ನವದೆಹಲಿ: ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋ ಗೌರವಕ್ಕೆ ಪಾತ್ರರಾಗಿದ್ದಾರೆ.
ಸೋಮವಾರ ಸೇರಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸಾಮಾನ್ಯ ಸಭೆಯಲ್ಲಿ ಭೈರಪ್ಪ ಅವರನ್ನು ಫೆಲೋ ಗೌರವಕ್ಕೆ ಆಯ್ಕೆ ಮಾಡಲಾಯಿತು. ಭೈರಪ್ಪನವರ ಜತೆ ತೆಲುಗು ಸಾಹಿತಿ ಸಿ. ನಾರಾಯಣ ರೆಡ್ಡಿ ಅವರೂ ಈ ಗೌರವಕ್ಕೆ ಭಾಜನರಾಗಿದ್ದಾರೆ.
ಸಾಹಿತ್ಯ ಅಕಾಡೆಮಿಯ ಫೆಲೋ, ಸಾಹಿತಿಗಳಿಗೆ ಸಲ್ಲುವ ಅತ್ಯಂತ ದೊಡ್ಡ ಗೌರವವಾಗಿದೆ. ಇದಕ್ಕೂ ಮೊದಲು ಡಾ.ಯು.ಆರ್.ಅನಂತಮೂರ್ತಿ ಅವರಿಗೆ ಈ ಗೌರವ ಸಂದಿತ್ತು. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂ ಗಾರ್, ದ.ರಾ. ಬೇಂದ್ರೆ ಮತ್ತು ಕೆ.ಎಸ್. ನರಸಿಂಹಸ್ವಾಮಿ ಅವರೂ ಸೇರಿದಂತೆ ಕನ್ನಡದ ಅನೇಕ ಲೇಖಕರಿಗೆ ಗೌರವ ಸಿಕ್ಕಿತ್ತು.
ಅಕಾಡೆಮಿ 21ಫೆಲೋಗಳಲ್ಲಿ ಭೈರಪ್ಪನವರೂ ಒಬ್ಬರು. ಕರ್ನಾ ಟಕದಲ್ಲಿ ಮನೆ ಮಾತಾಗಿರುವ ಭೈರಪ್ಪನವರು ದೊಡ್ಡ ಓದುಗ ಅಭಿಮಾನಿಗಳನ್ನು ಹೊಂದಿದ್ದಾರೆ. ಮರಾಠಿ ಹಾಗೂ ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅವರ ಕೃತಿಗಳು ಭಾಷಾಂತರಗೊಂಡಿದೆ. ಅವರ ಕೃತಿಗಳು ಇಂಗ್ಲಿಷ್ಗೂ ಅನುವಾದಗೊಂಡಿವೆ.
2010ರಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕಾರಕ್ಕೂ ಪಾತ್ರರಾಗಿರುವ ಭೈರಪ್ಪನವರ ಒಲವು– ನಿಲುವುಗಳನ್ನು ಇಷ್ಟ ಪಡುವವರಂತೆ ವಿರೋಧಿಸುವವರೂ ಇದ್ದಾರೆ. ಇದರಿಂದಾಗಿ ಸಾಹಿತ್ಯ ವಲಯದಲ್ಲಿ ಭೈರಪ್ಪನವರ ಕೃತಿಗಳು ಉಳಿದವರಿಗಿಂತ ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ.
‘ಆವರಣ’ ಸೇರಿದಂತೆ ಭೈರಪ್ಪನವರ ಅನೇಕ ಕೃತಿಗಳು ಎಂಟು, ಹತ್ತು ಮುದ್ರಣಗಳನ್ನು ಕಂಡಿವೆ.