ಮುಂಬೈ (ಪಿಟಿಐ): ಆಡಳಿತಕ್ಕೆ ಚುರುಕು ನೀಡಲು ಪ್ರಧಾನಿ ಕಚೇರಿ ಮಾದರಿಯಲ್ಲಿಯೇ ಮುಖ್ಯಮಂತ್ರಿ ಕಚೇರಿಯನ್ನೂ ಮಾರ್ಪಡಿಸಲು ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂದಾಗಿದ್ದಾರೆ. ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಕಚೇರಿ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸಕ್ಕೆ ಕೈಹಾಕಿರುವ ಅವರು, ಕಾರ್ಯವೈಖರಿಯಲ್ಲಿ ಹೊಸತನ ತರುವುದಾಗಿ ಹೇಳಿದ್ದಾರೆ.
ಎಲ್ಲ ಕೆಲಸಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಸಚಿವರಿಗೆ ದಕ್ಷ ಅಧಿಕಾರಿಗಳ ತಂಡ ನೆರವು ನೀಡಲಿದೆ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಸ್ಥಳೀಯ ತೆರಿಗೆ ರದ್ದುಗೊಳಿಸಲು ಸರ್ಕಾರ ಬದ್ಧವಾಗಿದ್ದು, ತೆರಿಗೆ ನೀತಿಯಲ್ಲೂ ಬದಲಾವಣೆ ತರುವ ಬಗ್ಗೆ ಚಿಂತಿಸುತ್ತಿರುವುದಾಗಿ ಹೇಳಿದರು. ಟೋಲ್ ತೆರಿಗೆ ರದ್ದುಪಡಿಸುವ ಮತ್ತೊಂದು ಭರವಸೆಬಗ್ಗೆ ಪ್ರಸ್ತಾಪಿ ಸಿದ ಅವರು, ಮತ್ತೊಂದು ಪರ್ಯಾಯ ವ್ಯವಸ್ಥೆ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದರು.
ಜನರನ್ನು ಕಡೆಗಣಿಸಿದರೆ ತಕ್ಕಶಾಸ್ತಿ: ಸೇನೆ
ಅಧಿಕಾರಕ್ಕೆ ಬಂದ ನಂತರ ಏನು ಮಾಡಿದರೂ ನಡೆಯುತ್ತದೆ ಎಂಬ ನಿರ್ಲಕ್ಷ್ಯ ಧೋರಣೆ ಬೇಡ. ಜನಸಾಮಾನ್ಯರನ್ನು ಕಡೆಗಣಿಸದರೆ ಅವರೇ ಕಿವಿಹಿಂಡಿ ಬುದ್ಧಿ ಕಲಿಸುತ್ತಾರೆ. ಹೀಗಾಗಿ ಜನರನ್ನು ಸಂತುಷ್ಟಗೊಳಿಸುವುದನ್ನು ಬಿಟ್ಟು ಅವರ ಆಶೋತ್ತರಗಳನ್ನು ಈಡೇರಿಸುವತ್ತ ಹೊಸ ಸರ್ಕಾರ ಗಮನ ಹರಿಸಲಿ ಎಂದು ‘ಸಾಮ್ನಾ’ದ ಸಂಪಾದಕೀಯ ಹೊಸ ಮುಖ್ಯಮಂತ್ರಿ ಫಡ್ನವೀಸ್ ಅವರಿಗೆ ಕಿವಿಮಾತು ಹೇಳಿದೆ.