ಬೆಂಗಳೂರು: ‘ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರಿಗೆ ಆಸಕ್ತಿ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತವಾದ ಸ್ವಾತಂತ್ರ್ಯ ನೀಡಬೇಕು’ ಎಂದು ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್್ ತಿಳಿಸಿದರು.
ನಗರದಲ್ಲಿ ಸೋಮವಾರ ನಡೆದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ‘ಸುವರ್ಣ ವಾರ್ಷಿಕೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇತಿಹಾಸದ ಪುಟಗಳನ್ನು ನೋಡಿದಾಗ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿಗಳು ಉತ್ತಮ ಕಾವ್ಯ ರಚನೆ ಮಾಡಿರುವುದು ಬಹುತೇಕ ತಮ್ಮ ಹಿರಿ ವಯಸ್ಸಿನಲ್ಲಿಯೇ ಎಂದು ಕಂಡುಬಂದಿದೆ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಜನ 30 ವರ್ಷದ ಒಳಗಿನವರೇ ಎಂಬುವುದು ಗಮನೀಯ ಅಂಶ. ಆದ್ದರಿಂದ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು’ ಎಂದರು.
‘ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ವಿಜ್ಞಾನ ಸಂಗ್ರಹಾಲಯಗಳ ಪ್ರಾಮುಖ್ಯತೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ರಾವ್ ‘ಕಳೆದ ಶತಮಾನದಲ್ಲಿ ನಮ್ಮ ದೇಶವು ವಿಜ್ಞಾನ ಕ್ಷೇತ್ರಕ್ಕೆ ಅಪಾರವಾದ ಪ್ರಾಮುಖ್ಯತೆನ್ನು ನೀಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿಲ್ಲ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ರಾಷ್ಟ್ರೀಯ ವಿಜ್ಞಾನ ಮತ್ತು ವಸ್ತುಸಂಗ್ರಹಾಲಯಗಳ ಮಂಡಳಿ (ಎನ್ಸಿಎಸ್ಎಂ) ಅಧ್ಯಕ್ಷ ಪ್ರೊ.ಆರ್.ಸಿ.ಸೋಬ್ಬತ್ತಿ ಮಾತನಾಡಿ ‘ಸಂಗ್ರಹಾಲಯದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿರುವುದು ಸಂತೋಷದ ವಿಷಯವಾಗಿದೆ. ಆದರೆ, ಇದು ಇಲ್ಲಿಗೆ ಕೊನೆಯಾಗದೆ ಇನ್ನೂ ಹೆಚ್ಚಿನ ಆವಿಷ್ಕಾರಗಳನ್ನು ಕೈಗೊಳ್ಳಲು ಮುಂದಾಗಬೇಕು’ ಎಂದರು.
ನಂತರ ಎನ್ಸಿಎಸ್ಎಂ ಸದಸ್ಯರಾದ ಡಾ.ಸರೋಜ್ ಘೋಷ್ ‘ದೇಶದಲ್ಲಿ ಸುಮಾರು 48 ವಿಜ್ಞಾನ ಸಂಗ್ರಹಾಲಯಗಳಿದ್ದು, ಮುಂದಿನ ತಿಂಗಳು ಮಂಗಳೂರು ಹಾಗೂ ಪುದುಚೇರಿಯಲ್ಲಿ ವಿಜ್ಞಾನ ಕೇಂದ್ರಗಳು ಸ್ಥಾಪನೆಯಾಗಲಿವೆ. ಮುಂದಿನ ವರ್ಷದ ಕೊನೆಗೆ ದೇಶವು 66 ವಿಜ್ಞಾನ ಕೇಂದ್ರಗಳನ್ನು ಹೊಂದಲಿದೆ’ ಎಂದರು.
ಕಾರ್ಯಕ್ರಮದ ಆಕರ್ಷಣಿಯ ಅಂಶಗಳು
ಕಾರ್ಯಕ್ರಮದಲ್ಲಿ ಗೋಳದ ಮೇಲೆ ವಿಜ್ಞಾನ, ಯಾಂತ್ರಿಕ ಕೈಸಾಲೆ–ವಸ್ತುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಹಾಗೂ ಡೈನೊಸಾರ್– ಅಂಕಣ ಎಂಬ ನೂತನ ಪ್ರದರ್ಶನಗಳು ಸಾರ್ವಜನಿಕರ ಹಾಗೂ ಮಕ್ಕಳ ಗಮನ ಸೆಳೆದವು.
ಡೈನೊಸಾರ್–ಅಂಕಣ
ಡೈನೊಸಾರ್ಗೆ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿ, ಡೈನೊಸಾರ್ ಯಾವ ಕಾಲದಲ್ಲಿ ಯಾವ ಪ್ರದೇಶದಲ್ಲಿ ಯಾವ ರೂಪದಲ್ಲಿ ಜೀವಿಸಿತ್ತು ಹಾಗೂ ಅದು ಹೇಗೆ ಅವನತಿಯನ್ನು ಹೊಂದಿತು ಇನ್ನೂ ಮುಂತಾದ ಮಾಹಿತಿಯೊಂದಿಗೆ ಡೈನೊಸಾರ್ನ್ನು ಹೊಲುವ ನಿಜಗಾತ್ರದ ಪ್ರತಿಮೆಯಿದ್ದು, ಅದರ ಚಲನ–ವಲನ, ಶಬ್ಧ ಹಾಗೂ ಅದು ಜೀವಿಸಿದ್ದ ಕಾಲದ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ.
ಗೋಳದ ಮೇಲೆ ವಿಜ್ಞಾನ
ಮಲ್ಟಿಮೀಡಿಯಾ ಸಹಾಯದಿಂದ ದೊಡ್ಡ ದೃಶ್ಯೀಕರಣ ವ್ಯವಸ್ಥೆಯಲ್ಲಿ ಪ್ರತಿನಿತ್ಯ ಭೂಮಿಯ ಮೇಲೆ ವಿವಿಧ ಚಟುವಟಿಕೆಗಳು ಹೇಗೆ ನಡೆಯುತ್ತವೆ ಎಂದು ಪ್ರಾಯೋಗಿಕವಾಗಿ ತಿಳಿಸಲು ಕೃತಕ ಭೂಗೋಳವನ್ನು ದೇಶದಲ್ಲಿಯೇ ಮೊದಲ ಬಾರಿಗೆ ತಯಾರಿಸಲಾಗಿದೆ. ಇದರ ಸಹಾಯದಿಂದ ಹವಾಮಾನ ವೈಪರೀತ್ಯ, ದಿನದಲ್ಲಿ ಸಂಚರಿಸುವ ವಿಮಾನಗಳ ಹಾರಾಟ ಮುಂತಾದವನ್ನು ನೋಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.