ಪಟ್ನಾ (ಐಎಎನ್ಎಸ್): ‘ಮುಖ್ಯಮಂತ್ರಿ ಕಚೇರಿಯಲ್ಲಿ ನನ್ನ ದಿನಗಣನೆ ಆರಂಭವಾಗಿದೆ’ ಎಂದು ಬಿಹಾರದ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಹೇಳಿರುವ ಬೆನ್ನಲ್ಲೇ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ತೆರೆಮರೆಯ ಕಸರತ್ತು ಆರಂಭ ಆಗಿದೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
‘ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನಗಳು ನಡೆದಿವೆ. ಇದನ್ನು ನಾನು ಬಲ್ಲೆ, ನವೆಂಬರ್ ಅಂತ್ಯದವರೆಗೆ ಈ ಹುದ್ದೆಯಲ್ಲಿರುತ್ತೇನೆಂದು ಹೇಳಲು ಸಾಧ್ಯವಿಲ್ಲ’ ಎಂದು ಮಾಂಝಿ ಹೇಳಿದ್ದಾರೆ.
ಮಾಂಝಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಸೃಷ್ಟಿಯಾಗಿರುವ ರಾಜಕೀಯ ಬೆಳವಣಿಗೆಗಳ ಕುರಿತು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿಯು ಪಕ್ಷದ ಅಧ್ಯಕ್ಷ ಶದರ್ ಯಾದವ್ ಅವರು ಸೋಮವಾರ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು.
ಸಭೆಯ ನಂತರ ಈ ಕುರಿತು ಪ್ರತಿಕ್ರಿಯೆ ನೀಡಲು ನಿತೀಶ್ ಕುಮಾರ್ ನಿರಾಕರಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ಮಾಂಝಿ ಅವರನ್ನು ಪದಚ್ಯುತಗೊಳಿಸಬೇಕು ಎಂದು ಶರದ್ ಯಾದವ್ ಬೆಂಬಲಿಗರು ಮತ್ತು ಕೆಲ ಸಚಿವರು ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಮಾಂಝಿ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ನಿತೀಶ್ ಕುಮಾರ್ ಅವರನ್ನು ಪುನಃ ನೇಮಕ ಮಾಡುವಂತೆ ಪಕ್ಷದ ಪ್ರಭಾವಿಗಳ ಗುಂಪೊಂದು ಪ್ರಯತ್ನಿಸುತ್ತಿದೆ. ‘ನಾನು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗ ಹಾಗೂ ಪಕ್ಷದಲ್ಲಿರುವ ಮೇಲ್ಜಾತಿಯವರು ವಿದೇಶಿಗರು ಮತ್ತು ಎಸ್ಸಿಎಸ್ಟಿಗಳು ಸ್ಥಳೀಯರು’ ಎಂದು ಮಾಂಝಿ ಹೇಳಿದ್ದರು.
ಈ ಹೇಳಿಕೆ ಪಕ್ಷದೊಳಗೆ ವಿವಾದಕ್ಕೆ ನಾಂದಿ ಹಾಡಿತ್ತು. ‘ಈ ರೀತಿ ಮಾತನಾಡದಂತೆ ನನಗೆ ಯಾರು ಸಲಹೆ ನೀಡಿದ್ದಾರೋ ಅವರಿಗಿಂತ ಹೆಚ್ಚು ಜ್ಞಾನ ನನಗಿದೆ’ ಎಂದು ಮಾಂಝಿ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.