ಶನಿವಾರಸಂತೆ: ಪೊಲೀಸರು ವಶಪಡಿಸಿಕೊಂಡ ಜಾನುವಾರುಗಳು ಠಾಣೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಿಸಿದ ಘಟನೆ ಶನಿವಾರಸಂತೆಯಲ್ಲಿ ಗುರುವಾರ ನಡೆದಿದ್ದು, ಹರಸಾಹಸದ ಮೂಲಕ ಅವುಗಳನ್ನು ತಹಬದಿಗೆ ತರಲಾಯಿತು.
ಪಟ್ಟಣದ ಠಾಣೆ ಪೊಲೀಸರು ಗುರುವಾರ ಮುಂಜಾನೆ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎನ್ನಲಾದ ನಾಲ್ಕೈದು ಜಾನುವಾರುಗಳನ್ನು ವಶಪಡಿಸಿಕೊಂಡು ಠಾಣೆ ಮುಂಭಾಗದ ಜಾಗದಲ್ಲಿ ಕಟ್ಟಿಹಾಕಿದ್ದರು. ಒಂದಿಷ್ಟು ಹೊತ್ತು ಸುಮ್ಮನಿದ್ದ ಒಂದು ಪುಂಡ ಜಾನುವಾರು ದಾಂಧಲೆ ಮಾಡಲು ಆರಂಭಿಸಿತು.
ಮನುಷ್ಯರನ್ನು ನೋಡಿದರೆ ಎಗರಿ ಬೀಳುತ್ತಿದ್ದ ಜಾನುವಾರೊಂದು ಹಗ್ಗ ತುಂಡರಿಸಿಕೊಂಡು ಆವರಣದಲ್ಲಿ ತಿರುಗಾಡಲು ಆರಂಭಿಸಿತು.
ಇದನ್ನು ಗಮನಿಸಿದ ಪೊಲೀಸರು, ಠಾಣೆಯ ಗೇಟನ್ನು ಭದ್ರಪಡಿಸಿದರು. ಭಯಭೀತರಾದ ಪೊಲೀಸರು ಠಾಣೆಯ ಒಳಗೂ, ಸಾರ್ವಜನಿಕರು ಗೇಟಿನ ಹೊರಗೆ ಇರುವಂತಾಗಿತ್ತು.
ಮಧ್ಯಾಹ್ನ 2 ಗಂಟೆಗೆ ಹೊಳಲ್ಗೋಡಿನ ಆಯೂಬ್ ಖಾನ್ ಅವರು ಉದ್ದ ಹಗ್ಗ ತಂದು ವಾಹನದ ಮೇಲೇರಿ ಸಹಾಯಕರೊಂದಿಗೆ ಕುತ್ತಿಗೆಗೆ ಹಗ್ಗ ಹಾಕಿ ಕಟ್ಟಿಹಾಕಿದರು. ನಂತರ ಪೊಲೀಸರು ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.
ಹಲ್ಲೆ: ಗಾಯ
ಶನಿವಾರಸಂತೆ: ಸೀಗೆಮರೂರು ಗ್ರಾಮದಲ್ಲಿ ಕಾರ್ಮಿಕ ದಂಪತಿ ಮೇಲೆ ಸಂಬಂಧಿಕರು ಹಲ್ಲೆ ನಡೆಸಿದರಲ್ಲದೇ, ಕಚ್ಚಿ ಗಾಯಗೊಳಿಸಿದ ಪ್ರಕರಣ ಪೊಲೀಸ್ ಠಾಣೆಯಲ್ಲಿ ಬುಧವಾರ ದಾಖಲಾಗಿದೆ.
ಗ್ರಾಮದ ಮಂಜುನಾಥ್ ಮತ್ತು ಆತನ ಪತ್ನಿ ರೇಣುಕಾ ಹಲ್ಲೆಗೊಳಗಾದ ದಂಪತಿ. ಇವರಿಗೆ ಸೇರಿದ ಜಾಗದಲ್ಲಿ ಮಂಜುನಾಥ್ನ ಅಣ್ಣ ಮಲ್ಲೇಶ್ ಅವರು ಗಿಡಗಳನ್ನು ನೆಟ್ಟಿದ್ದರು.
ಆ ಗಿಡಗಳನ್ನು ಕಿತ್ತು ಹಾಕುತ್ತಿದ್ದ ಸಂದರ್ಭದಲ್ಲಿ ಮಲ್ಲೇಶ್ ಸ್ಥಳಕ್ಕೆ ಧಾವಿಸಿ ಏಕಾಏಕಿ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ. ಬಿಡಿಸಲು ಬಂದ ರೇಣುಕಾಳ ತೋಳನ್ನು ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದಾರೆ.