ಬೆಂಗಳೂರು: ವಿಧಾನಸಭೆಯಲ್ಲಿ ನೀಡುವ ಭರವಸೆಗಳನ್ನು ಸಕಾಲದಲ್ಲಿ ಈಡೇರಿಸಲು ವಿಫಲವಾದ ಪ್ರಕರಣಗಳಲ್ಲಿ ಅಗತ್ಯ ಕಂಡುಬಂದರೆ ಸಂಬಂಧಿಸಿದ ಸಚಿವರನ್ನೂ ಸಮಿತಿಯ ಎದುರು ಕರೆಸಿ ವಿವರಣೆ ಪಡೆಯಲಾಗುವುದು ಎಂದು ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಆರ್.ಯಾವಗಲ್ ತಿಳಿಸಿದರು.
ಸಮಿತಿಯ ಈ ವರ್ಷದ ಮೊದಲ ಸಭೆ ಮಂಗಳವಾರ ವಿಕಾಸಸೌಧದಲ್ಲಿ ನಡೆಯಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿಗಳಿಗೂ ನೋಟಿಸ್ ನೀಡಿ ವಿವರಣೆ ಪಡೆಯುವ ಅಧಿಕಾರ ಸಮಿತಿಗೆ ಇದೆ. ಅಗತ್ಯ ಕಂಡುಬಂದರೆ ಈ ಅಧಿಕಾರ ಚಲಾಯಿಸಲಾಗುವುದು ಎಂದರು.
ರಾಜ್ಯ ಸರ್ಕಾರದ 35 ಇಲಾಖೆಗಳಿಗೆ ಸಂಬಂಧಿಸಿದಂತೆ 1996ರಿಂದ 2013ರವರೆಗೆ ನೀಡಿರುವ 2,638 ಭರವಸೆಗಳು ಬಾಕಿ ಇವೆ. ಈ ಭರವಸೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ಆಗಿರುವ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ. 1996ರಿಂದ 2004ರವರೆಗಿನ ಭರವಸೆಗಳನ್ನು ಆದ್ಯತೆ ಮೇಲೆ ಅನುಷ್ಠಾನಕ್ಕೆ ತರುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಈ ವರ್ಷ 2,638 ಭರವಸೆಗಳ ಕುರಿತು ಸಮಿತಿ ಚರ್ಚೆ ನಡೆಸಲಿದೆ. ಈ ಪೈಕಿ 1,405 ಬೇಡಿಕೆಗಳ ಕುರಿತು ಉತ್ತರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ, ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ವಿವರಣೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದರು.
2013–14ನೇ ಸಾಲಿನಲ್ಲಿ ಸಮಿತಿಯು 13 ಇಲಾಖೆಗಳಿಗೆ ಸಂಬಂಧಿಸಿದ 1,560 ಭರವಸೆಗಳ ಬಗ್ಗೆ ಚರ್ಚೆ ನಡೆಸಿದೆ. 1,260 ಭರವಸೆಗಳಿಗೆ ಸಂಬಂಧಿಸಿದ ಚರ್ಚೆಯನ್ನು ಮುಕ್ತಾಯಗೊಳಿಸಲಾಗಿದೆ. 300 ಭರವಸೆಗಳ ಬಗೆಗಿನ ಚರ್ಚೆಯನ್ನು ಕಾಯ್ದಿರಿಸಲಾಗಿದೆ. 13 ಇಲಾಖೆಗಳಿಗೆ ಸಂಬಂಧಿಸಿದಂತೆ ಎರಡು ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸಲಾಗಿದೆ ಎಂದು ವಿವರ ನೀಡಿದರು.