ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಇದೇ ಮೊದಲ ಬಾರಿಗೆ ಎನ್ಡಿಎ ಸಂಸದರಿಗೆ ಭಾನುವಾರ ಚಹಾಕೂಟ ಏರ್ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಕಾರಾತ್ಮಕ ರಾಜಕೀಯದ ಸಂಕೇತವಾಗಿರುವಂತೆ ಸಂಸದರಿಗೆ ಕಿವಿಮಾತು ಹೇಳಿದರು.
ತಮ್ಮ ಮಹತ್ವಾಕಾಂಕ್ಷೆಯ ಆಂದೋಲನವಾದ ‘ಸ್ವಚ್ಛ ಭಾರತ ಅಭಿಯಾನ’, ‘ಸಂಸದರ ಮಾದರಿ ಗ್ರಾಮ ಯೋಜನೆ’, ‘ಜನಧನ ಯೋಜನೆ’ಗಳನ್ನು ಯಶಸ್ವಿ ಮಾಡುವಂತೆ ಮೋದಿ ಕೋರಿದರು.
ಶಿವಸೇನಾ ಸಂಸದರು ಭಾಗಿ: ಕೇಂದ್ರ ಸಚಿವ ಅನಂತ ಗೀತೆ ಸೇರಿದಂತೆ ಶಿವಸೇನಾದ ಎಲ್ಲಾ ಸಂಸದರೂ ಚಹಾಕೂಟದಲ್ಲಿ ಭಾಗವಹಿಸಿದ್ದರು. ಈ ಚಹಾಕೂಟದಲ್ಲಿ ಶಿವಸೇನಾ ಬೆಂಬಲ ಪಡೆದು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಇದ್ದ ಕಾರಣ ಈ ಚಹಾಕೂಟ ಕುತೂಹಲ ಕೆರಳಿಸಿತ್ತು.
‘ಸರ್ಕಾರ ಹಮ್ಮಿಕೊಂಡಿರುವ ಹಲವು ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಪ್ರಧಾನಿ ಅವರು ತಮ್ಮ ನೆಚ್ಚಿನ ಯೋಜನೆಗಳ ಬಗ್ಗೆ ಹೇಳಿದರು. ಹಣಕಾಸು, ಗ್ರಾಮೀಣಾಭಿವೃದ್ಧಿ, ಕಾರ್ಮಿಕ ಖಾತೆಗಳ ಸಚಿವರು ವಿವಿಧ ಯೋಜನೆಗಳ ಸಾಧನೆಯನ್ನು ವಿವರಿಸಿದರು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಡಿ ಅವರು ಚಹಾಕೂಟದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.