ರಾಜಕೀಯ ಎಂದರೇ ಭ್ರಷ್ಟಾಚಾರ ಎಂಬಂತಹ ಭಾವನೆ ಸಾರ್ವಜನಿಕ ವಲಯದಲ್ಲಿದೆ. ಹಣಬಲ, ತೋಳ್ಬಲಗಳೇ ವಿಜೃಂಭಿಸುವ ರಾಜಕೀಯ ಜನಸಾಮಾನ್ಯರಿಗಲ್ಲ ಎಂಬ ಮಾತೂ ಪ್ರಚಲಿತ. ಆದರೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ಆಡಳಿತಸೂತ್ರವನ್ನು ಹಿಡಿಯುವ ಮೂಲಕ ಈ ದೃಷ್ಟಿಯನ್ನು ಬದಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯೊಂದಿಗೆ ದೆಹಲಿ ಮುಖ್ಯಮಂತ್ರಿಯಾಗಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಆರು ಮಂದಿ ಸಂಪುಟ ಸಹೋದ್ಯೋಗಿಗಳೊಂದಿಗೆ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಮದದ ತೋರ್ಪಡಿಕೆ ಇಲ್ಲದ ಹೊಸ ಶೈಲಿಯ ಆಡಳಿತ ನೀಡುವ ಭರವಸೆಯನ್ನು ಈ ತಂಡ ಪುನರುಚ್ಚರಿಸಿದೆ. ವಿಶ್ವಾಸ ಮತಗಳಿಸುವ ಪರೀಕ್ಷೆಯಲ್ಲಿ ಸಫಲರಾಗದಿದ್ದಲ್ಲಿ ಮತ್ತೆ ಚುನಾವಣೆ ಎದುರಿಸುವಂತಹ ವಾಸ್ತವಿಕ ಮಾತುಗಳನ್ನು ಕೇಜ್ರಿವಾಲ್ ಆಡಿದ್ದಾರೆ. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಎದುರಿಸಬೇಕಾಗಿರುವ ಹೊಸ ಶಕ್ತಿಯಾಗಿ ಎಎಪಿ ಉದಯವಾಗಿರುವಂತಹ ಚಾರಿತ್ರಿಕ ಕ್ಷಣ ಇದು. ರಾಜಕಾರಣ ಕೊಳಕು ಎಂಬುದು ಅಣ್ಣಾ ಹಜಾರೆಯವರ ನಿಲುವು.
ಆದರೆ ಈ ಕೊಳಕನ್ನು ಸ್ವಚ್ಛಗೊಳಿಸಲು ಕೊಳಕಿನೊಳಗೇ ಇಳಿಯಬೇಕೆಂಬ ನಂಬಿಕೆಯೊಂದಿಗೆ ರಾಜಕಾರಣ ಪ್ರವೇಶಿಸಿರುವ ಕೇಜ್ರಿವಾಲ್ ಈ ಸ್ವಚ್ಛತಾ ಕಾರ್ಯದ ಗುರಿ ತಲುಪುವಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆಂಬುದನ್ನು ಕಾಲವೇ ಹೇಳಲಿದೆ. ಎರಡು ವರ್ಷಗಳ ಹಿಂದೆ ಅಣ್ಣಾ ಹಜಾರೆ ಆರಂಭಿಸಿದ ಜನಾಂದೋಲನವೊಂದು ರಾಜಕೀಯ ಅಧಿಕಾರ ಹಿಡಿಯುವ ಮಟ್ಟಕ್ಕೆ ತಲುಪಿದ್ದು ದೊಡ್ಡದೊಂದು ಕ್ರಾಂತಿ.
ಈ ಹೋರಾಟದಲ್ಲಿ ಜನಸಾಮಾನ್ಯರು ಹಾಗೂ ಅಧಿಕಾರಶಾಹಿ ಹೇಗೆ ಕೈಜೋಡಿಸುತ್ತಾರೆ ಎಂಬುದೂ ಈ ಹೊಸ ಪ್ರಯೋಗದ ಯಶಸ್ಸು ಅಥವಾ ವೈಫಲ್ಯಕ್ಕೆ ಕಾರಣವಾಗಲಿದೆ. ‘ನನ್ನಲ್ಲೇನ್ನೂ ಮಂತ್ರದಂಡವಿಲ್ಲ. ಎಲ್ಲಾ ಸಮಸ್ಯೆಗಳಿಗೂ ನಮ್ಮಲ್ಲಿ ಪರಿಹಾರವಿಲ್ಲ. ಆದರೆ ದೆಹಲಿಯ ಜನತೆ ಜೊತೆಗೂಡಿ ನಾವೆಲ್ಲಾ ಸರ್ಕಾರ ರಚಿಸಿ ಜನರಿಗೆ ಸೇವೆ ಮಾಡಬೇಕು’ ಎಂಬ ಕೇಜ್ರಿವಾಲ್ ನುಡಿ ರಾಜಕೀಯ ಪರಿಭಾಷೆಯನ್ನು ಬದಲಿಸುವಂತಹದ್ದು. ಅಧಿಕಾರ ಹಿಡಿದಿರುವುದು ಅದನ್ನು ಅನುಭವಿಸುವುದಕ್ಕಲ್ಲ, ಸೇವೆ ಮಾಡಲು ಎಂಬಂತಹ ರಾಜಕೀಯದ ನಿಜ ತತ್ವವನ್ನು ಜನರ ಬಳಿಗೆ ಒಯ್ಯಲು ಮುಂದಾಗಿರುವುದೂ ಹೊಸತನದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಅಧಿಕಾರ ಸೂತ್ರ ಹಿಡಿಯಲು ಆರಂಭದಲ್ಲಿ ಅನಿಶ್ಚಯ ತೋರ್ಪಡಿಸಿದರೂ, ನಂತರ ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಎಎಪಿ ಮುಂದಾದದ್ದು ಮಹತ್ತರ ಬೆಳವಣಿಗೆ. ವಿಐಪಿ ಸಂಸ್ಕೃತಿಯನ್ನು ಧಿಕ್ಕರಿಸಿ ಜನಸಾಮಾನ್ಯರಂತೆ ಮೆಟ್ರೊ ರೈಲಿನಲ್ಲಿ ಆಗಮಿಸಿ ಸಾಧಾರಣ ಪೋಷಾಕು ಧರಿಸಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ ಕೇಜ್ರಿವಾಲ್ ತಂಡ ಹೊಸದೊಂದು ರಾಜಕೀಯ ವಾತಾವರಣವನ್ನು ಸೃಷ್ಟಿಸಿದೆ. ಮಹತ್ವಾಕಾಂಕ್ಷೆಯ ಈ ಪರಿವರ್ತನಶೀಲ ರಾಜಕೀಯದ ಹಾದಿ ತನ್ನ ಮುಂದಿನ ಸವಾಲುಗಳನ್ನು ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲಕರ.
ಭ್ರಷ್ಟಾಚಾರ ಕುರಿತ ದೂರುಗಳಿಗಾಗಿ ಸಹಾಯವಾಣಿಯನ್ನು ಆರಂಭಿಸುವುದಾಗಿಯೂ ಪ್ರಕಟಿಸಲಾಗಿದೆ.ಹಣಕಾಸು ಅಧಿಕಾರ ಹೊಂದಿರುವ ಮೊಹಲ್ಲಾ ಸಮಿತಿಗಳ ರಚನೆಯ ಭರವಸೆ ಮತ್ತೊಂದು ಆಕರ್ಷಣೆ. ಜಾತಿ, ಧರ್ಮಾಧಾರಿತ ರಾಜಕೀಯವನ್ನು ವಿಷಯಾಧಾರಿತವಾಗಿ ನಿರ್ವಹಿಸುತ್ತಿರುವುದೂ ಇಲ್ಲಿ ಮುಖ್ಯ. ಭ್ರಷ್ಟಾಚಾರದಿಂದ ರಾಷ್ಟ್ರವನ್ನು ಸ್ವತಂತ್ರಗೊಳಿಸುವ ಎಎಪಿಯ ಆದರ್ಶಗಳಲ್ಲಿ ಕೆಲವಾದರೂ ಅನುಷ್ಠಾನಗೊಂಡಲ್ಲಿ ರಾಜಕೀಯದ ಈ ಹೊಸ ಪ್ರಯೋಗ ಹೊಸ ಭರವಸೆಗಳಿಗೆ ನಾಂದಿಯಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.