ಢಾಕಾ (ಪಿಟಿಐ): ರಾಯಭಾರ ಕಚೇರಿಗಳಿರುವ ಇಲ್ಲಿನ ‘ಗುಲ್ಷನ್’ ಪ್ರದೇಶದ ಆರ್ಟಿಸನ್ ಬೇಕರಿ ರೆಸ್ಟೋರೆಂಟ್ ಬಳಿ ಪೊಲೀಸರು ಮತ್ತು ಶಂಕಿತ ಉಗ್ರರ ನಡುವೆ ಶುಕ್ರವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ.
ರೆಸ್ಟೋರೆಂಟ್ಗೆ ರಾತ್ರಿ 9.20ರ ವೇಳೆಗೆ ನುಗ್ಗಿದ ಬಂದೂಕುಧಾರಿಗಳು ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ಗುಂಡಿನ ಮಳೆ ಸುರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿಯರು ಸೇರಿದಂತೆ ಕನಿಷ್ಠ 15 ಜನರನ್ನು ಉಗ್ರರು ಒತ್ತೆ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸುಮಾರು 20 ಮಂದಿ ಬಂದೂಕುಧಾರಿಗಳು ಇರಬಹುದು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆದರೆ ಇದು ಖಚಿತವಾಗಿಲ್ಲ.
ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸಲಾಹುದ್ದೀನ್ ಅಹಮದ್ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭಾರತೀಯರು ಸುರಕ್ಷಿತ: ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ತೊಂದರೆ ಆಗಿಲ್ಲ. ಪೊಲೀಸ್ ಸಿಬ್ಬಂದಿ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಈ ಪ್ರದೇಶ ಸುತ್ತುವರಿದಿದ್ದಾರೆ.
‘ಬಂದೂಕುಧಾರಿಗಳು ಬಾಂಬ್ ಎಸೆದರು. ಗುಂಡಿನ ಮಳೆ ಸುರಿಸಿದರು. ಮುಖ್ಯ ಬಾಣಸಿಗನನ್ನು ಅವರು ಒತ್ತೆ ಇರಿಸಿಕೊಂಡಿದ್ದಾರೆ’ ಎಂದು ರೆಸ್ಟೋರೆಂಟ್ನ ಅಡುಗೆ ವಿಭಾಗದ ಕೆಲಸಗಾರರೊಬ್ಬರು ಹೇಳಿದ್ದಾರೆ. ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಬಂದೂಕುಧಾರಿಗಳ ಜೊತೆ ಮಾತುಕತೆ ನಡೆಸುವ ಯತ್ನ ಕೂಡ ಸಾಗಿದೆ ಎನ್ನಲಾಗಿದೆ.