ನವದೆಹಲಿ: ಕರ್ನಾಟಕ ಸಂಸದರು ಎಲ್ಲದರಲ್ಲೂ ಹಿಂದೆ. ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳುವುದರಲ್ಲೂ ಹಿಂದೆ. ಚರ್ಚೆಯಲ್ಲಿ ಭಾಗವಹಿಸುವುದರಲ್ಲೂ ಹಿಂದೆ. ರಾಜ್ಯಕ್ಕೆ ಬರಬೇಕಾದ ಸವಲತ್ತುಗಳನ್ನು ಪಡೆಯುವುದರಲ್ಲೂ ಹಿಂದೆ. ಇದಕ್ಕೊಂದು ಜ್ವಲಂತ ಉದಾಹರಣೆ ಇಲ್ಲಿದೆ. ರಾಜ್ಯ ರೈಲ್ವೆ ಯೋಜನೆಗಳನ್ನು ಕುರಿತು ಚರ್ಚಿಸಲು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಸೋಮವಾರ ಮಧ್ಯಾಹ್ನ ಕರೆದಿದ್ದ ಅನೌಪಚಾರಿಕ ಭೋಜನಾ ಸಭೆಗೆ ಬಹುತೇಕ ಸಂಸದರು ಹಾಜರಾಗಲಿಲ್ಲ.
ವಿವಿಧ ರಾಜ್ಯಗಳ ರೈಲ್ವೆ ಯೋಜನೆಗಳನ್ನು ಕುರಿತು ಚರ್ಚಿಸಲು ಸುರೇಶ್ ಪ್ರಭು ಸರದಿ ಮೇಲೆ ಸಂಸದರ ಸಭೆ ಕರೆಯುತ್ತಿದ್ದಾರೆ. ಅದರಂತೆ ಲೋಕಸಭೆ ಮತ್ತು ರಾಜ್ಯ ಸಭೆ ಸೇರಿ ರಾಜ್ಯದ ಎಲ್ಲ 41 ಸಂಸದರನ್ನು ಕರೆದಿದ್ದರು. ಆದರೆ, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಹೊರತುಪಡಿಸಿ ಮತ್ಯಾರು ಸಭೆಗೆ ಬರಲಿಲ್ಲ.
ಮಂತ್ರಿ ಸಮಯಕ್ಕೆ ಸರಿಯಾಗಿ ಸಭೆಗೆ ಬಂದರು. ಸಂಸದರ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಹಿರಿಯ ಅಧಿಕಾರಿಗಳನ್ನು ಕರೆ ತಂದಿದ್ದರು. ಜೋಶಿ ಹುಬ್ಬಳ್ಳಿಯಿಂದ ವಿವಿಧ ಸ್ಥಳಗಳಿಗೆ ರೈಲುಗಳನ್ನು ಓಡಿಸುವಂತೆ ಮನವಿ ಮಾಡಿದರು. ಮುನಿಯಪ್ಪ ಕೋಲಾರ ಬೋಗಿ ತಯಾರಿಕಾ ಘಟಕ ಸ್ಥಾಪನೆಯನ್ನು ತ್ವರಿತಗೊಳಿಸುವಂತೆ ಕೇಳಿದರು.
ರೈಲ್ವೆ ಯೋಜನೆಗಳನ್ನು ಚುರುಕುಗೊಳಿಸುವ ಉದ್ದೇಶದಿಂದ ರೈಲ್ವೆ ಸಚಿವರು ಎಲ್ಲ ರಾಜ್ಯಗಳ ಸಂಸದರ ಜತೆ ಚರ್ಚಿಸುತ್ತಿದ್ದಾರೆ. ಬೇರೆ ರಾಜ್ಯಗಳ ಸಂಸದರು ಆಸಕ್ತಿಯಿಂದ ಸಭೆ-ಯಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ರಾಜ್ಯಗಳಲ್ಲಿ ಆಗಬೇಕಾಗಿರುವ ಕೆಲಸಗಳನ್ನು ಕುರಿತು ಸಚಿವರಿಗೆ ವಿವರಿಸುತ್ತಿದ್ದಾರೆ. ಕರ್ನಾಟಕ ರೈಲ್ವೆ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ರಾಜ್ಯದಲ್ಲಿ ಇರುವುದು ಸಾವಿರ ಕಿ.ಮೀಗೆ 16 ಕಿ.ಮೀ ರೈಲು ಮಾರ್ಗ ಮಾತ್ರ. ರಾಷ್ಟ್ರೀಯ ಸರಾಸರಿ 27 ಕಿ.ಮೀ ಇದೆ.