ಬೆಂಗಳೂರು: ‘ಹೂ ಬಿಡುವ ಕಾಲದಲ್ಲಿ ಬಂದ ಅಕಾಲಿಕ ಮಳೆ ಮತ್ತು ಎರಡು ತಿಂಗಳಿನಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿರುವ ಕಾರಣ ಈ ವರ್ಷ ಮಾವಿನ ಫಸಲು ವಾಡಿಕೆಗಿಂತ 1 ಲಕ್ಷ ಟನ್ ಕಡಿಮೆಯಾಗಲಿದೆ’ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ತಿಳಿಸಿದರು.
ತೋಟಗಾರಿಕಾ ಇಲಾಖೆ, ಕೃಷಿ ಮತ್ತು ಸಂಸ್ಕರಿತ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೆಡಾ) ಮತ್ತು ಇನೋವಾ ಅಗ್ರಿ ಬಯೋಪಾರ್ಕ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾವು ಬೆಳೆಗಾರರ ಮತ್ತು ರಫ್ತುದಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ರಾಜ್ಯದ 5 ಲಕ್ಷ ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರತಿ ವರ್ಷ 12 ರಿಂದ 13 ಲಕ್ಷ ಟನ್ ಫಸಲು ಬರುತ್ತಿತ್ತು. ಈ ಬಾರಿ ಈ ಪ್ರಮಾಣ ಕಡಿಮೆಯಾದರೂ, ರಫ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು. ಅಮೆರಿಕಾ, ಮಲೇಷಿಯಾ ಮುಂತಾದ ದೇಶಗಳಿಂದ ರಾಜ್ಯದ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದೆ. ವಿದೇಶಗಳಿಗೆ ಮಾವು ರಫ್ತು ಮಾಡುವುದಕ್ಕೆ ಇದ್ದ ತಾಂತ್ರಿಕ ಸಮಸ್ಯೆ ನಿವಾರಿಸಲಾಗಿದೆ. ಮಾವು ರಫ್ತುದಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಸಂಬಂಧ ಇನೋವಾ ಅಗ್ರಿ ಬಯೋಪಾರ್ಕ್ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿದೇಶಕ್ಕೆ ರಫ್ತು ಮಾಡುವ ಪ್ರತಿ ಕೆ.ಜಿ ಮಾವಿನ ಸಂಸ್ಕರಣೆಗೆ ₹ 80 ರಿಂದ 100 ವೆಚ್ಚವಾಗಲಿದೆ. ಇದಕ್ಕೆಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಈ ವರ್ಷ 10 ಸಾವಿರ ಟನ್ಮಾವು ರಫ್ತು ಗುರಿ ಹೊಂದಲಾಗಿದೆ ಎಂದರು.