ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ಭಟ್ಕಳದ ಅಳಿಯ ಮೊಹಮ್ಮದ್ ಅಶ್ರಫ್ ಮೀರ್, ಜಮ್ಮು–ಕಾಶ್ಮೀರದಲ್ಲಿ ಅಸ್ತಿತ್ವಕ್ಕೆ ಬಂದ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಮೊಹಮ್ಮದ್ ಅಶ್ರಫ್ ಆಗಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ವಿಧಾನಸಭಾ ಚುನಾವಣೆ ಯಲ್ಲಿ ಸೋಲಿಸಿದ್ದಾರೆ.
ಶಂಕಿತ ಉಗ್ರರ ಬಂಧನ, ಸ್ಫೋಟಕಗಳ ಪತ್ತೆ ಮುಂತಾದವುಗಳಿಂದ ಮಾಧ್ಯಮಗಳಲ್ಲಿ ಪ್ರಚಾರ ಪಡೆದಿದ್ದ ಭಟ್ಕಳದ ಜನರಲ್ಲಿ ಹಾಗೂ ಮುಸ್ಲಿಂ ಸಮಾಜದವರಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಭಟ್ಕಳದ ಅಳಿಯ ಸಚಿವರಾ ಗಿದ್ದಕ್ಕೆ ಇಲ್ಲಿನ ಹಲವು ಮುಸ್ಲಿಂ ಸಂಘಟನೆಗಳ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಕಾಶ್ಮೀರದ ನಿವಾಸಿಯಾಗಿರುವ ಮೀರ್, ವೃತ್ತಿಯಲ್ಲಿ ಗುತ್ತಿಗೆದಾರ. ಭಟ್ಕಳದ ಬಂದರ್ ರಸ್ತೆಯ ನಿವಾಸಿ, ಉದ್ಯಮಿ ಉಮರ್ ಫಾರೂಕ್ ಉದ್ಯಾವರ್ ಅವರ ಪುತ್ರಿ ಝರೀನಾ ಅವರನ್ನು ಮೀರ್ 1996ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮಾವ ಫಾರೂಕ್ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
‘ಅಳಿಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವಿಷಯ ನಮಗೆ ತಡವಾಗಿ ತಿಳಿಯಿತು. ಮೊದಲೇ ಗೊತ್ತಾಗಿದ್ದರೆ ಸಮಾರಂಭಕ್ಕೆ ಹೋಗುತ್ತಿದ್ದೆವು. ನಮ್ಮ ಕುಟುಂಬಕ್ಕೆ ತುಂಬಾ ಖುಷಿ ತಂದಿದೆ. ಅಳಿಯನಿಂದ ಉತ್ತಮ ಜನಪರ ಕೆಲಸ ನಡೆಯುತ್ತದೆ ಎಂಬ ಭರವಸೆ ಇದೆ’ ಎಂದು ಫಾರೂಕ್ ‘ಪ್ರಜಾವಾಣಿ’ಗೆ ತಿಳಿಸಿದರು.