ನವದೆಹಲಿ/ ರಾಮೇಶ್ವರಂ, ತಮಿಳುನಾಡು (ಪಿಟಿಐ): ಸೋಮವಾರ ಸಂಜೆ ಉಪನ್ಯಾಸ ನೀಡುತ್ತಲೇ ಕುಸಿದು ಬಿದ್ದು ವಿಧಿವಶರಾದ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಅಂತಿಮ ಸಂಸ್ಕಾರ ಗುರುವಾರ ಜುಲೈ 30ರಂದು ನಡೆಯಲಿದೆ ಎಂದು ಕೇಂದ್ರ ಗೃಹ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತಮಿಳುನಾಡಿನ ರಾಮೇಶ್ವರಂದಲ್ಲಿ ಜುಲೈ30ರಂದು ಗುರುವಾರ ಬೆಳಿಗ್ಗೆ 11ಗಂಟೆಗೆ ಸಕಲ ಸೇನಾ ಗೌರವಗಳೊಂದಿಗೆ ಕಲಾಂ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಬುಧವಾರ ಮಧ್ಯಾಹ್ನದ ವೇಳೆ ಕಲಾಂ ಅವರ ಪಾರ್ಥಿವ ಶರೀರ ರಾಮೇಶ್ವರಂ ತಲುಪುವ ನಿರೀಕ್ಷೆಗಳಿದ್ದು, ಅಂತಿಮ ಸಂಸ್ಕಾರ ರಾಮೇಶ್ವರಂನಲ್ಲಿ ನಡೆಯಲಿದೆ ಎಂದು ರಾಮೇಶ್ವರಂ ಜಿಲ್ಲಾಧಿಕಾರಿ ಕೆ.ನಂದಕುಮಾರ್ ತಿಳಿಸಿದ್ದಾರೆ.
ಅಲ್ಲದೇ, ಆರು ರಾಜ್ಯಗಳ ಮುಖ್ಯಮಂತ್ರಿಗಳು ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಗಳಿವೆ ಎಂದೂ ಅವರು ತಿಳಿಸಿದ್ದಾರೆ.