ಬೆಂಗಳೂರು: ಸಬ್ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಪತ್ರಕರ್ತೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ರವಿಕುಮಾರ್ (40) ಎಂಬುವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ರವಿಕುಮಾರ್, ನಗರದ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಈಗಾಗಲೇ ವಿವಾಹಿತರಾಗಿರುವ ಅವರಿಗೆ ಮಗಳಿದ್ದಾಳೆ.
ಆರೋಪಿ ತಾನು ಉಪ್ಪಾರಪೇಟೆ ಠಾಣೆಯಲ್ಲಿ ಎಸ್ಐ ಎಂದು ಸುಳ್ಳು ಹೇಳಿ ಪತ್ರಕರ್ತೆಯನ್ನು ಪರಿಚಯಿಸಿಕೊಂಡಿದ್ದರು. ಅಲ್ಲದೇ, ಅವರನ್ನೇ ಮದುವೆಯಾಗುವುದಾಗಿ ಮತ್ತು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಏಪ್ರಿಲ್ನಲ್ಲಿ ತೀರ್ಥಹಳ್ಳಿಯ ಪೊಲೀಸ್ ಪ್ರವಾಸಿಮಂದಿರಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತೆ ಗರ್ಭಿಣಿಯಾದ ನಂತರ ರವಿಕುಮಾರ್, ಅವರಿಂದ ದೂರವಾಗಿ ಮದುವೆಯಾಗಲು ನಿರಾಕರಿಸಿದ್ದಾರೆ. ಅಲ್ಲದೇ, ಅತ್ಯಾಚಾರದ ಸಂಗತಿಯನ್ನು ಯಾರಿಗೂ ತಿಳಿಸದಂತೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪತ್ರಕರ್ತೆ ನೀಡಿದ ದೂರು ಆಧರಿಸಿ ಅತ್ಯಾಚಾರ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ರವಿಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿವಾಹಿತರಾಗಿರುವ ಆ ಪತ್ರಕರ್ತೆ ಕೌಟುಂಬಿಕ ಕಾರಣಕ್ಕೆ ಸುಮಾರು ಆರು ವರ್ಷಗಳ ಹಿಂದೆಯೇ ಪತಿಯಿಂದ ದೂರವಾಗಿದ್ದಾರೆ. ಅವರಿಗೆ ಒಬ್ಬಳು ಮಗಳಿದ್ದಾಳೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.