ನಿಯಮಬಾಹಿರ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳು ವಾಹನ ಸವಾರರನ್ನು ವಂಚಿಸುತ್ತಿವೆ. ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಗುರುತಿಸುವುದೇ ಕಷ್ಟವಾಗಿರುವಾಗ ರಾತ್ರಿ ವೇಳೆ ಅನುಭವಿಸುವ ಯಾತನೆಯನ್ನು ಹೇಳುವಂತಿಲ್ಲ. ಹೀಗಿರುವಾಗ, ಅವೈಜ್ಞಾನಿಕ ರಸ್ತೆ ಉಬ್ಬುಗಳು ಅಪಘಾತಗಳಿಗೆ ಎಡೆಮಾಡಿಕೊಡುತ್ತವೆ.
ಅನೇಕ ಕಡೆ ರಸ್ತೆ ಉಬ್ಬುಗಳ ಅವಶ್ಯಕತೆ ಇದ್ದಾಗ್ಯೂ ಅವನ್ನು ಹಾಕಿರುವುದಿಲ್ಲ. ಉದಾಹರಣೆಗೆ ದೇವನಹಳ್ಳಿ/ಯಲಹಂಕಕ್ಕೆ ಹೋಗುವ ಮಧ್ಯೆ ಇರುವ ರಸ್ತೆ ಮೇಲುಸೇತುವೆಗಳಿಗೆ ಪ್ರವೇಶಿಸುವ, ಇಳಿಯುವ ಸ್ಥಳಗಳು ಹಾಗೂ ಸರ್ವಿಸ್ ರಸ್ತೆಯಿಂದ ಮೇಲುಸೇತುವೆಗೆ ಹೋಗುವ ಹಾಗೂ ಮುಖ್ಯ ರಸ್ತೆಗೆ ಬರುವ ಕೂಡು ಜಂಕ್ಷನ್ಗಳಲ್ಲಿ ರಸ್ತೆ ಉಬ್ಬುಗಳು ಇಲ್ಲ.
ಮೇಲು ಸೇತುವೆಯಲ್ಲಿ ಚಲಿಸುವ ಹಾಗೂ ಸರ್ವೀಸ್ ರಸ್ತೆಯಿಂದ ಚಲಿಸುವ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ. ಸಂಚಾರಿ ಪೊಲೀಸರು ಇಂತಹ ಸ್ಥಳಗಳನ್ನು ಪರಿಶೀಲಿಸಿ ಅವಶ್ಯ ಕ್ರಮ ತೆಗೆದುಕೊಳ್ಳಲು ವಿನಂತಿ.