ಕಲಬುರ್ಗಿ: ಪತಿಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಬೇಸತ್ತ ಪತ್ನಿ ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹ ತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ರೈಲ್ವೆ ಹಳಿಯಲ್ಲಿ ಮಂಗಳವಾರ ನಡೆದಿದೆ.
ಇವರು ರೈಲ್ವೆ ಹಳಿಯ ಮೇಲೆ ಹೋಗುತ್ತಿರುವುದನ್ನು ಗಮನಿಸಿದ ಪಿಡಿಎ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿ ಸಿದ್ದಲಿಂಗ ಕೂಡಲೇ ಸ್ಥಳಕ್ಕೆ ಧಾವಿಸಿ ಇವರನ್ನು ರಕ್ಷಿಸಿದ್ದಾರೆ.
ನಗರದ ಚೌಡೇಶ್ವರಿ ಕಾಲೊನಿಯ ಪಂಕಜಾ ಆತ್ಮಹತ್ಯೆಗೆ ಯತ್ನಿಸಿದವರು. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಇವರು ಏಳು ವರ್ಷಗಳ ಹಿಂದೆ ಫೈನಾನ್ಸ್ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ನರೇಂದ್ರ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಪ್ರೀತ್ ಮತ್ತು ನಿರೀಕ್ಷಾ ಎಂಬ ಮಕ್ಕಳು ಇದ್ದಾರೆ.
‘ಮದುವೆಯಾದ ಆರಂಭದಲ್ಲಿ ಚೆನ್ನಾಗಿದ್ದ ಪತಿ ಬಳಿಕ ಅನುಮಾನದಿಂದ ನೋಡಲು ಆರಂಭಿಸಿದ. ಮನೆಗೆ ಯಾರೇ ಬಂದರೂ ಯಾವುದೇ ದೂರವಾಣಿ ಕರೆ ಬಂದರೂ ಸಂಶಯ ಪಡುತ್ತಿದ್ದ. ಈ ಬಗ್ಗೆ ಹತ್ತು ಹಲವು ಪ್ರಶ್ನೆ ಕೇಳಿ ಹಿಂಸೆ ನೀಡುತ್ತಿದ್ದ. ಅದರಿಂದ ನೊಂದು ಆತ್ಮಹತ್ಯೆಗೆ ಮುಂದಾಗಿದ್ದೆ’ ಎಂದು ಪಂಕಜಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.