ಯಾದಗಿರಿ: ನಗರದಲ್ಲಿ ವಾಸಿಸುವ ಸಪಾಯಿ ಕರ್ಮಚಾರಿಗಳು ಪರಿಶಿಷ್ಟ ಜಾತಿಯಲ್ಲಿಯೇ ಅತೀ ಹಿಂದುಳಿದವರಾಗಿದ್ದು, ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸಫಾಯಿ ಕರ್ಮಚಾರಿಗಳ ಸಂಘದ ವತಿಯಿಂದ ಇಲ್ಲಿಯ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಮನವಿ ಸಲ್ಲಿಸಲಾಯಿತು.
ಸಫಾಯಿ ಕರ್ಮಚಾರಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಮುಖ್ಯವಾಗಿ ಶೈಕ್ಷಣಿಕವಾಗಿ ಬಹಳಷ್ಟು ಹಿಂದೆ ಬಿದ್ದಿದ್ದು, ಈ ಬಗ್ಗೆ ಅಧ್ಯಯನ ಮಾಡಲು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಯೋಗವನ್ನು ರಚಿಸಲಾಗಿದೆ.
ಜನವರಿ 21 ರಂದು ಜಿಲ್ಲೆಗೆ ಆಗಮಿಸಿದ್ದ ಆಯೋಗದ ಅಧ್ಯಕ್ಷ ನಾರಾಯಣ ಅವರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದರು. ಸಫಾಯಿ ಕರ್ಮಚಾರಿಗಳಿಗೆ ಆಗುತ್ತಿರುವ ಅನಾ್ಯಯಗಳ ಬಗ್ಗೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಇವರಿಗೆ ತಲುಪದೇ ಲೂಟಿಯಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.
ಸಂಬಂಧಿಸಿದ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ, ಹಲವಾರು ಯೋಜನೆಗಳು ಕಾರ್ಮಿಕರಿಗೆ ತಲುಪದೇ ಇರುವುದು, ಸಫಾಯಿ ಕರ್ಮಚಾರಿಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವುದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದೇ ಇರುವುದು ಮತ್ತು ಅವರ ಅವಲಂಬಿತರಿಗೆ ಸುಲಭ ಶೌಚಾಲಯ ನಿರ್ವಹಣೆ ನೀಡಲು ಸಭೆಯಲ್ಲಿ ಆಯೋಗದ ಅಧ್ಯಕ್ಷರು ತಿಳಿಸಿದ್ದರು.
ಒಂದು ತಿಂಗಳಾದರೂ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಫಾಯಿ ಕರ್ಮಚಾರಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದು ಹೇಳಿದರು.
ಕೂಡಲೇ ಈ ಬಡ ಕಾರ್ಮಿಕರ ಮೇಲೆ ಕರುಣೆಯನ್ನು ತೋರಬೇಕು. ಮನೆಗಳ ನಿರ್ಮಾಣ, ಆರೋಗ್ಯ ಕಾಪಾಡಲು ಮತ್ತು ಶೈಕ್ಷಣಿಕವಾಗಿ ಮೇಲೆತ್ತಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಸಫಾಯಿ ಕರ್ಮಚಾರಿಗಳ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಭಾಸ್ಕರಬಾಬು ನೇತೃತ್ವದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಣಿ -ದೀಪಕ್, ಕೃಷಾ್ಣಬಾಯಿ -ಶಾಮಾಸಿಂಗ್, ಜಗದೀಶ್ವರಿ- ಪ್ರವೀಣ, ಶಾಮಾಬಾಯಿ ಕಿರಣಪಾಲ್, ಶಾರದಾ, ರಾಜೇಶ, ಮೇಹಪಾಲ್, ಗೀತಾಬಾಯಿ, ಪ್ರಮೀಳಾ, ರೂಪಾ, ಅರುಣಾ, ಸುನಿತಾ, ಅಪರ್ಣಾ, ಗೋಪಾಲ್, ಕಲ್ಪನಾ ಹಟ್ವಾಲ್ ಮತ್ತು ಪುಷ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.