ನವದೆಹಲಿ (ಪಿಟಿಐ): ‘ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರದ್ದೂ ಮಹತ್ತರ ಪಾತ್ರವಿದೆ. ಅವರು ತಮ್ಮ ಸಾಧನೆಗಳನ್ನು ದಾಖಲಿಸಬೇಕು’ ಎಂದು ಕೇಂದ್ರ ವಾಣಿಜ್ಯ ರಾಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನಿಡಿದ್ದಾರೆ.
ಇಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಸಮ್ಮೇಳನದಲ್ಲಿ ಶನಿವಾರ, ‘ರಾಜಕೀಯ ಮತ್ತು ಸಾಮಾಜಿಕ ನಾಯಕತ್ವದಲ್ಲಿ ಹಿಂದೂ ಮಹಿಳೆಯರ ಪಾಲ್ಗೊಳ್ಳುವಿಕೆ’ ಕುರಿತು ಅವರು ಮಾತನಾಡಿದರು.
‘ಮಹಿಳೆಯರು ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಮೊದಲಿನಿಂದಲೂ ದುಡಿದೇ ಇದ್ದಾರೆ. ಅದನ್ನು ದಾಖಲಿಸುವ ಕೆಲಸ ಆರಂಭಿಸಬೇಕು. ಆದರದು ಸ್ವಪ್ರತಿಷ್ಠೆಯ ವಿಷಯವಾಗದೆ, ಉತ್ತಮ ದಾಖಲೆಗಳಾಗಬೇಕು. ಅವನ್ನು ಹೊರ ಜಗತ್ತಿಗೆ ತೋರಿಸಬೇಕು. 21ನೇ ಶತಮಾನದಲ್ಲಿ ಇಂತಹ ಒಂದು ವಿಶಿಷ್ಟ ದಾಖಲಾತಿಯ ಅವಶ್ಯಕತೆಯಿದೆ’ ಎಂದು ಅವರು ಹೇಳಿದರು.
‘ರಾಜಕಾರಣ ಎಂಬುದು ಒಂದು ಮುಕ್ತ ಪ್ರವೇಶವುಳ್ಳ ಪೆಟ್ಟಿಗೆಯಿದ್ದಂತೆ. ಅದು ಎಲ್ಲರನ್ನೂ ತನ್ನೊಳಗೆ ಎಳೆದುಕೊಳ್ಳುತ್ತದೆ. ಹೀಗಾಗಿ ಅದು ಕೆಲವರಿಗಷ್ಟೇ ಮೀಸಲಾಗಿರಬೇಕಿಲ್ಲ. ಮಹಿಳೆಯರು ಇಂದು ರಾಜಕಾರಣದಲ್ಲಿದ್ದಾರೆ. ಮುಂದೆಯೂ ಈ ಕ್ಷೇತ್ರದಲ್ಲಿ ಅವರು ಇರಲೇಬೇಕು’ ಎಂದರು.
ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ‘ಮಹಿಳೆಯರಿಗೆ ಶಿಕ್ಷಣ ನೀಡುವತ್ತ ನಮ್ಮ ಗಮನ ಕೇಂದ್ರೀಕೃತವಾಗಬೇಕು’ ಎಂದರು.
ಆಯ್ಕೆ ಸ್ವಾತಂತ್ರ್ಯ ಬಳಸಿ: ಮಹಿಳೆಯರು ಆಯ್ಕೆ ಸ್ವಾತಂತ್ರ್ಯವನ್ನು ಬಳಸಲು ಮುಂದಾಗಬೇಕು. ಆದರೆ ಯುಕ್ತವಾಗಿ, ಸರಿಯಾದ ಮಾರ್ಗದಲ್ಲಿ ಈ ಹಕ್ಕನ್ನು ಬಳಸಿಕೊಳ್ಳಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಮಾಧ್ಯಮಗಳು ಮಹಿಳೆಯರನ್ನು ಸರಕಿನಂತೆ ಬಿಂಬಿಸುತ್ತಿರುವ ಸಿದ್ಧಾಂತಗಳು, ನಿರೂಪಣೆಗಳು, ಕಥೆಗಳನ್ನು ನೀವು ಸುಮ್ಮನೆ ನೋಡುತ್ತೀರಿ ಮತ್ತು ಕಣ್ಣೀರು ಹಾಕುತ್ತೀರಿ. ಆದರೆ ಮಹಿಳೆಯರು ಇದಕ್ಕಿಂತಲೂ ಭಿನ್ನವಲ್ಲವೆ? ಹೊಸತನಕ್ಕೆ ಮುಂದಡಿಯಿಟ್ಟ ಮಹಿಳೆಯರ ಮೇಲೆ ಒತ್ತಡ ಬಂದೊಡನೆ ಇದು ನೈತಿಕ
ಪೊಲೀಸ್ಗಿರಿ ಎಂದು ಕೂಗುತ್ತೇವೆ. ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಳುವ ಮುನ್ನ, ನಾವು ಏನು ಮಾಡಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು ಎಂದರು.
ಮಹಿಳೆಯರು ಭಾಗವಹಿಸಿದ ಚಿಪ್ಕೋ ಚಳವಳಿಯಂತಹ ಉದಾರಣೆಗಳು ನಮ್ಮ ಮುಂದಿವೆ. ಮಹಿಳೆಯರು ಆಯ್ಕೆ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಕು ಎಂದರು.