ಮಂಬೈ (ಪಿಟಿಐ): ಮಹಾರಾಷ್ಟ್ರ ಕಾಂಗ್ರೆಸ್ನಲ್ಲಿ ಎದ್ದಿರುವ ವಿವಾದವನ್ನು ಶಮನಗೊಳಿಸಲು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಾಣಿಕರಾವ್ ಠಾಕ್ರೆ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಾರಾಯಣ ರಾಣೆ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದರು.
ತಮ್ಮ ರಾಜೀನಾಮೆ ಹಿಂಪಡೆಯುವಂತೆ ರಾಣೆ ಅವರ ಮನವೊಲಿಸಲು ಚವಾಣ್ ಮತ್ತು ಠಾಕ್ರೆ ಅವರು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಹೀಗಾಗಿ ಈ ಬಿಕ್ಕಟ್ಟು ಬಗೆಹರಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಡಲಾಗಿದೆ.
‘ನಾನು, ಚವಾಣ್ ಮತ್ತು ಠಾಕ್ರೆ ಮಧ್ಯೆ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಸೋನಿಯಾ ಭೇಟಿ ನಂತರ ರಾಜೀನಾಮೆಗೆ ಕಾರಣವಿರುವ ಅಂಶಗಳ ಬಗ್ಗೆ ಪ್ರಸ್ತಾಪ ಮಾಡುತ್ತೇನೆ’ ಎಂದು ರಾಣೆ ಸುದ್ದಿಗಾರರಿಗೆ ತಿಳಿಸಿದರು.
‘ಸರ್ಕಾರಕ್ಕೆ ನಿಮ್ಮ ಸೇವೆ ಅಗತ್ಯ. ರಾಜೀನಾಮೆ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು. ಆದರೆ, ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ವಿಷಯಗಳ ಬಗ್ಗೆ ಮೊದಲು ಪ್ರತಿಕ್ರಿಯಿಸಲು ನಾನು ತಿಳಿಸಿದೆ’ ಎಂದು ರಾಣೆ ಹೇಳಿದರು.
ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣೀಟ್ಟಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ‘ಅಂತಹ ಯಾವುದೇ ಬೇಡಿಕೆಯನ್ನು ನಾನು ಇಟ್ಟಿಲ್ಲ. ನನ್ನ ರಾಜೀನಾಮೆ ಅಂಗೀಕರಿಸುವುದರಲ್ಲಿ ಪರಿಹಾರ ಅಡಗಿದೆ’ ಎಂದರು.
‘ರಾಜೀನಾಮೆ ಪತ್ರದಲ್ಲಿ ಉಲ್ಲೇಖಸಿರುವ ಅಂಶಗಳ ಬಗ್ಗೆ ಪರಿಹಾರ ಕಂಡು ಹಿಡಿಯೋಣ. ಈಗ ರಾಜೀನಾಮೆ ಹಿಂಪಡೆಯಿರಿ’ ಎಂದು ರಾಣೆ ಅವರಿಗೆ ಸೂಚಿಸಲಾಗಿದೆ. ಒಪ್ಪಂದದ ಮೂಲಕ ಸಮಸ್ಯೆ ಬಗೆಹರಿಯಲಿದೆ ಎನ್ನುವ ವಿಶ್ವಾಸವನ್ನು ಚವಾಣ್ ವ್ಯಕ್ತಪಡಿಸಿದ್ದಾರೆ.