ವಾಷಿಂಗ್ಟನ್ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯವನ್ನು ‘ಪ್ರಚಂಡ ಗೆಲುವು’ ಎಂದು ಬಣ್ಣಿಸಿರುವ ಅಮೆರಿಕದ ಚಿಂತಕರು ಮತ್ತು ತಜ್ಞರು, ಭಾರತೀಯ ರಾಜಕಾರಣವನ್ನು ಪುನರ್ವ್ಯಾಖ್ಯಾನಿಸುವ ಅವಕಾಶವನ್ನು ಮೋದಿ ಅವರಿಗೆ ಇದು ನೀಡಿದೆ ಎಂದು ಪ್ರತಿಪಾದಿಸಿದ್ದಾರೆ.
‘ಇದೊಂದು ಪ್ರಚಂಡ ವಿಜಯ. ಇದು ಕೇವಲ ಮೋದಿ ಅವರಿಗೆ ದೊರೆತ ಜಯವಲ್ಲ. ಬದಲಿಗೆ ಆರ್ಥಿಕತೆಯ ಕೆಟ್ಟ ನಿರ್ವಹಣೆ ಮತ್ತು ನಿಷ್ಕ್ರಿಯ ನೀತಿಗಳ ವಿರುದ್ಧ ಸ್ಪಷ್ಟವಾಗಿ ಧ್ವನಿ ಎತ್ತಿರುವ ಭಾರತದ ಜನತೆಗೆ ಲಭಿಸಿದ ಗೆಲುವು’ ಎಂದು ಅಂತರರಾಷ್ಟ್ರೀಯ ಶಾಂತಿಗಾಗಿರುವ ಕಾರ್ನೆಗಿ ದತ್ತಿಯ ಆಶ್ಲೆ ಟೆಲಿಸ್ ಹೇಳಿದ್ದಾರೆ.
‘ಭಾರತದ ಅರ್ಥ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಜಯವು ಮೋದಿ ಅವರಿಗೆ ಹೊಸ ಅವಕಾಶ ಸೃಷ್ಟಿಸಿದೆ ಎಂದು ಆಶಿಸಲಾಗಿದೆ. ಅದು ಸಾಧ್ಯವಾದರೆ, ಅಮೆರಿಕ–ಭಾರತ ಸಂಬಂಧಕ್ಕೆ ಶುಭ ಸುದ್ದಿಯಾಗಲಿದೆ. ಅದಕ್ಕೂ ಮುನ್ನ, ಸಂಬಂಧ ಉತ್ತಮ ಪಡಿಸುವ ನಿಟ್ಟಿನಲ್ಲಿ ಅಮೆರಿಕ ಇನ್ನಷ್ಟು ಕೆಲಸ ಮಾಡಬೇಕಾಗಿದೆ’ ಎಂದು ಟೆಲಿಸ್ ಅಭಿಪ್ರಾಯಪಟ್ಟಿದ್ದಾರೆ.
‘ಬಿಜೆಪಿಯು ಏಕೈಕ ಪಕ್ಷವಾಗಿ ಭಾರಿ ಬಹುಮತ ಪಡೆದಿರುವುದರಿಂದ ದಶಕಗಳ ಹಿಂದೆ ಕಾಂಗ್ರೆಸ್ ಮಾಡಿರುವ ರೀತಿಯಲ್ಲಿ ಭಾರತದ ರಾಜಕೀಯವನ್ನು ಮರು ವ್ಯಾಖ್ಯಾನ ಮಾಡುವ ಅವಕಾಶಮೋದಿ ಮುಂದಿದೆ. ಒಂದು ವೇಳೆ ಅವರು ತಮ್ಮ ಗೆಲುವಿನ ಸೂತ್ರಗಳಿಗೆ ಬದ್ಧರಾಗಿದ್ದರೆ, ಅವರು ಭಾರತದ ಪ್ರಧಾನಿಯಾಗಿ ಸುದೀರ್ಘ ಅವಧಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಅವರು ಭವಿಷ್ಯ ನುಡಿದಿದ್ದಾರೆ.
‘ಮೋದಿ ಅವರ ಗೆಲುವು ಆರ್ಥಿಕತೆಗೆ ದೊರೆತ ದೊಡ್ಡ ಜಯ’ ಎಂದು ಮತ್ತೊಬ್ಬ ಆರ್ಥಿಕ ತಜ್ಞ ಪ್ರೊ. ರಸೆಲ್ ಗ್ರೀನ್ ಹೇಳಿದ್ದಾರೆ.