ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ ವಿಸ್ಮಯದ ಎರಡು ಪ್ರಶ್ನೆಗಳು

Last Updated 18 ಜೂನ್ 2016, 19:30 IST
ಅಕ್ಷರ ಗಾತ್ರ

1. ‘ಭೂ ಗರ್ಭ’–ಏನು ಮಹತ್ವ?
ನಮ್ಮ ಪೃಥ್ವಿಯನ್ನು ಸುರಕ್ಷಿತ ಜೀವಲೋಕವನ್ನಾಗಿ ಉಳಿಸಿರುವುದೇ ಭೂಗರ್ಭದ ಅತ್ಯಂತ ಪ್ರಮುಖ ಮಹತ್ವ. ನಮಗೆ ಆಧಾರವಾಗಿರುವ ಭೂ ನೆಲದಿಂದ ಮೂರು ಸಾವಿರ ಕಿಲೋ ಮೀಟರ್‌ ಆಳದಲ್ಲಿ ಸಂಪೂರ್ಣ ಅಗೋಚರವಾಗಿದ್ದು, ಹಾಗಿದ್ದೂ ಭೂಮಿಯ ಜೀವಜಾಲವನ್ನೂ, ಅದಕ್ಕೆ ಪೋಷಕವಾದ ಇತರ ಸರ್ವ ವ್ಯವಸ್ಥೆಗಳನ್ನೂ ನೇರವಾಗಿಯೋ ಪರೋಕ್ಷವಾಗಿಯೋ ಕಾಪಾಡುತ್ತಿರುವ ‘ಭೂ ಅಂಗ’ ಇದೇ! ಹಾಗಾಗಿರುವುದು ಹೇಗೆಂದು ಯೋಚಿಸುವ ಭೂ ಸ್ವಾಸ್ಥದಲ್ಲಿ ಇಷ್ಟೆಲ್ಲ ಪ್ರಾಮುಖ್ಯ ಪಡೆದಿರುವ ಭೂಗರ್ಭದ ವಿಶಿಷ್ಟ ವಿಸ್ಮಯಕರ ಸ್ವರೂಪ– ಸಂಯೋಜನೆಗಳನ್ನು ಗಮನಿಸಿ:

ಪ್ರಸ್ತುತ ಜಲಭರಿತ ಸುಂದರ ಜೀವಲೋಕವಾಗಿರುವ ನಮ್ಮ ಭೂಮಿ (ಚಿತ್ರ–1) ಅವತರಿಸಿದ್ದು ಈಗ್ಗೆ ಸುಮಾರು ನಾಲ್ಕುನೂರ ಐವತ್ತು ಕೋಟಿ ವರ್ಷ ಹಿಂದೆ. ಆದರೆ ಭೂಗರ್ಭ ರೂಪುಗೊಂಡದ್ದು ಈಗ್ಗೆ ಒಂದು ನೂರು ಕೋಟಿ ವರ್ಷ ಹಿಂದೆ ಅಷ್ಟೆ. ಆ ಮೊದಲು ಜನನ ಕಾಲದ ಬಿಸಿಯಿಂದಲೂ, ಅವರತ ಕ್ಷುದ್ರಗ್ರಹ– ಉಲ್ಕೆಗಳ ಧಾಳಿಯಿಂದಲೂ (ಚಿತ್ರ–4) ಇಡೀ ಭೂ ದ್ರವ್ಯ ಕರಗಿ ಕರಗಿ  ಕಡೆಗೆ ಈಗ್ಗೆ ಒಂದು ಶತಕೋಟಿ ವರ್ಷ ಹಿಂದಿನ ಸುಮಾರಿಗೆ ತಣಿಯಲಾರಂಭಿಸಿತು. ಆ ವೇಳೆಗೆ ಭೂ ದ್ರವ್ಯದಲ್ಲಿದ್ದು ಸ್ವತಂತ್ರವಾಗಿದ್ದ ‘ಭಾರ ಧಾತು’ಗಳು ಗುರುತ್ವದಿಂದಾಗಿ ಭೂ ಕೇಂದ್ರದತ್ತ ಇಳಿದು ಸಂಗ್ರಹಗೊಂಡು, ಹಗುರ ಧಾತುಗಳು ಮೇಲೆ ಮೇಲೆ ಉಳಿದು ಕಡೆಗೆ ಭೂಮಿ ಈಗಿನ ಪದರ ಪದರ ಸಂರಚನೆ ಪಡೆಯಿತು. ಧರೆಯ ಪ್ರಧಾನ ಪದರಗಳಾದ ಒಳಗರ್ಭ (ಚಿತ್ರ–2ಎ), ಹೊರ ಗರ್ಭ (ಚಿತ್ರ–2ಬಿ), ಅದರ ಸುತ್ತಲಿನ ಕವಚ (ಚಿತ್ರ–2ಸಿ) ಮತ್ತು ಅತ್ಯಂತ ಹೊರಗಿನ ತೊಗಟೆ ಎಂದರ ಭೂ ನೆಲ ರೂಪುಗೊಂಡದ್ದೇ ಹೀಗೆ. ಸರಾಸರಿ 12,750 ಕಿಮೀ ವ್ಯಾಸದ ಭೂಮಿಯಲ್ಲಿ ಒಳಗರ್ಭ 1210 ಕಿಮೀ ತ್ರಿಜ್ಯದ ಘನ ಸ್ಥಿತಿಯ ಗೋಳ.

ಹೊರಗರ್ಭದ ದಪ್ಪ 2270 ಕಿಮೀ ಕವಚದ ದಪ್ಪ 2900 ಕಿಮೀ ಉಳಿದದ್ದೇ ತೆಳ್ಳನ್ನ ಸಿಪ್ಪೆಯಂತೆ ಅತ್ಯಂತ ಹೊರಗೆ ಇಡೀ ಧರೆಯನ್ನಾವರಿಸಿರುವ ಗಟ್ಟಿ ನೆಲದ ತೊಗಟೆ.
ಪ್ರಧಾನವಾಗಿ ಕಬ್ಬಿಣ ಮತ್ತು ನಿಕ್ಕಲ್‌ ಲೋಹಗಳ ಮಿಶ್ರಣದ ಗಟ್ಟಿ ಗೋಳವಾಗಿರುವ ಒಳಗರ್ಭದ ತಾಪಮಾನ 5500 ಡಿಗ್ರಿ ಸೆಲ್ಷಿಯಸ್‌–ಸರಿಸುಮಾರು ನಮ್ಮ ಸೂರ್ಯನ ಮೇಲ್ಮೈ ತಾಪಮಾನದಷ್ಟು. ಅಲ್ಲಿನ ಒತ್ತಡ ಭೂ ವಾಯುಭಾರದ ಮೂರೂವರೆ ದಶಲಕ್ಷ ಮಡಿ! ಹೊರಗರ್ಭದ್ದೂ ಕಬ್ಬಿಣದ್ದೇ ದ್ರವ ಸ್ಥಿತಿಯ ಸಂಯೋಜನೆ. ಒಳಗರ್ಭ ಮತ್ತು ಹೊರಗರ್ಭ ಎರಡೂ ಸೇರಿ ಒಟ್ಟು ಭೂರ್ಗಭದ ಗಾತ್ರ ‘ಮಂಗಳ ಗ್ರಹ’ದಷ್ಟಾಗುತ್ತದೆ (ಚಿತ್ರ–5). ಇಡೀ ಭೂಮಿಯ ಶೇ. 30 ರಷ್ಟು ದ್ರವ್ಯರಾಶಿ ಭೂಗರ್ಭದಲ್ಲೇ ಅಡಕವಾಗಿದೆ!
ಅದೆಲ್ಲ ಇರಲಿ, ಭೂಗರ್ಭ ಧರೆಯನ್ನು ಸಂರಕ್ಷಿಸುತ್ತಿರುವುದು ಹೇಗೆ?

ಭೂಮಿಯ ಒಳಚರನೆಯ ಒಂದು ವಿಸ್ಮಯ ಏನೆಂದರೆ ಭೂಗರ್ಭ ಭೂ ಕವಚದೊಡನೆ ದೃಢವಾಗಿ ಬಂಧಗೊಂಡಿಲ್ಲ. ಅಷ್ಟೇ ಅಲ್ಲದೆ ಭೂ ಗರ್ಭದಲ್ಲಿನ ಶಾಖ ಸಂವಹನ ಪ್ರವಾಹಗಳು ಕವಚದಲ್ಲಿನ ಪ್ರವಾಹಗಳಿಗಿಂತ ಹೆಚ್ಚು ಪ್ರಬಲವಾಗಿವೆ. ಈ ವ್ಯತ್ಯಾಸದಿಂದಾಗಿ ಧರೆಯೊಳಗೇ ಅಡಕಗೊಂಡಿದ್ದರೂ ಕೂಡ ಕಬ್ಬಿಣ ಮತ್ತಿತರ ಕಾಂತೀಯ ವಸ್ತುಗಳೇ ತುಂಬಿರುವ ಭೂಗರ್ಭ ಇಡೀ ಭೂಮಿಗಿಂತ ಸ್ವಲ್ಪವೇ ಸ್ವಲ್ಪ ಅಧಿಕ ವೇಗದಲ್ಲಿ ಸ್ವಭ್ರಮಣ ನಡೆಸಿದೆ. ಇದರ ಪರಿಣಾಮವಾಗಿ ಇಡೀ ಧರೆಗೇ ಕಾಂತ ಗುಣ ಪ್ರಾಪ್ತವಾಗಿ ಅಗೋಚರ ಕಾಂತೀಯ ಬಲ ರೇಖೆಗಳು ಭೂಮಿಯನ್ನು ಪರಿವರಿಸಿವೆ (ಚಿತ್ರ–3). ಹಾಗೆಂದರೆ ವಾಯುಮಂಡಲದಂತೆಯೇ– ಆದರೆ ಅದರಾಚೆಗೂ ಹಲವಾರು ಸಾವಿರ ಕಿಮೀ ದೂರದವರೆಗೆ– ‘ಕಾಂತಗೋಳ’ವೊಂದು ಧರೆಯನ್ನಾವರಿಸಿ ನಿಂತಿದೆ (ಚಿತ್ರ–6); ವಿಶಿಷ್ಟ ರಕ್ಷಣಾ ಕವಚವಾಗಿದೆ.

ಭೂಕಾಂತ ಕವಚಕ್ಕೆ ಒಂದು ಅದ್ಭುತ ಸಹಜ ಸಾಮರ್ಥ್ಯ ಇದೆ. ವಿಶೇಷವಾಗಿ ನಮ್ಮ ಸೂರ್ಯನಿಂದ ಉತ್ಸರ್ಜನೆಗೊಂಡು ಹರಿದುಬರುತ್ತಿರುವ, ಧರೆಯ ಕಡೆಗೂ ಎರಗುತ್ತಿರುವ ವಿದ್ಯುದಾವಿಷ್ಟ ಕಣಗಳ ನಿರಂತರ ಮಹಾಪೂರವನ್ನು ಕಾಂತಗೋಳ ತಡೆದು ವಿಕರ್ಷಿಸುತ್ತಿದೆ. ವಾಯುಮಂಡಲವನ್ನೂ, ನೆಲದ ಮೇಲಿನ ಜೀವ ಜಾಲವನ್ನೂ ರಕ್ಷಿಸುತ್ತಿದೆ (ಚಿತ್ರ–7).

ವಾಸ್ತವ ಏನೆಂದರೆ ಕಾಂತಗೋಳದ ಈ ರಕ್ಷಣೆ ಇಲ್ಲವಾಗಿದ್ದಿದ್ದರೆ ಸೌರಕಣಗಳು ಭೂ ವಾಯುಮಂಡಲವನ್ನು ನಿಧಾನವಾಗಿ ‘ಗುಡಿಸಿ’, ತೊಡೆದು ಹಾಕಿ ಕಡೆಗೆ ಧರೆಯ ಜೀವಧಾರಕ, ಜೀವಿಪೋಷಕ ಗುಣಗಳನ್ನೇ ನಾಶಗೊಳಿಸುತ್ತಿದ್ದುವು! ಹಾಗೆಂದರೆ ಭೂ ಸ್ವಾಸ್ಥ್ಯಕ್ಕೆ ಮತ್ತು ಜೀವಿ ಸಾಮ್ರಾಜ್ಯದ ಅಸ್ತಿತ್ವಕ್ಕೆ ಅಸ್ತಿತ್ವಕ್ಕೆ ಭೂಗರ್ಭ ಅತ್ಯಂತ ಅವಶ್ಯ ಮತ್ತು ಅನಿವಾರ್ಯ ಎಂಬುದು ಸ್ಪಷ್ಟವಾಯಿತಲ್ಲ?
ಅದಕ್ಕೇ ಭೂಗರ್ಭಕ್ಕೆ ಅತೀವ ಮಹತ್ವ.

2. ‘ಗುಲಾಬಿ ವಜ್ರ’– ಏನು ವಿಶೇಷ?
ಅದೇನೇ ಇರಲಿ, ಒಂದಂಶ ಸ್ಪಷ್ಟ: ‘ಗುಲಾಬಿ ಬಣ್ಣದ್ದಷ್ಟೇ ಅಲ್ಲ, ಹಳದಿ, ಕಿತ್ತಳೆ, ಕೆಂಪು ನೇರಿಳೆ, ನೀಲಿ ಇತ್ಯಾದಿ ವರ್ಣಗಳ ವಜ್ರಗಳೂ ಇವೆ (ಚಿತ್ರ–14). ಆದರೆ ಗುಲಾಬಿ ವರ್ಣದ ವಜ್ರಕ್ಕೆ ಬೇಡಿಕೆ ಗರಿಷ್ಠ ಏಕೆಂದರೆ ವರ್ಣ ವಜ್ರಗಳಲ್ಲೆಲ್ಲ ಅದೇ ಗರಿಷ್ಠ ಆಕರ್ಷಕ.’

ವಾಸ್ತವವಾಗಿ ಎಲ್ಲ ರತ್ನಗಳಿಗೂ ಮಾನವ ಜಗದಲ್ಲಿ ಅಮೂಲ್ಯ ಸ್ಥಾನ. ಹರಳಿನ ಸ್ವರೂಪದಿಂದ, ಉಜ್ವಲ ಹೊಳಪಿನಿಂದ, ಮನಮೋಹಕ ವರ್ಣಗಳಿಂದ ದೀರ್ಘ ಬಾಳಿಕೆಯಿಂದ ಆಚರಣ ಯೋಗ್ಯ ಗುಣದಿಂದ ಹಾಗೂ ಅಪರೂಪತೆಯಿಂದ ಅವಕ್ಕೆ ಅತೀವ ಬೇಡಿಕೆ; ಅತ್ಯಂತ ಹೆಚ್ಚಿನ ಬೆಲೆ. (ಹಲವು ರತ್ನಗಳ ಕಚ್ಚಾ ಹರಳುಗಳನ್ನೂ, ಕತ್ತರಿಸಿ ಸಾಣೆ ಹಿಡಿದ ಹರಳುಗಳನ್ನೂ ಚಿತ್ರಗಳಲ್ಲಿ ಗಮನಿಸಿ) ಅದೇನೇ ಇದ್ದರೂ ರತ್ನಗಳಲ್ಲೆಲ್ಲ ವಜ್ರಕ್ಕೇ ಅಗ್ರಸ್ಥಾನ (ಚಿತ್ರ–13)

ಬಹಳ ವಜ್ರಗಳದು ಸಾಮಾನ್ಯವಾಗಿ ಮಂಜಿನಂತಹ ಬಣ್ಣ ಅಥವಾ ತಿಳಿ ಬೂದಿ ಬಣ್ಣ. ಈ ಬಗೆಯ ಅಪಕ್ಷ ವಜ್ರಗಳದು ಕಳಪೆ ವರ್ಗ. ಪರಿಪಕ್ವ ಪರಿಶುದ್ಧ ಹರಳುಗಳದು ನಿರ್ವರ್ಣ. ಸಾಣೆ ಹಿಡಿದ ಮೇಲಂತೂ ಅವುಗಳದು ನಕ್ಷತ್ರ, ಕಾಂತಿ, ಅನುಪಮ ಸೌಂದರ್ಯ (ಚಿತ್ರ–13), ಆಕಾಶದೆತ್ತರ ಬೆಲೆ.

ವಜ್ರವನ್ನು ಇನ್ನೂ ಹೆಚ್ಚು ಅಮೂಲ್ಯವಾಗಿರುವುದು ಅದರ ಬಣ್ಣ. ಇತರ ರತ್ನಗಳು ಭೂ ಅಂತರಾಳದಲ್ಲಿ ಹರಳುಗಟ್ಟುವಾಗ ಅವುಗಳಲ್ಲಿ ಬೆರೆವ ವಿವಿಧ ಲೋಹಾಂಶಗಳು ಬೇರೆ ಬೇರೆ ಬಣ್ಣಗಳನ್ನು ಒದಗಿಸುತ್ತವೆ. ಆದರೆ ವಜ್ರದಲ್ಲಿ ಹಾಗಲ್ಲ. ಧರೆಯ ಆಂತರ್ಯದಲ್ಲಿ ಮೈದಳೆದು ಸಂಪೂರ್ಣ ಪಕ್ವಗೊಂಡ ನಂತರವೂ ವಜ್ರವೊಂದು ಲಕ್ಷಾಂತರ ವರ್ಷಕಾಲ ಅಲ್ಲೇ ಯಾವುದಾದರೂ ವಿಕಿರಣ ಪಟು ಧಾತುವಿನ ಅಥವಾ ಅಂತಹವೇ ಹಲವು ಧಾತುಗಳ ಸನಿಹದಲ್ಲೇ ಉಳಿದುಬಿಟ್ಟಿರೆ ವಿಕಿರಣಗಳ ಪರಿಣಾಮವಾಗಿ ವಜ್ರ ವರ್ಣಯುಕ್ತವಾಗುತ್ತದೆ.

ವಿಶೇಷವಾಗಿ ಗುಲಾಬಿ ವಜ್ರಗಳಿಗೆ ಎಷ್ಟೊಂದು ಬೆಲೆಯೆಂದರೆ ನವೆಂಬರ್‌ 2010 ರಲ್ಲಿ ಹರಾಜಾದ 4.96 ಗ್ರಾಂ ತೂಕದ ಇಂತಹ ವಜ್ರ 308 ಕೋಟಿ 39 ಲಕ್ಷ ರೂ. ಗಳಿಸಿತು! 2013 ರಲ್ಲಿ 12 ಗ್ರಾಂ ತೂಕದ ಗುಲಾಬಿ ವಜ್ರ 500 ಕೋಟಿ 50 ಲಕ್ಷ ರೂ.ಗೆ, 2015 ರಲ್ಲಿ 3. 21 ಗ್ರಾಂ ತೂಕದ ವಜ್ರ 187.71 ಕೋಟಿ ರೂ.ಗೆ ಹಾಗೂ ಇದೇ ಕಳೆದ ತಿಂಗಳಲ್ಲಿ 3.08 ಗ್ರಾಂ ತೂಕದ ಗುಲಾಬಿ ವಜ್ರವೊಂದು 208 ಕೋಟಿ ರೂ.ಗೆ ಮಾರಾಟವಾಗಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT