ಬಾಗಲಕೋಟೆ: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾದ ಪಾರಂಪರಿಕ ತಾಣ ಅಭಿವೃದ್ಧಿ ಯೋಜನೆ ‘ಹೃದಯ್’ಗೆ (‘HRIDAY’--Heritage Development And Augmentation Yojana)- ಆಯ್ಕೆಯಾಗಿರುವ ರಾಜ್ಯದ ಏಕೈಕ ಪ್ರವಾಸಿತಾಣವಾದ ಐತಿಹಾಸಿಕ ಬಾದಾ ಮಿಯ ಸರ್ವತೋಮುಖ ಅಭಿವೃದ್ಧಿಗೆ ಭರದ ಸಿದ್ಧತೆ ಪ್ರಾರಂಭವಾಗಿದೆ.
ಈ ಯೋಜನೆ ಅನ್ವಯ ಬಾದಾಮಿ ಪಟ್ಟಣಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಮೂಲಕ ಪ್ರವಾಸಿಗರ ಕಣ್ಮನ ಸೂರೆಗೊಳ್ಳುವ ಸುಂದರ ತಾಣವನ್ನಾಗಿ ರೂಪಿಸಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಾಗಲಕೋಟೆ ಜಿಲ್ಲಾಡಳಿತ ಕ್ರಿಯಾ ಯೋಜನೆ ರೂಪಿಸಿದೆ.
₨22.26 ಕೋಟಿ ಬಿಡುಗಡೆ: ‘ಇದೇ 21ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪಾರಂಪರಿಕ ನಗರಗಳ ಅಭಿವೃದ್ಧಿ ಯೋಜನೆ ಚಾಲನಾ ಸಭೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತದ ವತಿಯಿಂದ ಬಾದಾ ಮಿಯ ಐತಿಹಾಸಿಕ ಹಿನ್ನೆಲೆ, ಸದ್ಯದ ಸ್ಥಿತಿಗತಿ ಹಾಗೂ ವಿಶ್ವ ಪ್ರಸಿದ್ಧ ಸ್ಮಾರಕ ಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು’ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ತಿಳಿಸಿದರು.
‘ಜಿಲ್ಲಾಡಳಿತದ ವತಿಯಿಂದ ಪ್ರಥಮ ಹಂತವಾಗಿ ರೂ52.5 ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಭೆಯ ಮುಂದಿಡಲಾಗಿತ್ತು. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಪ್ರಥಮ ಹಂತ ವಾಗಿ ರೂ22.26 ಕೋಟಿ ಅನುದಾನ ನೀಡಲು ಒಪ್ಪಿದ್ದು, ಹಂತಹಂತವಾಗಿ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದೆ’ ಎಂದರು.
‘ಈ ಯೋಜನೆ ಅನ್ವಯ ಬಾದಾಮಿ ರೈಲು ನಿಲ್ದಾಣದಿಂದ ಗುಹಾಂತರ ದೇವಾಲಯದವರೆಗೆ ರಸ್ತೆ ವಿಸ್ತರಣೆ ಮಾಡಲಾಗುವುದು. ಅಗಸ್ತ್ಯತೀರ್ಥ ಹೊಂಡದ ಬಳಿ ಇರುವ 69 ಮನೆಗಳು ಹಾಗೂ ತಟಕೋಟೆ ಬಳಿ ಇರುವ ಮನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದ ಬಳಿಕ ಈ ಪ್ರದೇಶದಲ್ಲಿ ಚಾಲುಕ್ಯ ಕಲಾಗ್ರಾಮವನ್ನು ನಿರ್ಮಿಸಲಾಗುವುದು’ ಎಂದರು.
‘ಅಗಸ್ತ್ಯತೀರ್ಥ ಅಭಿವೃದ್ಧಿಪಡಿಸಿ ಜಲಕ್ರೀಡೆಗೆ ಅವಕಾಶ ಕಲ್ಪಿಸಲಾಗುವುದು. ಬಾದಾಮಿ ಬೆಟ್ಟದಲ್ಲಿ ಪರ್ವತಾರೋಹಣ ಕೇಂದ್ರ ಅಭಿವೃದ್ಧಿ, ಬನಶಂಕರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಹಾಗೂ ಪಾರಂಪರಿಕ ಉದ್ಯಾನ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.
‘ಭಾರತದ ಹೃದಯ’ ಬಾದಾಮಿ, ವಾರಾಣಸಿ, ಅಮೃತಸರ, ಅಜ್ಮೀರ್, ಅಮರಾವತಿ, ಕಾಂಚಿಪುರಂ, ಪುರಿ, ಗಯಾ, ನಾಗಪಟ್ಟಣಂ, ಮಥುರಾ, ಭುವನೇಶ್ವರ ಮತ್ತು ಗುಂಟೂರು ಒಳಗೊಂಡಂತೆ ದೇಶದ ಒಟ್ಟು 12 ವಿಶ್ವಪ್ರಸಿದ್ಧ ಪರಂಪರೆ ತಾಣಗಳನ್ನು ‘ಭಾರತದ ಹೃದಯ’ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ. |
ಬಾದಾಮಿ ಪಟ್ಟಣಕ್ಕೆ ಪ್ರವಾಸಿಗರಿಗೆ ಸ್ವಾಗತ ಕೋರುವ ಆಕರ್ಷಕ ಹೆಬ್ಬಾಗಿಲು ನಿರ್ಮಾಣ, ರಸ್ತೆ ಡಾಂಬರೀ ಕರಣ, ಪಾದಚಾರಿ ಮಾರ್ಗವನ್ನು ನಿರ್ಮಾಣ ಮತ್ತು ಪಟ್ಟಣದ ಸ್ವಚ್ಛತೆಗೆ ಆದ್ಯತೆ, ಬಾದಾಮಿ ಸ್ಮಾರಕಗಳಿಗೆ ಹಾಗೂ ಬೆಟ್ಟಗಳಿಗೆ ದೀಪಾಲಂಕಾರ ಮಾಡುವ ಮೂಲಕ ದೇಶ, ವಿದೇಶದಿಂದ ಬರುವ ಪ್ರವಾಸಿಗಳಿಗೆ ಬಾದಾಮಿಯ ಐತಿಹಾಸಿಕ ಗತವೈಭವ ಕಣ್ಮುಂದೆ ಕಟ್ಟಿಕೊಡಲಾಗುವುದು’ ಎಂದರು.
ಶೀಘ್ರ ಚಾಲನೆ: ‘ಹೃದಯ್’ ಯೋಜನೆಯಲ್ಲಿ ಬಾದಾಮಿ ಸ್ಥಾನ ಪಡೆಯಲು ಕಾರಣರಾದ ಸಂಸದ ಪಿ.ಸಿ.ಗದ್ದಿಗೌಡರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿ, ಬಾದಾ ಮಿಯಲ್ಲಿ ‘ಹೃದಯ್’ ಯೋಜನೆ ಅನುಷ್ಠಾನಕ್ಕೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ದು ತಿಂಗಳೊಳಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಬಾದಾಮಿಯನ್ನು ಯುನೆಸ್ಕೊ ‘ವಿಶ್ವಪರಂಪರೆ’ ಪಟ್ಟಿಗೆ ಸೇರ್ಪಡೆ ಮಾಡಲು ಇದ್ದ ಬಹುದಿನಗಳ ಅಡೆತಡೆಗಳು ‘ಹೃದಯ್’ ಯೋಜನೆ ಅನುಷ್ಠಾನದಿಂದಾಗಿ ಶೀಘ್ರ ನಿವಾರಣೆ ಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.