ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ಬಿಸಿಲಿನ ಝಳಕ್ಕೆ ಜನ ಮತ್ತು ಜಾನುವಾರು ತತ್ತರಿಸುವಂತಾಗಿದೆ. ವಿದ್ಯುತ್, ನೀರಿನ ಸಮಸ್ಯೆ ಒಂದೆಡೆ ಕಾಡುತ್ತಿದ್ದರೆ, ಬೇಸಿಗೆಯಲ್ಲಿ ತಲೆದೋರುವ ಕಾಯಿಲೆಗಳು ಮತ್ತೊಂದೆಡೆ ಬಾಧಿಸುತ್ತಿವೆ.
ಈ ಬಾರಿ ಬೇಸಿಗೆ ಬಿಸಿ ಜೋರಾಗಿದ್ದು, ತಾಪಮಾನ 38 ಡಿಗ್ರಿ ದಾಟಿದೆ. ನೀರಿನ ಸೆಲೆಗಳು ಬತ್ತಿಹೋಗಿವೆ. ಜಾನುವಾರು ನೀರಿನ ಬವಣೆ ಅನುಭವಿಸುತ್ತಿದ್ದರೆ, ಪಕ್ಷಿಗಳು ಸಂಕಷ್ಟದಲ್ಲಿವೆ. ರೈತರು ಅಂತರ್ಜಲ ಕುಸಿತದಿಂದ ಮಳೆಗಾಲದವರೆಗೂ ಜಮೀನಿನಲ್ಲಿರುವ ಬೆಳೆಗಳ ರಕ್ಷಣೆಗೆ ಹರಸಾಹಸ ಪಡುವಂತಾಗಿದೆ. ರೇಷ್ಮೆ ಹುಳುಗಳನ್ನು ಸಾಕುವ ಹುಳುಮನೆಗಳ ತಾಪಮಾನ ಏರಿಕೆಯಾಗದಂತೆ ಕಾಪಾಡಿಕೊಳ್ಳುವುದು ರೇಷ್ಮೆ ಸಾಕಾಣಿಕೆದಾರರಿಗೆ ದೊಡ್ಡ ಸವಾಲಾಗಿದೆ.
ತಾಲ್ಲೂಕಿನ ಹಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಪಟ್ಟಣದಲ್ಲೂ ಇದೇ ಸಮಸ್ಯೆ ಕಾಡುತ್ತಿದೆ. ಹತ್ತು– ಹನ್ನೆರಡು ದಿನಕ್ಕೊಮ್ಮೆ ಬರುವ ಕುಡಿಯುವ ನೀರಿಗಾಗಿ ಮಹಿಳೆಯರು ಬಿಂದಿಗೆ ಹಿಡಿದು ಕಾಯುವ ದೃಶ್ಯ ಸಾಮಾನ್ಯವಾಗಿದೆ.
ಬೇಸಿಗೆಯಲ್ಲಿ ತಾಪಮಾನ ಏರಿಕೆಯಿಂದಾಗಿ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆ. ಆಹಾರ ವ್ಯತ್ಯಯದಿಂದಾಗಿ ವಾಂತಿ, ಭೇದಿ ಕಾಣಿಸಿಕೊಳ್ಳುವುದು ಹೆಚ್ಚು. ಬಾಯಿಯಲ್ಲಿ ಹುಣ್ಣಾಗಿ ಏನೂ ತಿನ್ನಲಾಗದಂತಾಗುತ್ತದೆ. ರೇಷ್ಮೆ ಗುಡಿ ಕೈಗಾರಿಕೆಯಲ್ಲಿ ಕೆಲಸ ಮಾಡುವವರು ಬಿಸಿಲಿನ ಬಿಸಿಯೊಂದಿಗೆ ಕುದಿಯುವ ನೀರು, ಧಗೆಯೊಂದಿಗೆ ಇದ್ದು ದೇಹದ ನೀರಿನ ಅಂಶ ಕಳೆದುಕೊಂಡು ಕಾಯಿಲೆ ಬೀಳುತ್ತಾರೆ.
ಇನ್ನು ಆಹಾರ ಪದ್ಧತಿ ಬಗ್ಗೆ ಹೇಳುವುದಾದರೆ, ‘ಬೇಸಿಗೆಯಲ್ಲಿ ಆಹಾರ ಸೇವನೆ ಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸೂರ್ಯನ ತಾಪಕ್ಕೆ ದೇಹ ಬಳಲುತ್ತದೆ. ನೀರಿನ ಅಂಶ ಕಡಿಮೆಯಾಗಿ ಶಕ್ತಿ ಕುಂದುತ್ತದೆ. ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ದೇಹ ತಂಪು ಮಾಡುವ, ನೀರಿನ ಅಂಶ ಹೆಚ್ಚು ಇರುವ ಆಹಾರ, ಪಾನೀಯಗಳನ್ನು ಸೇವಿಸಬೇಕು. ಅವು ಜೀರ್ಣಕ್ರಿಯೆಗೂ ಸಹಕಾರಿಯಾಗುವಂತೆ ಇರಬೇಕು.
ಉಷ್ಣದ ಪಾನೀಯಗಳನ್ನು ಸೇವಿಸಕೂಡದು. ಉಪ್ಪು, ಹುಳಿ, ಖಾರವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳಿಂದ ದೂರವಿರಬೇಕು. ಮೈದಾ ಹಿಟ್ಟಿನಿಂದ ತಯಾರಿಸಿದ ಸಿಹಿ ಮತ್ತು ಖಾರದ ತಿಂಡಿ ಸೇವಿಸಲೇಬಾರದು’ ಎನ್ನುತ್ತಾರೆ ವೈದ್ಯೆ ಮಮತಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.