ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜನೆಗೊಂಡಿದೆ ಥಾಯ್ ಮನೆ

ಸೇನೆ- ರಾಜವಂಶ ನಿಷ್ಠರ ಮಧ್ಯದ ಬಿಕ್ಕಟ್ಟು ಥಾಯ್ಲೆಂಡ್‌ ರಾಜವಂಶದ ಉತ್ತರಾಧಿಕಾರಿ ಆಯ್ಕೆಯನ್ನು ಕ್ಲಿಷ್ಟಗೊಳಿಸಿದೆ
Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಥಾಯ್ಲೆಂಡ್‌ನಲ್ಲಿ ಇಂದು ಬಿಕ್ಕಟ್ಟಿನ ಸನ್ನಿವೇಶ ಎದುರಾಗಿದೆ. ಸೇನೆ ಮತ್ತು ರಾಜವಂಶಕ್ಕೆ ನಿಷ್ಠರಾದ ವ್ಯವಸ್ಥೆಯ ನಡುವಿನ ಒಡಕಿನಿಂದಾಗಿ ದೇಶದ ಸ್ಥಿರತೆಗೆ ಬೆದರಿಕೆ ಉಂಟಾಗಿದೆ ಹಾಗೂ ಮುಂಬರುವ ರಾಜವಂಶಸ್ಥರ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರ ಸಾಂಗವಾಗಿ ನೆರವೇರುತ್ತದೆ ಎಂಬ ನಿರೀಕ್ಷೆಯನ್ನು ಹೊಸಕಿ ಹಾಕತೊಡಗಿದೆ.

ಒಂದು ಬದಿಯಲ್ಲಿ ಇರುವುದು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಹಳೆಯ ತಂಡ. ದೊರೆ ಭೂಮಿ ಬೋಲ್ ಅದುಲ್ಯದೇಜ್ ಅವರ ಸುದೀರ್ಘ ಅಧಿಕಾರ ಅವಧಿಯಲ್ಲಿ ಹಂತ ಹಂತವಾಗಿ ಅಧಿಕಾರವನ್ನು ಗಿಟ್ಟಿಸಿಕೊಂಡವರು ಇವರು. ಇನ್ನೊಂದು ಬದಿಯಲ್ಲಿ ಇರುವುದು ರಾಣಿ ಸಿರಿಕಿತ್ ಅವರ ಸೇವೆಯಲ್ಲಿರುವ ಅರೆ ಸ್ವಾಯತ್ತ ಅತಿಗಣ್ಯ ಸೇನಾ ಘಟಕದಲ್ಲಿರುವ ನವಪಡೆ. ಅದರಲ್ಲಿ ಕಳೆದ ವರ್ಷ ಚುನಾಯಿತ ಸರ್ಕಾರದ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಅವರ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಿದ ನಾಯಕರೂ ಸೇರಿದ್ದಾರೆ.

ದೇಶದ ಹಾಲಿ ಪ್ರಧಾನಿ ಜನರಲ್ ಪ್ರಯುತ್ ಚನ್-ಒಚಾ ಅವರು ರಾಣಿಯ ಸೇನೆ ಎಂದೇ ಖ್ಯಾತವಾದ 21ನೇ ಇನ್‌ಫೆಂಟ್ರಿ ರೆಜಿಮೆಂಟ್‌ನ ಮಾಜಿ ಕಮಾಂಡರ್. 1950ರಲ್ಲಿ ಕೊರಿಯಾ ಯುದ್ಧದ ಸಂದರ್ಭದಲ್ಲಿ ಹೋರಾಡುವುದ ಕ್ಕಾಗಿ ಈ ತುಕಡಿಯನ್ನು ರಚಿಸಲಾಗಿತ್ತು. ಬಳಿಕ ಇದಕ್ಕೆ ರಾಣಿ ಸಿರಿಕಿತ್ ಅವರ ರಕ್ಷಣೆಯ ಹೊಣೆ ನೀಡಲಾಗಿತ್ತು. ತುಕಡಿಗಳಲ್ಲಿ ಹೆಚ್ಚು ಪ್ರಾಧಾನ್ಯ ಪಡೆದುಕೊಳ್ಳುತ್ತಿದ್ದಂತೆಯೇ ಜನರಲ್ ಪ್ರಯುತ್ ಅವರು ತಮ್ಮ ರಾಜಕೀಯ ಅಧಿಕಾರವನ್ನೂ ಹೆಚ್ಚಿಸಿಕೊಳ್ಳಲು ಮುಂದಾದರು. ಅದರ ಫಲವಾಗಿಯೇ ಇಂದು ಇತರ ಸೇನೆ, ರಾಜನಿಷ್ಠ ಬಣಗಳಿಗೆ ಅವರು ಸವಾಲು ಹಾಕುತ್ತಿದ್ದಾರೆ.

ದಶಕಗಳಿಂದೀಚೆಗೆ ಥಾಯ್ಲೆಂಡ್‌ನ ರಾಜಕೀಯದಲ್ಲಿ ಸೇನೆ ಅನಿವಾರ್ಯ ಪಾತ್ರಧಾರಿಯಾಗಿ ಮಿಂಚುತ್ತಲೇ ಇದೆ. ರಾಜವಂಶಸ್ಥರೊಂದಿಗೆ ಇರುವ ನಿಕಟ ಸಂಪರ್ಕವೇ ಇದಕ್ಕೆ ಕಾರಣ. ತಮ್ಮಲ್ಲಿ ಹೆಚ್ಚು ಅಧಿಕಾರ ಇಟ್ಟುಕೊಂಡಿರುವುದಕ್ಕಾಗಿ ಸೇನೆ ಮತ್ತು ರಾಜವಂಶದ ಕುಟುಂಬ ನಾಗರಿಕ ಸರ್ಕಾರವನ್ನು ದುರ್ಬಲಗೊಳಿಸಲು ಜತೆಯಾಗಿಯೇ ಕೆಲಸ ಮಾಡಿವೆ. ಶೀತಲ ಸಮರದ ಸಂದರ್ಭದಲ್ಲಿ ಕಮ್ಯುನಿಸ್ಟ್ ಪ್ರಭಾವವನ್ನು ಹತ್ತಿಕ್ಕುವ ಶಕ್ತಿಗಳೊಂದಿಗೆ ಸೇರಿಕೊಂಡಿ ದ್ದವು. 1980ರ ದಶಕದಲ್ಲಿ ದೊರೆ ಭೂಮಿಬೋಲ್ ಅವರು ಜನರಲ್ ಪ್ರೇಮ್ ತಿನ್ಸುಲನೋಂಡ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ ನಂತರ ಅವರ ಸಂಬಂಧ ಇನ್ನಷ್ಟು ಗಟ್ಟಿಗೊಂಡಿತ್ತು. ಈ ನೇಮಕಾತಿಯೊಂದಿಗೆ ಪ್ರೇಮ್ ಅವರು ರಾಜಕೀಯ ವಿಜ್ಞಾನಿ ಡಂಕನ್ ಮೆಕಾರ್ಗೊ ಹೇಳುವಂತೆ ‘ರಾಜಪ್ರಭುತ್ವ ಜಾಲ’ದ ಮುಖ್ಯಸ್ಥರಾದರು. ಆ ಜಾಲವು ಸೇನೆ, ಸಾಂಪ್ರದಾಯಿಕ ರಾಜವಂಶಸ್ಥರಿಗೆ ನಿಷ್ಠರಾದವರು, ಹಿರಿಯ ಅಧಿಕಾರಿಗಳು ಮತ್ತು ದೊಡ್ಡ ವ್ಯವಹಾರಗಳನ್ನೊಳಗೊಂಡ ರಾಜವಂಶಸ್ಥ ಪರ ಗುಂಪುಗಳ ರಾಜಕೀಯ ಒಕ್ಕೂಟವಾಯಿತು.

1988ರಲ್ಲಿ ತಮ್ಮ ಸರ್ಕಾರದಲ್ಲಿನ ಒಳಜಗಳದಿಂದಾಗಿ ಪ್ರೇಮ್ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿದರು. ಆದರೆ ತೆರೆಮರೆಯಲ್ಲಿ ಅವರು ಪ್ರಭಾವಶಾಲಿಯಾಗಿಯೇ ಮುಂದುವರಿದರು. 1991– 92ರ ಪ್ರಕ್ಷುಬ್ಧ ಸಂದರ್ಭದಲ್ಲಿ ದೊರೆ ಭೂಮಿಬೋಲ್ ಅವರಿಗೆ ಸಲಹೆಗಾರರಾಗಿದ್ದರು ಎಂದು ಹೇಳಲಾಗುತ್ತಿದೆ. ಅಂದು ಅಧಿಕಾರದಲ್ಲಿದ್ದ ಸೇನಾ ಸರ್ಕಾರದ ಸದಸ್ಯರಾಗಿದ್ದ ಜನರಲ್ ಸುಚಿಂದಾ ಕ್ರಪ್ರಯೂನ್ ಅವರು ಪ್ರಧಾನಿ ಆಗುವುದಿಲ್ಲ ಎಂಬ ವಚನವನ್ನು ಭಂಗ ಮಾಡಿದ ಬಳಿಕ ದೇಶದಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ಆರಂಭವಾದವು.  ಕೆಲವು ಪ್ರತಿಭಟನಾಕಾರರನ್ನು ಸೇನೆ ಕೊಂದು ಹಾಕಿತು. ಆಗ ಮಧ್ಯಪ್ರವೇಶಿಸಿದ ದೊರೆ ಭೂಮಿಬೋಲ್ ಅವರು ಸೇನೆಯಿಂದ ಒಂದಿಷ್ಟು ಅಂತರ ಕಾಯ್ದುಕೊಂಡು ಕದನ ವಿರಾಮಕ್ಕೆ ಕರೆ ಕೊಟ್ಟರು.

ದೇಶವನ್ನು ಸುಸ್ಥಿರವಾಗಿ ಇಟ್ಟುಕೊಳ್ಳುವ ಮತ್ತು ತಟಸ್ಥ ಮನೋಭಾವದ ದೊರೆ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಳ್ಳುವುದು ಅವರ ಗುರಿಯಾಗಿತ್ತು. 1998ರಲ್ಲಿ ಭೂಮಿಬೋಲ್ ಅವರು ಆಪ್ತ ಸಮಾಲೋಚಕರ ಮಂಡಳಿ ಯೊಂದಕ್ಕೆ ಪ್ರೇಮ್ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಿದರು. ರಾಜವಂಶದ ಹಿತಾಸಕ್ತಿಗಳನ್ನು ಸಂರಕ್ಷಿಸುವುದು ಮತ್ತು ಅದರ ನಿಲುವುಗಳನ್ನು ಪ್ರಚುರಪಡಿಸುವುದೇ ಈ ಸಲಹಾ ಮಂಡಳಿಯ ಉದ್ದೇಶ. ಆ ಸಮಯದಲ್ಲಿ ಥಾಯ್ ರಾಜಕೀಯದಲ್ಲಿ ಸಲಹಾ ಮಂಡಳಿ, ನ್ಯಾಯಾಲಯಗಳಂತಹ ಚುನಾಯಿತವಲ್ಲದ ಸಂಸ್ಥೆಗಳು ಹೆಚ್ಚು ಹೆಚ್ಚು ಪ್ರಭಾವ ಬೀರಲಾರಂಭಿಸಿದವು.

ರಾಜವಂಶಸ್ಥ ಜಾಲದಲ್ಲಿ ಪ್ರೇಮ್ ಮತ್ತು ಅವರ ಬೆಂಬಲಿಗರ ಪ್ರಭಾವ 2001ರ ವರೆಗೂ ಮುಂದುವರಿದೇ ಇತ್ತು. ಆ ವರ್ಷ ದೂರಸಂಪರ್ಕ ಕ್ಷೇತ್ರದ ಒಡೆಯ ತಕ್ಷಿನ್ ಶಿನವಾತ್ರ ಅವರು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಗ್ರಾಮೀಣ ಬಡತನವನ್ನು ತಗ್ಗಿಸುವ ಅವರ ಜನಪ್ರಿಯ ಘೋಷಣೆ ಅವರಿಗೆ ಈ ಅವಕಾಶ ಒದಗಿಸಿಕೊಟ್ಟಿತ್ತು. ಚುನಾಯಿತ ಮತ್ತು ಚುನಾಯಿತವಲ್ಲದ ಸಂಸ್ಥೆಗಳ ನಡುವಿನ ಉದ್ವಿಗ್ನ ಸ್ಥಿತಿ ಅಲ್ಲಿಂದೀಚೆಗೆ ಬಹಿರಂಗ ಸಂಘರ್ಷವಾಗಿ ಮಾರ್ಪಟ್ಟಿತು.

ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸುವುದಾಗಿ ಬೆದರಿಕೆ ಹಾಕಿದ್ದು, ರಾಜವಂಶಸ್ಥರು ಮತ್ತು ಸೇನೆಯ ಪ್ರಾಬಲ್ಯಕ್ಕೆ ಸವಾಲು ಹಾಕಿದ್ದು ಇಂತಹ ಬಹಿರಂಗ ಸಂಘರ್ಷಕ್ಕೆ ಸಾಕ್ಷಿ. 2006ರಲ್ಲಿ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಪ್ರಧಾನಿ ಶಿನವಾತ್ರ ಅವರನ್ನು ಪದಚ್ಯುತಗೊಳಿಸಲಾಯಿತು. ಈ ಕ್ಷಿಪ್ರಕ್ರಾಂತಿಯ ಹಿಂದಿನ ಸೂತ್ರಧಾರಿ ಪ್ರೇಮ್ ಎಂದು ವ್ಯಾಪಕವಾಗಿ ನಂಬಲಾಗಿತ್ತು (ಆದರೆ ಈ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ).

ತಕ್ಸಿನ್ ಅವರೊಬ್ಬರೇ ಅಧಿಕಾರ ಕಳೆದುಕೊಂಡವರಾಗಿರಲಿಲ್ಲ. ದೊರೆ ಭೂಮಿಬೋಲ್ ಅವರ ಆರೋಗ್ಯ ಹದೆಗೆಡುತ್ತಿದ್ದಂತೆಯೇ ಕ್ಷಿಪ್ರಕ್ರಾಂತಿ ವಿರೋಧಿ ಚಳವಳಿ ಹಾಗೂ ಕೆಂಪಂಗಿ ದಳದವರೆಂದು ಹೇಳಿಕೊಂಡವರು ಪ್ರಬಲರಾದರು. ರಾಜವಂಶಸ್ಥ ವಿರೋಧಿ ಭಾವನೆಗಳು ಬೆಳೆಯತೊಡಗಿದವು. ಇದರಿಂದ ಪ್ರೇಮ್ ಬಣ ದುರ್ಬಲವಾಗತೊಡಗಿತು. ಆದರೆ ಅದೇ ವೇಳೆಗೆ ರಾಣಿ ಸಿರಿಕಿತ್ ರಾಜಕೀಯವಾಗಿ ಹೆಚ್ಚು ಸಕ್ರಿಯರಾದರು. ಭೂಮಿಬೋಲ್ ಅವರಿಂದ ಜಾರಿ ಹೋಗುತ್ತಿದ್ದ ಅಧಿಕಾರಕ್ಕೆ ಪರ್ಯಾಯ ಎಂಬಂತೆ ಅವರು ಹೊರಹೊಮ್ಮತೊಡಗಿದರು.

ರಾಣಿ ಸಿರಿಕಿತ್ ಅವರಿಗೆ ಸೇರಿದ ಪಡೆಯ ಮಂದಿಗೆ ಸೇನೆಯಲ್ಲಿ ಉನ್ನತ ಸ್ಥಾನಗಳನ್ನು ನೀಡುವ ಮೂಲಕ ಈಚಿನ ವರ್ಷಗಳಲ್ಲಿ ಅವರ ಸ್ಥಾನಮಾನ ಇನ್ನಷ್ಟು ಹೆಚ್ಚಾಗಿದೆ. 2010ರಲ್ಲಿ ಬ್ಯಾಂಕಾಕ್‌ನ ಬಿರುಸಿನ ವಹಿವಾಟು ನಡೆಯುವ ಜಿಲ್ಲೆಯಲ್ಲಿ ನಡೆದ ಕೆಂಪಂಗಿ ದಳದವರ ಪ್ರತಿಭಟನೆಯನ್ನು ಹತ್ತಿಕ್ಕುವ ಸಂದರ್ಭದಲ್ಲಿ ಜನರಲ್ ಪ್ರಯುತ್ ಸೇನೆಯ ಉಪ ಮುಖ್ಯಸ್ಥರಾಗಿದ್ದರು. ಕೆಲವೇ ತಿಂಗಳ ಬಳಿಕ ಅವರು ಸೇನಾ ಮುಖ್ಯಸ್ಥರಾದರು. 2014ರ ಕ್ಷಿಪ್ರಕ್ರಾಂತಿಯ ಹೆಚ್ಚಿನ ನಾಯಕರು ರಾಣಿಯ ಸೇನಾಬಲದ ಸದಸ್ಯರು.

ಸಿರಿಕಿತ್ ಅವರು 2012ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದರೂ, ಅವರ ಅನುಯಾಯಿಗಳು ಈಗಲೂ ಪ್ರಭಾವಶಾಲಿಗಳಾಗಿಯೇ ಇದ್ದಾರೆ. ಅವರೀಗ ರಾಜವಂಶಸ್ಥ ಉತ್ತರಾಧಿಕಾರಿ ನೇಮಕದಲ್ಲೂ ಪ್ರಭಾವ ಬೀರಲು ಸಜ್ಜಾಗುತ್ತಿರುವಂತೆ ಕಾಣಿಸುತ್ತಿದೆ. ಪ್ರಯುತ್ ಸರ್ಕಾರ ಯುವರಾಜ ಮಹಾ ವಜಿರಲಂಕರಣ ಅವರಿಗೆ ಬೆಂಬಲವಾಗಿ ನಿಂತಿದೆ. ದೊರೆ ಭೂಮಿಬೋಲ್ ಅವರು 1972ರಲ್ಲಿ ವಜಿರಲಂಕರಣ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನಿಯೋಜಿಸಿದ್ದರು. ಯುವರಾಜ ಒಂದು ರೀತಿಯಲ್ಲಿ ಜನರಲ್ ಪ್ರಯುತ್ ಅವರ ಕ್ಷಿಪ್ರಕ್ರಾಂತಿಯನ್ನು ಬೆಂಬಲಿಸಿದವರು. 2014ರ ರಾಷ್ಟ್ರೀಯ ಶಾಸಕಾಂಗ ಸಭೆಯ ಉದ್ಘಾಟನಾ ಸಮಾವೇಶದ ಅಧ್ಯಕ್ಷತೆಯನ್ನು ಯುವರಾಜ ವಹಿಸಿಕೊಂಡಿದ್ದರು. ಈ ಮೂಲಕ ಪ್ರಯುತ್ ಅವರ ಕ್ಷಿಪ್ರಕ್ರಾಂತಿಯನ್ನು ಅವರು ಸಮರ್ಥಿಸಿಕೊಂಡಿದ್ದರು.

ಆದರೆ ರಾಜವಂಶಸ್ಥ ಜಾಲದೊಳಗಿನ ಹಳೆಯ ಪರಂಪರೆಯವರು ಮಾತ್ರ ವಜಿರಲಂಕರಣ ಅವರಿಗೆ ರಾಜಗಾಂಭೀರ್ಯ ಇಲ್ಲ ಎಂದು ಹೇಳತೊಡಗಿದ್ದಾರೆ. ವಿಕಿಲೀಕ್ಸ್ ಬಹಿರಂಗಪಡಿಸಿದ 2010ರ ಅಮೆರಿಕ ರಾಜತಾಂತ್ರಿಕ ಸಂದೇಶದ ಪ್ರಕಾರ, ಪ್ರೇಮ್, ಆಪ್ತ ಸಮಾಲೋಚಕರ ಮಂಡಳಿಯ ಸದಸ್ಯ ಸಿದ್ಧಿ ಸವೇಸ್ಟಿಲ ಮತ್ತು ಮಾಜಿ ಪ್ರಧಾನಿ ಆನಂದ್ ಪನ್ಯರಚುನ್ ಅವರು ಥಾಯ್ಲೆಂಡ್‌ನಲ್ಲಿರುವ ಅಮೆರಿಕದ ರಾಯಭಾರಿ ಬಳಿ ತಮ್ಮ ದೇಶದ ರಾಜಕುಮಾರ ದೊರೆಯಾಗುವುದರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಜಕುಮಾರನ ಬದಲಿಗೆ ಬೇರೆ ವ್ಯವಸ್ಥೆ ಮಾಡಿದರೆ ದೇಶಕ್ಕೆ ಒಳಿತು ಎಂಬುದು ಸಿದ್ದಿ ಮತ್ತು ಆನಂದ್ ಅವರ ಆಶಯ ಇದ್ದಂತಿದೆ ಎಂದು ರಾಯಭಾರಿ ಅವರು ಅಮೆರಿಕಕ್ಕೆ ರವಾನಿಸಿದ ಸಂದೇಶದಲ್ಲಿ ಉಲ್ಲೇಖಿಸಿದ್ದರು. ವಜಿರಲಂಕರಣ ಅವರ ಸಹೋದರಿ ಯುವರಾಣಿ ಸಿರಿಂಧೋರ್ನ್ ಅವರನ್ನು ರಾಜಪಟ್ಟಕ್ಕೆ ತರಲು ಸಿದ್ಧಿ ಸಲಹೆ ನೀಡಿದ್ದರು. ಯುವರಾಣಿಯನ್ನು ಜನರು ಇಷ್ಟಪಟ್ಟಿದ್ದಾರೆ, ಹೀಗಾಗಿ ಅವರನ್ನೇ ಉತ್ತರಾಧಿಕಾರಿಯ ನ್ನಾಗಿ ಮಾಡಬೇಕು ಎಂಬುದು ಅವರ ಬಯಕೆಯಾಗಿದೆ.

ಸಾಂಪ್ರದಾಯಿಕವಾಗಿ ರಾಜವಂಶಕ್ಕೆ ನಿಷ್ಠರಾದವರು ಸಹ ಇದೀಗ ಸೇನಾ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಕಳೆದ ಜನವರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರೇಮ್, ‘ಈ ದೇಶ ಪ್ರಯುತ್‌ಗೆ ಸೇರಿದ್ದಲ್ಲ’ ಎಂದಿದ್ದರು. ‘ಜನರಲ್ ಪ್ರಯುತ್ ಅವರು ದೀರ್ಘ ಕಾಲ ತಮ್ಮ ಅಧಿಕಾರ ವಿಸ್ತರಿಸಿಕೊಳ್ಳಬಾರದು’ ಎಂದು ಈಚೆಗೆ ಆನಂದ್  ಎಚ್ಚರಿಸಿದ್ದರು. ಬ್ಯಾಂಕಾಕ್‌ನಲ್ಲಿ ಇಂದು ಕ್ಷಿಪ್ರಕ್ರಾಂತಿಗೆ ಪ್ರತಿಯಾಗಿ ಇನ್ನೊಂದು ಕ್ರಾಂತಿ ನಡೆಯುವ ವದಂತಿ ಹರಿದಾಡುತ್ತಿದೆ.

ಇಂತಹ ಬೆಳವಣಿಗೆಗೆ ಪ್ರತಿಯಾಗಿ ಜನರಲ್ ಪ್ರಯುತ್ ಅವರು ರಾಣಿ ಬಳಗದ ಸೇನೆಯ ಹೆಚ್ಚು ಹೆಚ್ಚು ಸದಸ್ಯರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸತೊಡಗಿದ್ದಾರೆ. ಅವರ ಸಹೋದರ ಜನರಲ್ ಪ್ರೀಚ ಅವರು ಮುಂದಿನ ಸೇನಾ ಮುಖ್ಯಸ್ಥರಾಗಲಿದ್ದಾರೆ ಎಂಬ ವದಂತಿ ಹರಡಿದೆ. ಇಂತಹ ಪ್ರಮುಖ ನೇಮಕಾತಿಗಳನ್ನು ಆಪ್ತ ಸಮಾಲೋಚನಾ ಮಂಡಳಿಯ ಒಪ್ಪಿಗೆ ಪಡೆದೇ ಮಾಡಬೇಕೆಂಬ ಸಂಪ್ರದಾಯ ಇದ್ದರೂ, ಜನರಲ್ ಪ್ರಯುತ್ ಅವರು ಇದನ್ನು ಉಲ್ಲಂಘಿಸುತ್ತಿದ್ದಾರೆ ಎಂಬ  ಭಾವನೆ ವ್ಯಾಪಿಸತೊಡಗಿದೆ.

ಪ್ರೇಮ್ ಅವರೂ ದೇಶದ ಚಿತ್ರಣದಿಂದ ಮರೆಯಾಗಿಲ್ಲ. ದೊರೆ ಭೂಮಿಬೋಲ್ ಅಸ್ತಂಗತರಾದಾಗ ರಾಜ ಸಿಂಹಾಸನಕ್ಕೆ ಯಾರನ್ನು ಕೂರಿಸಬೇಕು ಎಂದು ಸಂಸತ್ತಿಗೆ ಅಧಿಕೃತವಾಗಿ ಶಿಫಾರಸು ಮಾಡುವುದು ಆಪ್ತ ಸಮಾಲೋಚನಾ ಮಂಡಳಿ. ಸಂಸತ್ತಿನ ಒಪ್ಪಿಗೆ ಮೇರೆಗೆ ಉತ್ತರಾಧಿಕಾರಿಯ ನೇಮಕವಾಗುತ್ತದೆ. ಅಂತಹ ಸನ್ನಿವೇಶದಲ್ಲಿ ವಜಿರಲಂಕರಣ ಬದಲಿಗೆ ಸಿರಿಂಧೋರ್ನ್ ಅವರನ್ನು ಪೀಠದಲ್ಲಿ ಕುಳ್ಳಿರಿಸುವ ಸಾಧ್ಯತೆಯೂ ಇದೆ. ಈ ಮಂಡಳಿ ರಾಜಕುಮಾರನನ್ನೇ ಉತ್ತರಾಧಿಕಾರಿ ಎಂಬುದಾಗಿ ಶಿಫಾರಸು ಮಾಡಿದರೂ, ಅದು ತನ್ನ ನಿರ್ಧಾರ ಪ್ರಕಟಿಸುವಲ್ಲಿ ಒಂದು ದಿನ ವಿಳಂಬ ಮಾಡಿದರೂ, ಯುವರಾಜ ರಾಜನಾಗಿ ಮುಂದುವರಿಯುವುದಕ್ಕೆ ದೊಡ್ಡ ಹೊಡೆತ ಕೊಟ್ಟಂತಾಗುತ್ತದೆ.

ಥಾಯ್ಲೆಂಡ್‌ನಲ್ಲಿನ ಸೇನೆ- ರಾಜವಂಶಸ್ಥರೊಳಗಿನ ಬಿಕ್ಕಟ್ಟು ಅತ್ಯಂತ ಸಂಕೀರ್ಣವಾಗಿದ್ದು, ಮುಂಬರುವ ರಾಜವಂಶದ ಉತ್ತರಾಧಿಕಾರಿ ಆಯ್ಕೆಯನ್ನು ಜಟಿಲಗೊಳಿಸಿದೆ. ಜನರಲ್ ಪ್ರಯುತ್ ಮತ್ತು ಪ್ರೇಮ್ ಅವರ ಬಣಗಳು ಸಿಂಹಾಸನಕ್ಕೆ ವಿಭಿನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಉದ್ದೇಶಿಸಿರುವುದರಿಂದ, ಅಧಿಕಾರ ಎಂಬುದು ಸರ್ಕಾರ, ಸೇನೆ ಮತ್ತು ಅರಮನೆಯೊಳಗೆಯೇ ತನ್ನ ಆಟವನ್ನು ಆಡತೊಡಗಿದೆ. ಸಿಂಹಾಸನಕ್ಕೆ ಯುವರಾಣಿಯನ್ನು ಕೂರಿಸಬೇಕೋ, ಯುವರಾಜನನ್ನು ಕೂರಿಸಬೇಕೋ ಎಂಬ ಬಿರುಸಿನ ಚರ್ಚೆ ನಡೆಯುತ್ತಿದೆ. ಥಾಯ್ಲೆಂಡ್‌ನ ಸೇನೆ ಮತ್ತು ರಾಜವಂಶ ಇದೀಗ ಮತ್ತಷ್ಟು ರಾಜಕೀಯಕ್ಕೆ ತೆರೆದುಕೊಂಡಿವೆ. ಇದರಿಂದಾಗಿ ಥಾಯ್ಲೆಂಡ್ ಪ್ರಜಾಪ್ರಭುತ್ವದಿಂದ ಇನ್ನಷ್ಟು ಹಿಂದೆ ಸರಿಯತೊಡಗಿದೆ.

-ಲೇಖಕ, ಕ್ಯೊಟೊ ವಿಶ್ವವಿದ್ಯಾಲಯದ ಆಗ್ನೇಯ ಏಷ್ಯಾ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕ,
ದಿ ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT