ಜಗಳೂರು: ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಬೇಟೆಗಾರರು ಹಲ್ಲೆ ನಡೆಸಿರುವ ಘಟನೆ ಹಿನ್ನೆಲೆಯಲ್ಲಿ ನಾಲ್ಕನೇ ದಿನವಾದ ಬುಧವಾರವೂ ಅರಣ್ಯ ಇಲಾಖೆ ಸಿಬ್ಬಂದಿ ಕೊಂಡುಕುರಿ ವನ್ಯಧಾಮದಲ್ಲಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ನಿರಂತರ ಬೆಂಕಿ ಹಾಗೂ ಬೇಟೆಗಾರರ ಹಾವಳಿಯಿಂದಾಗಿ ಬೆದರಿದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ನುಗ್ಗಿ ಜನರ ಮೇಲೆ ದಾಳಿ ನಡೆಸುತ್ತಿವೆ.
ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಮದ ಸಮೀಪ ರೈತರೊಬ್ಬರ ಮೇಲೆ ಮಂಗಳವಾರ ಕರಡಿ ದಾಳಿ ನಡೆಸಿರುವ ಬೆನ್ನಲ್ಲೇ ಕೊಂಡುಕುರಿ ಅರಣ್ಯಧಾಮಕ್ಕೆ ಹೊಂದಿಕೊಂಡಿರುವ ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿ ಗ್ರಾಮಕ್ಕೆ ನುಗ್ಗಿದ ಕಾಡುಹಂದಿಗಳ ಗುಂಪು ಇಬ್ಬರು ಬಾಲಕಿಯರನ್ನು ಗಾಯಗೊಳಿಸಿರುವ ಘಟನೆ ನಡೆದಿದೆ.
ಮಂಗಳವಾರ ಸಂಜೆ ವೇಳೆಗೆ ಸುಮಾರು 25ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಕಾಡುಹಂದಿಗಳ ಗುಂಪು ಏಕಾಏಕಿ ಗ್ರಾಮಕ್ಕೆ ನುಗ್ಗಿದೆ.
ಹಂದಿಗಳು ದಿಢೀರ್ ಪ್ರತ್ಯಕ್ಷವಾದ ಕಾರಣ ಗ್ರಾಮಸ್ಥರು ಭಯಭೀತರಾಗಿ ಓಡಿಹೋಗಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತಿದ್ದ ಸಿದ್ದಮ್ಮ (16) ಹಾಗೂ ಶೃತಿ (17) ಎಂಬ ಬಾಲಕಿಯರಿಗೆ ಹಂದಿಗಳು ತಿವಿದು ಓಡಿಹೋದ ಪರಿಣಾಮ ಬೆನ್ನು, ಸೊಂಟ ಮತ್ತು ಕೈಕಾಲುಗಳಿಗೆ ಗಾಯಗಳಾಗಿವೆ.
‘ಸಂಜೆ ಸಮಯದಲ್ಲಿ ಏಕಾಏಕಿ ಕಾಡುಹಂದಿಗಳು ಊರಿನೊಳಗೆ ನುಗ್ಗಿ ಬಂದವು. ಗಾಬರಿಗೊಂಡ ಗ್ರಾಮಸ್ಥರು ಮನೆಗಳಿಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡರು. 4 ಅಡಿ ಎತ್ತರದ ಶಾಲಾ ಕಾಂಪೌಂಡ್ ಸಲೀಸಾಗಿ ಹಾರಿದ ಹಂದಿಗಳು ಬಿರುಗಾಳಿಯಂತೆ ಓಡಿ ಹೋದವು. ಕೆಲವರು ಬಿದ್ದು ಗಾಯಗೊಂಡರು’ ಎಂದು ಘಟನೆಯ ಪ್ರತ್ಯಕ್ಷದರ್ಶಿ, ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಹೇಶ್ ‘ಪ್ರಜಾವಾಣಿ’ಗೆ ವಿವರಿಸಿದರು.
ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರ್ಎಫ್ಒ ರಾಜಾಸಾಬ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಗೆ ಅಗತ್ಯ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು. ಮುಂದುವರಿದ ಅರಾಜಕತೆ: ನಾಲ್ಕು ದಿನದ ಹಿಂದೆ ಯುಗಾದಿ ಅಮಾವಾಸ್ಯೆ ದಿನ ಬೇಟೆಗಾರರು ಹಲ್ಲೆ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ಅಸಮಾಧಾನ ಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿ ಇದುವರೆಗೆ ಅರಣ್ಯಕ್ಕೆ ಕಾಲಿಟ್ಟಿಲ್ಲ.
ಡಿಸಿಎಫ್ ಸೇರಿದಂತೆ ಮೇಲಧಿಕಾರಿಗಳು ಘಟನೆ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರೂ ಅವರು ತಾಲ್ಲೂಕಿಗೆ ಭೇಟಿ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿ ಮನವೊಲಿಸಿಲ್ಲ ಎನ್ನಲಾಗುತ್ತಿದೆ. ಡಿಸಿಎಫ್ ಎಸ್.ಎನ್.ಮಳವಳ್ಳಿ ಅವರಿಗೆ ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆ ಆದೇಶವಾಗಿದ್ದು, ಕರ್ತವ್ಯದಿಂದ ಬಿಡುಗಡೆ ಆಗುವುದಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಅವರು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ದೂರುಗಳಿವೆ.
ಅರಣ್ಯದಲ್ಲಿ ರಕ್ಷಣೆ ಇಲ್ಲದೆ ಅಮೂಲ್ಯ ವನ್ಯಪ್ರಾಣಿಗಳು ಬೆಂಕಿ ಹಾಗೂ ಬೇಟೆಗಾರರಿಗೆ ಆಹುತಿಯಾಗುವ ಸ್ಥಿತಿ ಎದುರಾಗಿದೆ. ಅರಣ್ಯ ಪ್ರದೇಶದ ಹುಣಸೆಗುಡ್ಡ, ಸಂಜುಕಲ್ಲುಗುಡ್ಡ, ಕೊಡೆಗುಂಡು, ಹಾಪ್ದೊಣೆಮಟ್ಟಿ, ಹಳ್ಳಿಬೀಳು, ರಕ್ಕಸಘಟ್ಟ, ಚಕ್ಕಲ್ಲು, ಕ್ವಾರಮಟ್ಟಿ ಪ್ರದೇಶದಲ್ಲಿ ಬೆಂಕಿಯಿಂದಾಗಿ ವಿವಿಧ ಜಾತಿಯ ಅಪಾರ ಪ್ರಮಾಣದ ಮರಗಿಡಗಳು, ವಿವಿಧ ಪ್ರಾಣಿ ಪಕ್ಷಿಗಳು ಸುಟ್ಟು ಕರಕಲಾಗಿವೆ.
ಕೊಂಡುಕುರಿಯಂತಹ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಸಂಕುಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಏಷ್ಯಾ ಖಂಡದ ಏಕೈಕ ವನ್ಯಜೀವಿಧಾಮ ಆಗಿ ಘೋಷಿಸಿದೆ. ಆದರೆ ನಾಲ್ಕು ದಿನದಿಂದ ಹೊತ್ತಿ ಉರಿಯುತ್ತಿರುವ ಬೆಂಕಿ ಇನ್ನೂ ಶಮನವಾಗಿಲ್ಲ. ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.