ಕೋಲಾರ: ಸರ್ಕಾರಿ ಒಡೆತನದ ನರಸಿಂಹರಾಜ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದ್ದು, ವೈದ್ಯರ ಕೊರತೆ, ಕುಡಿಯುವ ನೀರು ಮತ್ತು ಸ್ವಚ್ಛತೆಯದೇ ದೊಡ್ಡ ಸಮಸ್ಯೆಯಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಇರುವ ನರಸಿಂಹರಾಜ ಆಸ್ಪತ್ರೆ ಒಟ್ಟು 400 ಹಾಸಿಗೆಗಳನ್ನು ಹೊಂದಿದ್ದು, ನಿತ್ಯ 800ರಿಂದ 900 ಹೊರ ರೋಗಿಗಳು ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ಎಲ್ಲ ವಿಭಾಗಗಳು ಸೇರಿ ಇಲ್ಲಿರುವ ವೈದ್ಯರ ಸಂಖ್ಯೆ ಕೇವಲ 25.
1937ರಲ್ಲಿ ಈ ಆಸ್ಪತ್ರೆ ಪ್ರಾರಂಭವಾದಾಗ 265 ಹಾಸಿಗೆಗಳು ಇದ್ದವು. ಆಗ ಮಂಜೂರಾದ ವೈದ್ಯರ ಹುದ್ದೆಗಳ ಸಂಖ್ಯೆ 36. ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ 2003ರಲ್ಲಿ ಇದನ್ನು 400 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಮಂಜೂರಾದ ವೈದ್ಯರ ಹುದ್ದೆಗಳ ಸಂಖ್ಯೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ.
ಆಸ್ಪತ್ರೆ ಪ್ರಾರಂಭವಾದಾಗ 36 ವೈದ್ಯರ ಹುದ್ದೆಗಳು ಮಂಜೂರಾಗಿದ್ದರೂ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಆ ಹುದ್ದೆಗಳು ಭರ್ತಿಯಾದ ನಿದರ್ಶನ ಇಲ್ಲ. ಈಗಲೂ 11 ಹುದ್ದೆಗಳು ಖಾಲಿ ಇವೆ. ಹಾಲಿ ಇರುವ ವೈದ್ಯರಲ್ಲಿ ಹಲವರು ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ ಇದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.
ಕಿಮ್ಮತ್ತಿಲ್ಲ: ಆಸ್ಪತ್ರೆ ಮೇಲ್ದರ್ಜೆಗೇರಿರುವ ಕಾರಣ, ಅಖಿಲ ಭಾರತ ವೈದ್ಯಕೀಯ ಮಂಡಳಿ (ಎಂಸಿಐ) ನಿಯಮಾವಳಿ ಪ್ರಕಾರ ವೈದ್ಯರ ಸಂಖ್ಯೆಯನ್ನು ಜಾಸ್ತಿ ಮಾಡಬೇಕು. ಹೊಸದಾಗಿ ಹುದ್ದೆಗಳನ್ನು ಸೃಜಿಸಬೇಕು ಎಂದು ಕೋರಿ ಅನೇಕ ಬಾರಿ ರಾಜ್ಯ ಸರ್ಕಾರಕ್ಕೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಇದಕ್ಕೆ ಸೂಕ್ತ ಸ್ಪಂದನೆ ದೊರೆತಿಲ್ಲ.
ಫಿಜಿಷಿಯನ್, ಮೆಡಿಸಿನ್, ಯುರಾಲಜಿ, ಸ್ತ್ರೀರೋಗ ಮೊದಲಾದ ವಿಭಾಗಗಳಲ್ಲಿ ವೈದ್ಯರ ಕೊರತೆ ಇದೆ. ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಕೇವಲ ಒಬ್ಬರೇ ಫಿಜಿಷಿಯನ್, ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್, ಸರ್ಜನ್ ಇದ್ದಾರೆ. ಅವರು ರಜೆ ಮೇಲೆ ತೆರಳಿದಾಗ ಪರ್ಯಾಯ ವ್ಯವಸ್ಥೆ ಮಾಡಲು ಪರದಾಡಬೇಕಾದ ಪರಿಸ್ಥಿತಿ ಇದೆ.
ಸೌಲಭ್ಯಗಳೇ ಇಲ್ಲ: ಜಿಲ್ಲಾ ಆಸ್ಪತ್ರೆಯಾದರೂ ಸಿಟಿ ಸ್ಕ್ಯಾನಿಂಗ್, ವೆಂಟಿಲೇಟರ್ ಸೌಲಭ್ಯ ಇಲ್ಲ. ತುರ್ತಾಗಿ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಯಾರಾದರೂ ಬಂದರೆ ಅವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಇಲ್ಲದೆ ಬಡ ರೋಗಿಗಳು ಅನ್ಯ ಮಾರ್ಗವಿಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ಭರಿಸುವಂತಾಗಿದೆ.
ಕುಡಿಯುವ ನೀರು: ಆಸ್ಪತ್ರೆಗೆ ನೀರು ಪೂರೈಸುತ್ತಿದ್ದ ಮೂರೂ ಕೊಳವೆಬಾವಿಗಳು ಬತ್ತಿ ಹೋಗಿದ್ದು, ನಗರಸಭೆಯವರು ಈಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಇದನ್ನು ಆಸ್ಪತ್ರೆ ಬಳಕೆಗೆ ಉಪಯೋಗಿಸಬಹುದು. ಆದರೆ ಕುಡಿಯುವುದಕ್ಕೆ ಶುದ್ಧೀಕರಿಸಿದ ನೀರಿನ ವ್ಯವಸ್ಥೆ ಇಲ್ಲ. ಸ್ತ್ರೀರೋಗ ವಿಭಾಗದ ಬಳಿ ಮಾತ್ರ ಕುಡಿಯುವ ನೀರು ದೊರೆಯುತ್ತಿದ್ದು, ಎಲ್ಲ ವಿಭಾಗದವರು ಅಲ್ಲಿಗೇ ಬಂದು ಬಾಟಲಿಗೆ ನೀರು ತುಂಬಿಸಿಕೊಳ್ಳುತ್ತಾರೆ. ಆಸ್ಪತ್ರೆ ಆವರಣದಲ್ಲಿ ಫಿಲ್ಟರ್ ಅಳವಡಿಸುವಂತೆ ಕೋರಿ ರೋಟರಿ, ಲಯನ್ಸ್ ಸಂಸ್ಥೆಯ ಮೊರೆ ಹೋಗಲಾಗಿದೆ. ಅವರು ಇದಕ್ಕೆ ಸ್ಪಂದಿಸಿದರೆ ಶುದ್ಧ ಕುಡಿಯುವ ನೀರು ದೊರೆಯಲಿದೆ ಎನ್ನುತ್ತವೆ ಆಸ್ಪತ್ರೆ ಮೂಲಗಳು.
ಅರ್ಧಕ್ಕೆ ನಿಂತ ನವೀಕರಣ ಕಾರ್ಯ: ಆಸ್ಪತ್ರೆ ಕಟ್ಟಡದ ನವೀಕರಣ, ಫ್ಲೋರಿಂಗ್ ಬದಲಾಯಿಸುವುದು, ವಿದ್ಯುತ್, ನೀರು, ರಸ್ತೆ, ಉದ್ಯಾನದ ಸ್ವಚ್ಛತೆ ಇತ್ಯಾದಿ ಕಾಮಗಾರಿಗಳನ್ನು ₨ 3.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಈ ಕೆಲಸ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಮಾಡಿರುವ ಕೆಲಸವೂ ಸರಿಯಾಗಿಲ್ಲ.
ಆಸ್ಪತ್ರೆ ಆವರಣದ ಒಳಗೆ ವಿಶಾಲವಾದ ಜಾಗವಿದೆ. ಅಲ್ಲಿ ಉದ್ಯಾನ ಬೆಳೆಸಿದರೆ ಶುದ್ಧವಾದ ಗಾಳಿ ದೊರೆಯುವ ಜತೆಗೆ ರೋಗಿಗಳೊಂದಿಗೆ ಬರುವ ಸಂಬಂಧಿಗಳು, ಸಹಾಯಕರಿಗೆ ಕುಳಿತುಕೊಳ್ಳಲು ಸೂಕ್ತ ಸ್ಥಳಾವಕಾಶ ದೊರೆಯುತ್ತದೆ. ಆದರೆ ಈ ನಿಟ್ಟಿನಲ್ಲಿ ಗಮನವನ್ನೇ ಹರಿಸಿಲ್ಲ. ಆಸ್ಪತ್ರೆ ಆವರಣ ಅವ್ಯವಸ್ಥೆಯಿಂದ ಕೂಡಿದ್ದು, ಎಲ್ಲೆಂದರಲ್ಲಿ ಕಸ ಬಿದ್ದಿದೆ. ಕುಳಿತುಕೊಳ್ಳಲು ಮಾಡಿದ್ದ 2–3 ಆಸನಗಳೂ ಹಾಳಾಗಿವೆ.
ಕಾಮಗಾರಿ ಸಂದರ್ಭ ಹಾಕಿದ ಸಿಮೆಂಟ್, ಇಟ್ಟಿಗೆ ಚೂರುಗಳನ್ನು ಇದುವರೆಗೂ ತೆಗೆದಿಲ್ಲ. ಸುಂದರವಾದ ಉದ್ಯಾನ ನಿರ್ಮಿಸಿ ಎಲ್ಲ ಕಡೆ ಗೇಟ್ಗಳು, ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಿದರೆ ನಾಯಿಗಳು ಒಳಗೆ ಬರುವುದನ್ನು ತಡೆಯಬಹುದು. ಅಲ್ಲದೆ ಆವರಣ ಸ್ವಚ್ಛವಾಗಿಯೂ ಇರುತ್ತದೆ ಎನ್ನುತ್ತಾರೆ ಶಿಕ್ಷಕ ನಾಗರಾಜ್.
ನಾಯಿಗಳ ವಾಸಸ್ಥಾನ: ಆಸ್ಪತ್ರೆ ಒಳಗೆ ಮತ್ತು ಹೊರಗೆ ಬೀದಿ ನಾಯಿಗಳು ರಾಜಾರೋಷವಾಗಿ ಓಡಾಡುತ್ತವೆ. ಅವುಗಳಿಗೆ ಆಸ್ಪತ್ರೆಯೇ ವಾಸಸ್ಥಾನ. ಕನಿಷ್ಠ ಪಕ್ಷ ಅವುಗಳನ್ನು ಆಸ್ಪತ್ರೆ ಒಳಗೆ ಬಾರದಂತೆ ತಡೆಯುವ ಪ್ರಯತ್ನವೂ ಆಗಿಲ್ಲ ಎಂಬುದು ರೋಗಿಗಳ ಅಸಮಾಧಾನ. ಕುಡಿಯುವ ನೀರಿನ ಸಮಸ್ಯೆ ಇದೆ. ಹಾಸಿಗೆ ಬಟ್ಟೆಗಳನ್ನು ನಿತ್ಯ ಬದಲಾಯಿಸುವುದಿಲ್ಲ. ಹೀಗೆ ಕೆಲ ಸಣ್ಣ–ಪುಟ್ಟ ಸಮಸ್ಯೆ ಇವೆ. ಆದರೂ ಪರವಾಗಿಲ್ಲ ಎನ್ನುತ್ತಾರೆ ಚಿಕಿತ್ಸೆ ಪಡೆಯಲು ಬಂದಿದ್ದ ಶಾಂತಮ್ಮ.
ಕೆಲ ಕಿಟಕಿ ಗಾಜುಗಳು, ತಂತಿ ಹಾಳಾಗಿವೆ. ಕೆಲ ವಿಭಾಗಗಳಿಗೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಇದಕ್ಕೆ ಆಸ್ಪತ್ರೆಯ ಆಡಳಿತ ವರ್ಗವನ್ನು ಮಾತ್ರ ದೂರುವುದರಲ್ಲಿ ಅರ್ಥವಿಲ್ಲ. ಇದರಲ್ಲಿ ಸಾರ್ವಜನಿಕರ ಪಾತ್ರವೂ ಇದೆ. ಎಲೆ– ಅಡಿಕೆ ಜಗಿಯುವ ಮಂದಿ ಎಲ್ಲೆಂದರಲ್ಲಿ ಉಗಿಯುತ್ತಾರೆ. ನಿರುಪಯುಕ್ತ ವಸ್ತುಗಳನ್ನು ಕಸದ ಬುಟ್ಟಿಯಲ್ಲಿ ಹಾಕುವ ಬದಲು ಕಿಟಕಿಯಿಂದ ಬಿಸಾಡುವುದು, ಕಾರಿಡಾರ್ಗಳಲ್ಲಿ ಎಸೆಯುವುದನ್ನು ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಸ್ವಚ್ಛತೆ ಕಾಪಾಡುವುದು ತಲೆನೋವಾಗಿ ಪರಿಣಮಿಸುತ್ತದೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.