ನವದೆಹಲಿ (ಪಿಟಿಐ): ಬಿರುಬೇಸಿಗೆಯಿಂದ ತತ್ತರಿಸಿರುವ ರಾಜಧಾನಿಯಲ್ಲಿ, ನಿಗದಿಪಡಿಸಿದ ದಿನಕ್ಕಿಂತ ಮುನ್ನವೇ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದೆ.
ಮೇ 11ರಿಂದ ಶಾಲೆಗಳಿಗೆ ರಜೆ ನೀಡುವಂತೆ ಎಲ್ಲ ಖಾಸಗಿ ಮತ್ತು ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಿಗೆ ಸೂಚಿಸಿದ್ದು. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಪ್ರತಿ ವರ್ಷ ಸರ್ಕಾರಿ ಶಾಲೆಗಳಿಗೆ ಮೇ 10ರಿಂದ ರಜೆ ನೀಡಲಾಗುತ್ತದೆ. ಆದರೆ, ಖಾಸಗಿ ಶಾಲೆಗಳು ತಮ್ಮದೇ ಆದ ವೇಳಾಪಟ್ಟಿಯನ್ನು ರೂಪಿಸಿಕೊಂಡಿವೆ. ಹೀಗಾಗಿ ಸರ್ಕಾರ ಈ ಕ್ರಮಕೈಗೊಂಡಿದೆ.
ಮಹಾನಗರದಲ್ಲಿ ಕೆಂಡದಂತಹ ಬಿಸಿಲಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರ ರಾಜಧಾನಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಭುವನೇಶ್ವರ ವರದಿ: ಒಡಿಶಾದ ತಲ್ಚೇರ್ ನಗರದಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿದ್ದು, ಮಂಗಳವಾರ 44.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.