ಕೆಲ ವಿದ್ಯಾರ್ಥಿಗಳು ವಿಜ್ಞಾನ ಕಾಲೇಜು ಸೇರಲು ಬಯಸುತ್ತಿದ್ದಾರೆ.
ಗಣಿತ, ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಮತ್ತು ಚಾರ್ಟಡ್ ಅಕೌಂಟೆಂಟ್ ಆಗುವ ಹೆಬ್ಬಯಕೆ ಹೊಂದಿರುವ ವಿದ್ಯಾರ್ಥಿಗಳು ವಾಣಿಜ್ಯ ಕಾಲೇಜುಗಳತ್ತ ಮುಖ ಮಾಡಿದ್ದರೆ. ಇತಿಹಾಸ, ಭಾಷೆ ಮುಂತಾದವುಗಳ ಬಗ್ಗೆ ಆಸಕ್ತಿ ಹೊಂದಿದವರು ಕಲಾ ಕಾಲೇಜಿನಿಂದ ಅರ್ಜಿಗಳನ್ನು ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಮೂರು ವಿಭಾಗಗಳಿಗೂ ಕಾಲೇಜುಗಳಿದ್ದು, ಎಲ್ಲ ಸೌಲಭ್ಯಗಳನ್ನು ಹೊಂದಿವೆ.
ವಿಜ್ಞಾನ ಕಾಲೇಜುಗಳಲ್ಲಿ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (ಪಿಸಿಎಂಬಿ) ಅಥವಾ ಕಂಪ್ಯೂಟರ್ ವಿಜ್ಞಾನ (ಪಿಸಿಎಂಎಸ್) ವಿಷಯ ಕಲಿಯಲು ಅವಕಾಶವಿದೆ. ವಾಣಿಜ್ಯ ಕಾಲೇಜುಗಳಲ್ಲಿ ಇತಿಹಾಸ, ವಾಣಿಜ್ಯ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ (ಎಚ್ಬಿಎಸಿಎಸ್) ಮತ್ತು ಅರ್ಥಶಾಸ್ತ್ರ (ಎಚ್ಇಬಿಎ) ವಿಷಯಗಳ ಬಗ್ಗೆ ವ್ಯಾಸಂಗ ಮಾಡಬಹುದು. ಕಲಾ ಕಾಲೇಜಿನಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರ ಕಲಿಕೆಗೆ ಅವಕಾಶವಿದೆ.