ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳ ವರ್ಗಾವಣೆ ವಿಷಯ ರಾಜ್ಯದಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ಸಮೂಹದ ನಡುವೆ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣ ಕಾಣುತ್ತಿದೆ. ಇದು ಶುಭ ಸೂಚನೆ ಅಲ್ಲ. ಐಎಎಸ್, ಐಪಿಎಸ್ ಮುಂತಾದ ಹಿರಿಯ ಅಧಿಕಾರಿಗಳ ವರ್ಗಾವಣೆಯನ್ನು ನಾಗರಿಕ ಸೇವಾ ಮಂಡಳಿಯೇ ಮಾಡಬೇಕು ಹಾಗೂ ಈ ಅಧಿಕಾರಿಗಳು ಒಂದು ಸ್ಥಾನದಲ್ಲಿ ಕನಿಷ್ಠ ಎರಡು ವರ್ಷ ಇರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಆದೇಶವನ್ನು ಪಾಲಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಇತರ ಸಚಿವರ ನಡೆ ಸಂಶಯಾತ್ಮಕವಾಗಿದೆ. ಸುಪ್ರೀಂಕೋರ್ಟ್ ಆದೇಶವನ್ನು ಒಪ್ಪಿಕೊಂಡ ರಾಜ್ಯ ಸರ್ಕಾರ ಮಂಡಳಿ ರಚಿಸುವುದಾಗಿ ಪ್ರಕಟಿಸಿತ್ತು. ನಾಗರಿಕ ಸೇವಾ ಮಂಡಳಿ ಸ್ಥಾಪಿಸುವ ಕುರಿತ ಎರಡು ಕಡತಗಳಿಗೆ ಮುಖ್ಯಮಂತ್ರಿ ಸಹಿ ಮಾಡಿದ್ದಾರೆ.
ಆದರೆ ಮಾರ್ಚ್ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಂದ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ನಾಗರಿಕ ಸೇವಾ ಮಂಡಳಿ ರಚಿಸುವ ವಿಚಾರವನ್ನು ಮುಖ್ಯಮಂತ್ರಿ ತಡೆ ಹಿಡಿದಿದ್ದಾರೆ. ಸುಪ್ರೀಂಕೋರ್ಟ್ ಅಕ್ಟೋಬರ್ 31ರಂದು ನೀಡಿದ ಆದೇಶವನ್ನು 90 ದಿನಗಳಲ್ಲಿ ಜಾರಿಗೆ ತರಬೇಕಾಗಿದ್ದ ಸರ್ಕಾರ ಯಾವುದೇ ನಿಖರವಾದ ಕಾರಣವನ್ನು ನೀಡದೇ ಹಿಂದಕ್ಕೆ ಹೆಜ್ಜೆ ಇಟ್ಟಿರುವುದು ಸರಿಯಲ್ಲ. ಅಧಿಕಾರಿಗಳ ವರ್ಗಾವಣೆಯ ಜವಾಬ್ದಾರಿ ತಮ್ಮ ಬಳಿಯೇ ಇರಬೇಕು ಎನ್ನುವ ರಾಜಕಾರಣಿಗಳ ನಿಲುವು ಕೂಡ ಸಮರ್ಥನೀಯ ಅಲ್ಲ. ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ವರ್ಗಾವಣೆ ಮಾಡಲೂ ಸೂಕ್ತವಾದ ನಿಯಮಾವಳಿಗಳಿವೆ. ಆದರೆ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸೂಕ್ತ ನಿಯಮಗಳೇ ಇಲ್ಲ. ಅಧಿಕಾರದಲ್ಲಿ ಇರುವ ಪಕ್ಷದ ರಾಜಕಾರಣಿಗಳು ತಮ್ಮ ಇಷ್ಟಕ್ಕೆ ಬೇಕಾದಂತೆ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಾರೆ ಎಂದರೆ ಅದಕ್ಕೆ ಅರ್ಥವೇ ಇಲ್ಲ. ಇದಕ್ಕೆ ಕಡಿವಾಣ ಹಾಕಲೇ ಬೇಕಿದೆ.
ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ಮುಂದಾದ ಹಾಗೂ ಈ ಸಂಬಂಧ ಹೈಕೋರ್ಟ್ಗೆ ರಾಜ್ಯದ ಪರವಾಗಿ ಪ್ರಮಾಣ ಪತ್ರ ಸಲ್ಲಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ವಿರುದ್ಧ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ರೇಗಾಡಿರುವುದು ಮತ್ತು ಅವರಿಗೆ ನೋಟಿಸ್ ನೀಡಿರುವುದು ಸಮರ್ಥನೀಯ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಕೂಡ ಐಎಎಸ್ ಅಧಿಕಾರಿಗಳ ಮೇಲೆ ರೇಗಾಡಿದ ಪ್ರಸಂಗಗಳು ಇವೆ.
ಅಧಿಕಾರಿಗಳು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ತರುವ ಜವಾಬ್ದಾರಿ ಮುಖ್ಯಮಂತ್ರಿ ಅವರಿಗೆ ಸೇರಿದ್ದು. ಆದರೆ ಅಧಿಕಾರಿಗಳು ಕಾನೂನು ಬದ್ಧವಾಗಿ ನಡೆದುಕೊಂಡಾಗ ರಾಜಕೀಯ ಕಾರಣಗಳಿಗೆ ಅಥವಾ ಸಚಿವರ ಒತ್ತಡಕ್ಕೆ ಮಣಿದು ಅವರ ಮೇಲೆ ರೇಗಾಡುವುದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಇದು ಅಧಿಕಾರಿಗಳ ಮನೋಸ್ಥೈರ್ಯವನ್ನು ಕೆಡಿಸುತ್ತದೆ. ರಾಜ್ಯದಲ್ಲಿ ನಾಗರಿಕ ಸೇವಾ ಮಂಡಳಿ ರಚನೆಗೆ ಮುಖ್ಯಮಂತ್ರಿ ಮುಂದಾಗಬೇಕು. ಇದನ್ನು ವಿರೋಧಿಸುವ ಸಚಿವರ ಬಾಯಿ ಮುಚ್ಚಿಸುವ ಕೆಲಸವನ್ನೂ ಅವರೇ ಮಾಡಬೇಕು. ಹಿರಿಯ ಅಧಿಕಾರಿಗಳ ವರ್ಗಾವಣೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ರಾಜಕಾರಣಿಗಳ ಆಟದ ಬೊಂಬೆಗಳಲ್ಲ ಎನ್ನುವುದನ್ನು ನಿರೂಪಿಸುವ ಕೆಲಸವನ್ನೂ ಅವರೇ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.