ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ಮಾಯವಾಗಲಿ, ವಿಜ್ಞಾನ ವಿಜೃಂಭಿಸಲಿ

ಅಕ್ಷರ ಗಾತ್ರ

ಯಾವುದೇ ದೇಶದ ಪ್ರಗತಿಗೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಲಭ್ಯವಾಗುವ ಗೌರವಕ್ಕೆ ಹಾಗೂ ಆರ್ಥಿ­ಕಾ­ಭಿವೃದ್ಧಿಗೆ ವಿಜ್ಞಾನ-, ತಂತ್ರಜ್ಞಾನ ಕ್ಷೇತ್ರದ ಮುನ್ನ­ಡೆಯೇ ಕಾರಣ. ಆದರೆ ಜನರಲ್ಲಿ, ಅದ­ರಲ್ಲೂ ಹೆಚ್ಚಾಗಿ ನಮ್ಮ ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿ­­ಕೋನದ ಕೊರತೆ ಎದ್ದು ಕಾಣುತ್ತಿದೆ.

ಎಸ್ಸೆಸ್ಸೆಲ್ಸಿ, ಪಿ.ಯು.ಸಿ ದಿನಗಳಲ್ಲಿ ಉತ್ಸಾ­ಹ­ದಿಂದ ವಿಜ್ಞಾನ ಕಲಿಯುವ ಮಕ್ಕಳು ಮುಂದೆಯೂ ಆ ವಿಷಯದಲ್ಲಿ ಆಸಕ್ತಿ ಉಳಿಸಿ­ಕೊ­ಳ್ಳು­ತ್ತಾ­­ರೆಯೇ? ಕನಿಷ್ಠ ತಮ್ಮ ದೃಷ್ಟಿಕೋನ­ವನ್ನಾ­ದರೂ ವೈಜ್ಞಾನಿಕ­ವಾಗಿ ಬದಲಿಸಿಕೊಳ್ಳು­ತ್ತಾ­ರೆಯೇ? ಟಿ.ವಿ ಕಾರ್ಯ­ಕ್ರಮ­­ಗಳು ಮೌಢ್ಯದ ಸರಕನ್ನು ಎಗ್ಗಿಲ್ಲದೇ ಬಿತ್ತರಿ­ಸು­ತ್ತಿ­­ರುವು­ದನ್ನು ನೋಡಿದರೆ, ಹಿಂದೆ ಕಲಿತ ವಿಜ್ಞಾನ ನಮ್ಮ ವಿದ್ಯಾ­ರ್ಥಿ­ಗಳನ್ನು ಎಚ್ಚರಿಸಿದಂತೆ ಕಾಣು­ವುದಿಲ್ಲ.

ಆಸಕ್ತಿಗೊ, ನೌಕರಿಯ ಹಿತದೃಷ್ಟಿಗೊ, ಪಾರಂಪರಿಕ ಕೌಶಲ ಅಥವಾ ಉದ್ದಿಮೆಯ ಅಭಿ­ವೃದ್ಧಿ­ಗಾ­ಗಿಯೊ ಎಸ್ಸೆಸ್ಸೆಲ್ಸಿ, ಪಿ.ಯು.ಸಿ ನಂತರದ ಮಕ್ಕಳ ಓದು ಬೇರೆ ಬೇರೆ ವಿಷಯಗಳತ್ತ ಬದ­ಲಾ­ಗುತ್ತದೆ. ಆದರೆ ಎಲ್ಲೇ ಇರಲಿ, ಹೇಗೇ ಇರಲಿ ಎಂದೆಂದಿಗೂ ತಮ್ಮ ಜೀವನಶೈಲಿಯನ್ನು ವೈಜ್ಞಾ­ನಿಕ ದೃಷ್ಟಿ­ಕೋನ­ದಿಂದ ನೋಡಬಲ್ಲ ಆಸಕ್ತಿಯನ್ನು ಅವರಲ್ಲಿ ಬೆಳೆಸು­ವುದು ಹೇಗೆ?

ದೂರಸಂಪರ್ಕ ತಂತ್ರಜ್ಞಾನದಲ್ಲಿ ದೇಶದ ಸಾಧನೆ ಜಗತ್ತಿನ ಬೆರಳೆಣಿಕೆಯ ದೇಶಗಳಿಗೆ ಸರಿಸ­ಮಾನ. ನಾವೇ ಅಭಿವೃದ್ಧಿಪಡಿಸಿದ ಕೃತಕ ಉಪ­ಗ್ರಹ­ಗಳನ್ನು, ನಮ್ಮದೇ ದೇಶ ನಿರ್ಮಿಸಿದ ಉಡ್ಡ­ಯಣಾ ನೌಕೆ­ಗಳ ಮೂಲಕ ನಿರ್ದಿಷ್ಟ ಕಕ್ಷೆಗೆ ಸೇರಿಸಿ, ದೇಶದ ಮೂಲೆ ಮೂಲೆಯ ಜನರಿಗೂ ನೂರಾರು ಟಿ.ವಿ ವಾಹಿನಿ­ಗಳು, ಸಾಮಾನ್ಯರೂ ಎಗ್ಗಿ­-­ಲ್ಲದೇ ಬಳಸಬಹು­ದಾದ ಅಗ್ಗದ ಮೊಬೈಲ್ ಫೋನ್ ಸಂಪರ್ಕಗಳು, ಉದ್ದಿಮೆ­ಗಳಿಗೆ ವಿದೇಶ­ಗಳೊಡನೆ ಸಾಫ್ಟ್‌ವೇರ್ ವ್ಯವ­ಹಾರ, ಆ ಮೂಲಕ ನಮ್ಮ ಎಂಜಿನಿಯರಿಂಗ್ ವಿದ್ಯಾರ್ಥಿ­ಗಳಿಗೆ ಕೈ ತುಂಬಾ ಸಂಬಳ ಕೊಡುವ ಉದ್ಯೋಗ... ಎಲ್ಲವೂ ಲಭ್ಯವಾಗುವಂತೆ ಮಾಡಿ­ದ್ದೇವೆ. ಆದರೆ, ಅವುಗ­ಳಿಂದ ಆಗುತ್ತಿರುವ ‘ವೈಜ್ಞಾ­­ನಿಕ ಲಾಭ’­ಗಳೆಷ್ಟು ಎಂದು ಪಟ್ಟಿ ಮಾಡಿ ನೋಡಿ.

ಇದು­ವರೆಗೂ ಹೆಂಗಳೆಯರ ಕಣ್ಣುಗಳಲ್ಲಿ ಧಾರಾ­­ಕಾರವಾಗಿ ಕಣ್ಣೀರು ಸುರಿಸುವ ಧಾರಾ­ವಾಹಿ­­ಗಳನ್ನೇ ಬಂಡವಾಳ ಮಾಡಿಕೊಂಡಿದ್ದ ಟಿ.ವಿ ವಾಹಿನಿಗಳು ಇದೀಗ ‘ಭೀತಿ’ಯನ್ನೇ ವಾಣಿಜ್ಯ ಸರಕ­ನ್ನಾ­ಗಿಸಿಕೊಂಡಿವೆ. ಯಾವುದೋ ದೇಶ­­ದಲ್ಲಿ ಹಿಡಿ­ಯುವ ಪಾರ್ಶ್ವ ಗ್ರಹಣಗಳಿಂದ ಹಿಡಿದು ಮಂಗಳ­ವಾರದಂದೇ ಬಂದ ಸಂಕಷ್ಟ ಹರ ಚತುರ್ಥಿಯ ಫಲಾ­ಫಲದವರೆಗಿನ ಸುದ್ದಿ­ಗಳನ್ನು ಪೈಪೋಟಿಗೆ ಬಿದ್ದು ಬಿತ್ತರಿಸುತ್ತವೆ. ಈ ಪ್ರಸಂಗಗ­ಳನ್ನು ವಿಶೇಷ­ವಾಗಿ ಪ್ರಸ್ತಾಪಿಸುವುದಕ್ಕೆ ಕಾರಣ ಇದೆ.

ಜಗತ್ತಿನ ನಾಲ್ಕೈದು ಪ್ರಮುಖ ರಾಷ್ಟ್ರಗಳ ಸಾಲಿ­ನಲ್ಲಿ ಭಾರತವನ್ನು ತಂದು ನಿಲ್ಲಿಸಿರುವ ಬಾಹ್ಯಾ­ಕಾಶ ತಂತ್ರಜ್ಞಾನದ ಕಾರಣದಿಂದಲೇ ಮೊಬೈಲ್ ಫೋನ್‌, ಬಹು ಚಾನೆಲ್‌ಗಳ ಟಿ.ವಿ ಹಾಗೂ ಅಂತ­ರ್ಜಾಲದ ಮೂಲಕ ಜನ್ಮಾಂತರದ ಮೌಢ್ಯ­ವನ್ನು, ಪ್ರಳಯಾಂತಕ ಭವಿಷ್ಯವನ್ನು ಹಾಗೂ ಲೈಂಗಿಕ ಕ್ರೌರ್ಯದ ಮನರಂಜನೆ­ಯನ್ನು ಕ್ಷಣಾರ್ಧದಲ್ಲಿ ಪಸರಿ­ಸುವ ಕೆಲಸ ಇಂದು ಸುಲಭವಾಗಿದೆ.ಯಾವ ಯಾವ ಗ್ರಹಗಳು ನಿಮಗೆ ಯಾವ ಅವಧಿಯಲ್ಲಿ ಕಾಟ ಕೊಡಲು ಸಿದ್ಧವಾಗಿವೆ ಎಂದು ಇಂಗ್ಲಿಷ್ ವರ್ಷದ ಆರಂಭ, ಸಂಕ್ರಾಂತಿ, ಯುಗಾದಿಯಂಥ ವಿಶೇಷ ದಿನಗ­ಳಂದು ಫರ್ಮಾ­ನು­ಗಳು ಹೊರಬೀಳುತ್ತವೆ.

ಇನ್ನು ಸಂಖ್ಯಾ­ಶಾಸ್ತ್ರಜ್ಞರ ಕಲ್ಪನೆಗಳಿಗೆ ಲೆಕ್ಕವೇ ಇಲ್ಲ. ಹುಟ್ಟಿದ ದಿನ, ತಿಂಗಳು, ವರ್ಷಗಳನ್ನು ಕೂಡಿ, ಬಂದ ಉತ್ತರದ ಸಂಖ್ಯೆ­ಯನ್ನು ಒಂದ­ಕ್ಕೊಂದು ಸೇರಿಸಿ ನಿಮ್ಮ ಅದೃಷ್ಟ ಸಂಖ್ಯೆಗೆ ಅದು ತಾಳೆಯಾ­ಗುತ್ತದೆಯೇ ಎಂದು ಪರಿಶೀಲಿಸು­ತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ­ವರು, ಇಂಗ್ಲಿಷ್ ವರ್ಣಮಾಲೆ­ಯಲ್ಲಿ ನಿಮ್ಮ ಹೆಸರಿನ ಅಕ್ಷರಗಳು ಯಾವ ಅನುಕ್ರಮ­ದಲ್ಲಿ ಬರುತ್ತ­ವೆಯೋ ಅದಕ್ಕೊಂದು ಸಂಖ್ಯೆ ನೀಡಿ, ಅವುಗಳೆಲ್ಲವನ್ನೂ ಮತ್ತೆ ಮತ್ತೆ ಕೂಡಿ ಮ್ಯಾಜಿಕ್ ಸಂಖ್ಯೆಯೊಂದನ್ನು ಲಗತ್ತಿಸಿ, ಅದು ನಿಮ್ಮ ರಾಶಿ, -ನಕ್ಷತ್ರಕ್ಕೆ ಸರಿ ಹೊಂದುವುದೋ ಇಲ್ಲವೋ ಎಂದು ತನಿಖೆ ಮಾಡಿಕೊಡುತ್ತಾರೆ. 

ಚುನಾವಣೆ ಹತ್ತಿರ ಬಂದರೆ ರಾಜಕಾರಣಿಗಳ  ಹುಟ್ಟಿದ ದಿನಾಂಕ­ಗಳ ಜೊತೆಗೆ, ಅವರ ಜನ್ಮರಾಶಿ­ಯನ್ನು ಸ್ವಯಂ­ಘೋಷಿತ ಲೆಕ್ಕಾಚಾರ ಶಾಸ್ತ್ರಜ್ಞ­ರಿಗೆ ಕೊಟ್ಟು, ಯಾರಿಗೆ ‘ರಾಜಯೋಗ’­ವಿದೆ, ಮತ್ಯಾರಿಗೆ ‘ಅಮರ ಯೋಗ’ವಿದೆ ಎಂಬು­ದನ್ನು ತಿಳಿಸಿ ವೀಕ್ಷಕ­ರನ್ನು ‘ಮಂಗ’ ಮಾಡುತ್ತಾರೆ. ಬ್ರಹ್ಮಾಂಡವನ್ನೇ ಅರಗಿಸಿಕೊಂಡ ಕಂಟಕ­ರಂತೂ ‘ಚೂಡಿ­ದಾರ್ ಹಾಕ್ಕೊಂಡ್ರೆ ಸರ್ವಿಕಲ್ ಕ್ಯಾನ್ಸರ್ ಬರೋದು ಗ್ಯಾರಂಟಿ’ ಎಂದು ಘಂಟಾ­ಘೋಷ­­ವಾಗಿ ನಿಮ್ಮ ಮೆದುಳನ್ನು ಕಲಸಿಹಾಕಿ­ಬಿಡುತ್ತಾರೆ.

  ಉಳಿ­ದಂತೆ ಫುಟ್‌ಪಾತ್‌­ನಲ್ಲಿ ಕವಡೆ ಹಾಕುತ್ತಿದ್ದ­ವರೂ ಲ್ಯಾಪ್‌ಟಾಪ್‌, ಕಂಪ್ಯೂಟರ್ ಮುಂದಿಟ್ಟು­ಕೊಂಡು, ನೀವು ಪ್ರಶ್ನೆ ಕೇಳಿದ ಸಮಯ, ನಿಮ್ಮ ಹುಟ್ಟಿದ ದಿನಾಂಕ, ಊರಿನ ಅಕ್ಷಾಂಶ -ರೇಖಾಂಶ ಎಲ್ಲ­ವನ್ನೂ ಒಳ­ಗೊಂಡ ಕಲಸುಮೇಲೋಗರಕ್ಕೆ ಒಂದು ವ್ಯಾಖ್ಯಾನ ನೀಡು­ತ್ತಾರೆ. ಯಾವ ರತ್ನದ ಉಂಗು­ರ­­ವನ್ನು ಯಾವ ಬೆರಳಿಗೆ ಹಾಕಿಕೊಂಡು, ಯಾರ ಜಪ ಮಾಡಿದರೆ ನಿಮಗೆ ಉದ್ಯೋಗ, ವಿವಾಹ, ಮಕ್ಕಳು, ಮನೆ, ರೋಗ ನಿವಾರಣೆ ಭಾಗ್ಯ ಲಭ್ಯ­ವಾ­ಗುತ್ತದೆ ಎಂದು ಹೇಳುತ್ತಾ ಸುಲಭ ಪರಿಹಾರ­ಗಳನ್ನು ನೀಡುವ ಪಂಡಿತರಂತೆ ಪೋಸು ಕೊಡುತ್ತಾರೆ.

ಯಾವ ಅಂಗಡಿಯಲ್ಲಿ ಯಾವ ಉಂಗುರ ಖರೀ­ದಿ­­ಸುವುದು ಉತ್ತಮ ಎಂಬ ಸಲಹೆಯನ್ನೂ  ನೀಡುತ್ತಾರೆ. ಅಪ್ಪಟ ಜಾಹೀರಾತಿನ ಯುಗ­ದಲ್ಲಿ ಈ ಕಾರ್ಯಕ್ರಮಗಳನ್ನು ಹಾಕಿದರೆ ಟಿ.ವಿ ವಾಹಿನಿಗಳ ಟಿ.ಆರ್.ಪಿ ಹೆಚ್ಚುವುದಂತೂ ನಿಶ್ಚಿತ. ಅದ್ಯಾವ ಗಳಿಗೆಯಲ್ಲಿ ಈ ‘ವಾಟ್‌ಆ್ಯಪ್‌’ ಎನ್ನುವ ಸೌಲಭ್ಯ ಬಂತೋ, ದುರದೃಷ್ಟದ ದಿನ­ಗಳು ನಮ್ಮನ್ನು ಸತತವಾಗಿ ಕಾಡತೊಡಗಿವೆ. ಪುಕ್ಕಟೆ ಎಸ್ಸೆಮ್ಮೆಸ್‌ಗಳ ಮೂಲಕ ಹಳಸಲು ಜೋಕು­-­ಗಳ ಚಿತ್ರಾನ್ನ ಬಡಿಸುತ್ತಿದ್ದವರೆಲ್ಲರೂ ಜಾಗೃತ­­ಗೊಂಡಿ­ದ್ದಾರೆ. ‘ಬಿ.ಬಿ.ಸಿ ವರದಿ ಮಾಡಿದೆ. ನಾಸಾ ವೆಬ್‌­ಸೈಟಲ್ಲಿ ಬೇಕಿದ್ರೆ ನೋಡಿ.

ಇಂಥ ಗ್ರಹ­ದಿಂದ ಹೊರಟ ವಿಕಿರಣ ಇಷ್ಟು ಹೊತ್ತಿಗೆ ಭೂಮಿ­ಯನ್ನು ಅಪ್ಪಳಿ­ಸು­ತ್ತದೆ.  ಮಕ್ಕಳನ್ನು ಆಚೆ ಕಳುಹಿ­ಸ­ಬೇಡಿ’ ಎಂಬ ಸುಳ್ಳು ಸಂದೇಶ ಒಬ್ಬರ ಮೊಬೈಲ್ ಫೋನಿಗೆ ಬಂದರೂ ಸಾಕು. ಅದನ್ನು ಪೂರ್ತಿ ಓದದೆಯೇ ನೂರು ಜನರಿಗೆ ನೂರಕ್ಕೂ ಕಡಿಮೆ ನಿಮಿಷದಲ್ಲಿ ರವಾ­ನಿಸಲು ಹೊರಡು­ತ್ತಾರೆ.‘ವಿಕಿರಣ ಹಾಗೆಲ್ಲ ಇಷ್ಟು ದೂರ ಬರಲು ಸಾಧ್ಯವಿಲ್ಲ’ ಎಂಬುದನ್ನು ತಿಳಿದ ವಿಜ್ಞಾನ, ತಂತ್ರ­ಜ್ಞಾನದ ವಿದ್ಯಾರ್ಥಿಗಳು, ಸಾಫ್ಟ್‌­ವೇರ್ ಕಂಪೆನಿ ಗಳ ಉದ್ಯೋಗಿಗಳು ಸಹ ಇಂತಹ ನಂಬಿಕೆಗೆ ಹೊರತಾಗುವುದಿಲ್ಲ.

ಯಾವುದೋ ಧಾರ್ಮಿಕ ಸ್ಥಳದಲ್ಲಿ ಕಾಣಿಸಿ­ಕೊಂಡ ಎರಡು ತಲೆಯ ಹಾವಿನ ಬೋಗಸ್ ಡಿಜಿಟಲ್ ಚಿತ್ರವನ್ನು ಹತ್ತಾರು ಜನ­ರಿಗೆ ರವಾನಿಸಿ ‘ಸರ್ಪ ಸಂಸ್ಕಾರ ದೋಷ’ವನ್ನು ಪರಿಹರಿಸಿ­ಕೊಂಡು ಬಿಡುವವರಿದ್ದಾರೆ ಉಳಿದಂತೆ, ‘ಇದು ಮೈಕ್ರೊಸಾಫ್‌, ಹಾಟ್‌­ಮೇಲ್‌, ಯಾಹೂ, ಜೀಮೇಲ್‌... ಕಂಪೆನಿಗಳು ನಡೆಸುತ್ತಿರುವ ಸಮೀಕ್ಷೆ, ಇದರಲ್ಲಿ ಭಾಗಿಯಾ­ಗುವ ಪ್ರತಿ ಸಾವಿರದ ವ್ಯಕ್ತಿಗೆ ಒಂದು ಲ್ಯಾಪ್‌­ಟಾಪ್‌, ಕಂಪ್ಯೂಟರ್ ಇಲ್ಲವೇ ಸ್ಮಾರ್ಟ್ ಫೋನ್ ಕೊಡುಗೆ­ಯಾಗಿ ಬರುತ್ತದೆ.

ಮೇಲ್‌ ಅನ್ನು ಮರು ರವಾನಿಸಿ’ ಎನ್ನುವ ಪತ್ರ ಇ–-ಮೇಲ್ ಖಾತೆಗೆ ಬಂದೊಡನೆಯೇ ಉನ್ನತ, ಮಹೋ­ನ್ನತ, ಅತ್ಯುನ್ನತ ವಿಜ್ಞಾನ-–ತಂತ್ರಜ್ಞಾನ ಸಂಶೋ­ಧನಾ ಸಂಸ್ಥೆ, ಕಂಪೆನಿಗಳ ‘ವಿಜ್ಞಾನ ಕಲಿತವರು’ ಚಕ­ಚಕನೆ ಪರಿಚಿತರಾದ ನೂರಾರು ಜನರಿಗೆ ಅದನ್ನು ಫಾರ್ವರ್ಡ್ ಮಾಡುತ್ತಾರೆ.ಥೇಟ್, ‘ಸಂಗ­ವ್ವಕ್ಕನ ಮುದ್ದಿನ ಸೊಸಿ ಬಸಿರಾದ ಸುದ್ದಿ’ಯ ರೀತಿ ಕಾಳ್ಗಿಚ್ಚಿನಂತೆ ಅದು ಊರ ತುಂಬೆಲ್ಲ ಹಬ್ಬುತ್ತದೆ. 

ನಮ್ಮ ಸಾಧನೆ ಕೇವಲ ವಿಜ್ಞಾನ ಕಲಿಯು­ವು­ದಷ್ಟೇ ಅಲ್ಲ, ಉತ್ತಮ ಅಂಕಗಳನ್ನು ಪಡೆದು, ಉನ್ನತ ಪದವಿ­­ಗಳನ್ನು ಗಳಿಸಿ, ಪರಮೋಚ್ಚ ಉದ್ಯೋಗ ಹಿಡಿಯು­ವುದಷ್ಟೇ ಅಲ್ಲ. ಅವೆಲ್ಲ­ವನ್ನೂ ಮೀರಿ ಸಮು­ದಾಯದ ಪ್ರಗತಿಯತ್ತ ಸಾಗ­ಬೇಕು. ಮೌಢ್ಯವನ್ನು ನಮ್ಮ ಮೆದುಳಿ­ನಿಂದಲೇ ಮೊದಲು ಅಳಿಸಿ, ಪರಿಸರ­ದಲ್ಲಿನ ಮೌಢ್ಯ­ವನ್ನು ಚೊಕ್ಕಟ ಮಾಡುತ್ತಾ ವಿಜ್ಞಾನ ಕಲಿ­ಯಲು, ಅರಿ­ಯಲು ಅವಕಾಶ ಇರದವ­ರನ್ನು ಜಾಗೃತ­ಗೊಳಿಸುವಂತೆ ಆಗಬೇಕು.

ಗಾಂಧೀಜಿ ಹೇಳುತ್ತಿದ್ದರಂತೆ ‘ನಮ್ಮ ದೇಶಕ್ಕೆ ನಿಜ­ವಾದ ಸ್ವಾತಂತ್ರ್ಯ ಬಂದಿದೆ ಎಂದು ಖಚಿತವಾ­ಗು­ವುದು ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ಮಹಾ­ನಗರ­­­­ದಲ್ಲಿ ಸುರಕ್ಷಿತವಾಗಿ ಅಡ್ಡಾಡುವ ದಿನ ಬಂದಾಗ’ ಎಂದು. ಆ ಮಾತನ್ನು ಕೊಂಚ ಬದ­­ಲಿಸಿ ‘ನಮ್ಮ ಹೆಣ್ಣು ಮಕ್ಕಳು ಮೌಢ್ಯ ಬಿತ್ತುವ ಟಿ.ವಿ ಕಾರ್ಯ­­­­ಕ್ರಮಗಳು ಯಾವುದೇ ಸಮಯ­ದಲ್ಲಿ ಬಿತ್ತರವಾದರೂ ಚಕ್ಕೆಂದು ಆರಿಸಿ, ಗಂಡ, ಮಕ್ಕ­ಳನ್ನು ಬೇರೆ ಕಾರ್ಯಕ್ರಮಗಳತ್ತ ಗಮನ ಹರಿ­ಸುವಂತೆ ಮಾಡುವ ದಿನ ಬಂದಾಗ­ಲಷ್ಟೇ ನಮಗೆ ನಿಜವಾದ ಸ್ವಾತಂತ್ರ್ಯ ಬಂದಂತೆ’ ಎನ್ನಬಹುದು.

ಇಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಪ್ರಸ್ತಾ­ಪಿ­ಸು­­ವುದಕ್ಕೆ ಒಂದು ಕಾರಣ ಇದೆ. ಎಸ್ಸೆ­ಸ್ಸೆಲ್ಸಿ ಅಥವಾ ಪಿ.ಯು.ಸಿ ಪರೀಕ್ಷೆಗಳ ಫಲಿ­ತಾಂಶ ಪ್ರಕಟ­ವಾ­ದಾ­ಗಲೆಲ್ಲ ಸಾಮಾನ್ಯವಾಗಿ ವಿದ್ಯಾರ್ಥಿನಿ­ಯರೇ ಮೇಲುಗೈ ಸಾಧಿಸಿರುತ್ತಾರೆ. ಅದರಲ್ಲೂ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯ­ಗಳಲ್ಲಿ ಜಿದ್ದಿಗೆ ಬಿದ್ದವರಂತೆ ಅತ್ಯುನ್ನತ ಶ್ರೇಣಿ ಪಡೆದವರಲ್ಲೂ ಇವರೇ ಮುಂದಿ­ರು­­ತ್ತಾರೆ. ಹೀಗಾಗಿ ವೈಜ್ಞಾನಿಕ ದೃಷ್ಟಿಕೋನದಲ್ಲೂ ಸಬಲೀಕರಣದ ದಿನಗಳು ಹತ್ತಿರ­ವಾದರೆ, ಮೌಢ್ಯ ತೊಡೆಯುವ ಆಶಯಕ್ಕೆ ಇನ್ನಷ್ಟು ಬಲ ಬಂದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT