ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ ಗೊಂದಲ

ಚರ್ಚೆ
Last Updated 14 ಜೂನ್ 2015, 19:30 IST
ಅಕ್ಷರ ಗಾತ್ರ

ಪೃಥ್ವಿ ದತ್ತ ಚಂದ್ರ ಶೋಭಿಯವರು ಸಂಶೋಧನಾ ಕ್ಷೇತ್ರದಲ್ಲಿನ ಅಪಸವ್ಯಗಳನ್ನು ಎತ್ತಿತೋರಿಸಿರುವುದು (ಪ್ರಜಾವಾಣಿ, ಜೂನ್ 12)  ಸಕಾಲಿಕವೂ ಸ್ವಾಗತಾರ್ಹವೂ ಆಗಿದೆ. ಅವರ ವಿಚಾರಗಳಿಗೆ ಪೂರಕವಾಗಿ, ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿಯಿರುವ ಬೆರಳೆಣಿಕೆ ಮಂದಿಯನ್ನು ನಮ್ಮ ವಿಶ್ವವಿದ್ಯಾಲಯ ವ್ಯವಸ್ಥೆಯು ಹೇಗೆ ನಿರುತ್ತೇಜಿಸಿ ಅಜ್ಞಾತವಾಸಕ್ಕೆ ಕಳುಹಿಸುತ್ತದೆ ಎಂಬುದರ ಬಗೆಗೂ ಕೆಲವು ಸ್ವಾನುಭವದ ಮಾತುಗಳನ್ನು ಸೇರಿಸಬೇಕೆನಿಸುತ್ತದೆ.

ಎರಡೂವರೆ ವರ್ಷಗಳ ಹಿಂದೆ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯವೊಂದರಲ್ಲಿ ಪಿಎಚ್.ಡಿ. ಸಂಶೋಧನಾರ್ಥಿಯಾಗಿ ನನ್ನ ತಾತ್ಕಾಲಿಕ ನೋಂದಣಿಯಾಯ್ತು. ಯು.ಜಿ.ಸಿ. ನಿಯಮಾನುಸಾರ ಪ್ರವೇಶ ಪರೀಕ್ಷೆ, ಅಭ್ಯರ್ಥಿಗಳ ಹಂಚಿಕೆ, ಆರು ತಿಂಗಳ ಕೋರ್ಸ್‌ವರ್ಕ್, ಅದರ ಮೇಲೆ ಮತ್ತೊಂದು ಪರೀಕ್ಷೆ ಎಲ್ಲ ಆಯಿತು. ಫಲಿತಾಂಶ, ಅಂಕಪಟ್ಟಿ ಬಂತು. ಸಂಶೋಧನೆಗೆ ಆಯ್ದುಕೊಂಡಿರುವ ವಿಷಯದ ಸಾರಲೇಖನವನ್ನೂ ಸೂಕ್ತ ಪರಾಮರ್ಶೆ ಬಳಿಕ ವಿ.ವಿ. ಸ್ವೀಕರಿಸಿತು.

ಇಷ್ಟೆಲ್ಲ ಮಾಡಿದ ವಿಶ್ವವಿದ್ಯಾಲಯವು ಈ ಹಂತದಲ್ಲಿ ನನಗೆ (ಮತ್ತು ಸಹಸಂಶೋಧನಾರ್ಥಿಗಳಿಗೆ) ಮಾರ್ಗದರ್ಶಕರಾಗಿದ್ದವರ ಮಾನ್ಯತೆಯನ್ನೇ ರದ್ದುಗೊಳಿಸಿತು. ಆ ಮಾರ್ಗದರ್ಶಕರು ಯತಾರ್ಥವಾಗಿ ಆ ಹುದ್ದೆಗೆ ಅರ್ಹರಲ್ಲ ಎಂಬ ಆಕ್ಷೇಪಣೆಗಳು ವಿ.ವಿ. ಗಮನಕ್ಕೆ ಬಂದು, ಅವು ಅಧ್ಯಯನ ಮಂಡಳಿ ಮತ್ತು ಸಿಂಡಿಕೇಟ್‌ಗಳಲ್ಲಿ ಚರ್ಚೆಗೊಳಗಾಗಿ, ಆ ಮಾರ್ಗದರ್ಶಕರಿಗೆ ನೀಡಿದ ಸ್ಥಾನಮಾನವನ್ನು ವಿ.ವಿ.ಯೇ ವಾಪಸ್ ಪಡೆಯಿತು.

ಮಾನ್ಯತೆ ರದ್ದಾದ ಮಾರ್ಗದರ್ಶಕರ ಜತೆಗಿದ್ದ ಎಂಟು ಮಂದಿ ಸಂಶೋಧನಾರ್ಥಿಗಳ ಪೈಕಿ ನಾಲ್ವರನ್ನು ವಿ.ವಿ. ಅದೇ ವಿಭಾಗದಲ್ಲಿರುವ ಇತರ ಮಾರ್ಗದರ್ಶಕರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿತು. ‘ನಮಗೂ ಅದೇ ವ್ಯವಸ್ಥೆ ಮಾಡಿ’ ಎಂದರೆ, ‘ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ಯು.ಜಿ.ಸಿ. ಸೂಚಿಸಿರುವ ಮಿತಿಗಿಂತ ಹೆಚ್ಚು ಸಂಶೋಧನಾರ್ಥಿಗಳನ್ನು ಅವರಿಗೆ ಹಂಚಿಕೆ ಮಾಡಿದ್ದೇವೆ. ಇನ್ನೂ ಹೆಚ್ಚು ಮಂದಿಗೆ ಮಾರ್ಗದರ್ಶನ ಮಾಡಿ ಎಂದು ಅವರ ಮೇಲೆ ಒತ್ತಡ ಹೇರಲು ಬರುವುದಿಲ್ಲ. ನಿಮಗೆ ಬೇರೆ ಪರಿಹಾರ ಹುಡುಕೋಣ’ ಎಂದಿತು ವಿ.ವಿ.

ಈ ನಡುವೆ ‘ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ನಿಮ್ಮ ವಿಷಯದಲ್ಲಿ ಮಾನ್ಯತೆ ಪಡೆದಿರುವ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಂಡು, ಅವರ ಒಪ್ಪಿಗೆ ಪತ್ರವನ್ನು ತಂದರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು’ ಎಂಬ ಬುದ್ಧಿವಂತಿಕೆಯ ಪತ್ರವೊಂದು ವಿ.ವಿ.ಯಿಂದ ಬಂತು. ಮಾರ್ಗದರ್ಶಕರನ್ನು ನೇಮಿಸಿಕೊಂಡು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಜವಾಬ್ದಾರಿ ವಿಶ್ವವಿದ್ಯಾಲಯದ್ದೇ ಹೊರತು ವಿದ್ಯಾರ್ಥಿಗಳದ್ದಲ್ಲ. ಅಂತೂ ಹೀಗಾದರೂ ಸಮಸ್ಯೆ ಬಗೆಹರಿದರೆ ಸಾಕು ಎಂದುಕೊಂಡು ಕರ್ನಾಟಕದ ಎಲ್ಲ ವಿಶ್ವವಿದ್ಯಾ ಲಯಗಳಿಗೂ ಎಡತಾಕಿದ್ದಾಯಿತು. ಮತ್ತೆ ಅಲ್ಲಿಯೂ ನಿರಾಸೆ. ನಮ್ಮ ಬಳಿ ಸೀಟುಗಳು ಖಾಲಿಯಿಲ್ಲವೆಂದೋ, ಬೇರೆ ವಿ.ವಿ.ಯ ವಿದ್ಯಾರ್ಥಿಗಳಿಗೆ ಗೈಡ್ ಮಾಡಲು ನಮ್ಮಲ್ಲಿ ತಾಂತ್ರಿಕ ತೊಂದರೆಗಳಿವೆ ಎಂದೋ ನಾನಾ ಕಾರಣ ಗಳನ್ನು ನೀಡಿ ಎಲ್ಲರೂ ವಾಪಸ್ ಅಟ್ಟಿದರು.

ಈ ‘ತಾಂತ್ರಿಕ ತೊಂದರೆ’ಗಳನ್ನು ನಿವಾರಿಸಿ ನಮ ಗೊಂದು ಸಹಾಯ ಮಾಡಿಕೊಡಿ ಸರ್ ಎಂದು ಕರ್ನಾ ಟಕದ ದೊಡ್ಡ ವಿ.ವಿ.ಯೊಂದರ ಕುಲಪತಿ ಬಳಿಗೇ ಹೋಗಿ ಕೈಮುಗಿದೆ. ‘ಅಯ್ಯೋ ನಿಮಗೆ ಸಹಾಯ ಮಾಡಹೊರಟರೆ ನಮ್ಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತೆ. ನಿಮಗೆ ಸಹಾಯ ಮಾಡಬೇಕಾದುದು ನಿಮ್ಮ ಯೂನಿವರ್ಸಿಟಿಯೇ ಹೊರತು ನಾವಲ್ಲ’ ಎಂದು ಸ್ಪಷ್ಟವಾಗಿ ಹೇಳಿ ಕೈಚೆಲ್ಲಿದರು.
ಆ ವಿಷಯವನ್ನೂ ನಮ್ಮ ವಿ.ವಿ. ಗಮನಕ್ಕೆ ತಂದಾಯಿತು.

ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಯಾರಾದರೊಬ್ಬರು ನಿವೃತ್ತ ಪ್ರಾಧ್ಯಾಪಕರನ್ನಾದರೂ ಗೈಡ್ ಆಗಿ ನೇಮಿಸಿಕೊಂಡು ನಮ್ಮ ಸಂಶೋಧನೆ ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡದ್ದಾಯಿತು. ಅದು ವಿ.ವಿ.ಯ ನಿಯಮಗಳಲ್ಲಿ ಇಲ್ಲ. ‘ನಾವು ನಿಯಮಗಳ ಪ್ರಕಾರ ಕೆಲಸ ಮಾಡಬೇಕಾಗುತ್ತೆ. ನಾವು ಅವುಗಳನ್ನು ಬೆಂಡ್ ಮಾಡಬಹುದೇ ಹೊರತು ಬ್ರೇಕ್ ಮಾಡೋಹಾಗಿಲ್ಲ. ಇನ್ನೇನಾದರೂ ಪರಿಹಾರ ಹುಡುಕೋಣ. ಕಾಯಿರಿ’ ಎಂದಿತು ವಿ.ವಿ.

ಇವರು ಯಾವ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ? ಒಬ್ಬ ವ್ಯಕ್ತಿಗೆ ಪಿಎಚ್.ಡಿ. ಮಾರ್ಗದರ್ಶಕನಾಗಲು ಅರ್ಹತೆಯಿಲ್ಲ ಎಂದಾದಮೇಲೆ ವಿ.ವಿ.ಯು ಆತನನ್ನು ಮಾರ್ಗದರ್ಶಕನನ್ನಾಗಿ ಹೇಗೆ ನೇಮಿಸಿಕೊಂಡಿತು? ಆ ಮಾರ್ಗದರ್ಶಕರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ಅದಾಗಲೇ ಇಬ್ಬರು ತಮ್ಮ ಪಿಎಚ್.ಡಿ. ಪೂರ್ಣಗೊಳಿಸಿದ್ದಾರೆ; ಅದೇ ವಿ.ವಿ.ಯಿಂದ ಘಟಿಕೋತ್ಸವದಲ್ಲಿ ಡಾಕ್ಟ ರೇಟ್ ಪದವಿಯನ್ನೂ ಪಡೆದಿದ್ದಾರೆ! ಮಾನ್ಯತೆ ಕಳೆದುಕೊಂಡ ಮಾರ್ಗದರ್ಶಕರ ಅಡಿಯಲ್ಲಿ ಸಂಶೋಧನೆ ನಡೆಸಿರುವ ಅವರ ಪಿಎಚ್.ಡಿ.ಯೂ ಅನೂರ್ಜಿತವೇ?

ಹಾಗಾದರೆ ಅವರ ಭವಿಷ್ಯವೇನು? ನಾವು ಯಾವ ಪಾಪಕ್ಕೆ ಈಗ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದೇವೆ? ವಿ.ವಿ. ನಿಯಮ ಗಳ ಪ್ರಕಾರ ಅರ್ಹತೆಯಿಲ್ಲದಿದ್ದರೂ ಮಾರ್ಗದರ್ಶಕನಾಗ ಬೇಕೆಂದು ಬಯಸಿದ ವ್ಯಕ್ತಿಯನ್ನು ನಾವು ಹಳಿಯಬೇಕೆ? ಆಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಗ ಭೂತಗನ್ನಡಿ ಹಿಡಿದಿರುವ ವಿ.ವಿ.ಯನ್ನು ಹಳಿಯಬೇಕೆ? ಈ ವಿ.ವಿ.ಯ ಸಹವಾಸವನ್ನು ಯಾಕಾದರೂ ಮಾಡಿ ದೆವೋ ಎಂದು ನಮ್ಮನ್ನು ನಾವೇ ಹಳಿದುಕೊಳ್ಳಬೇಕೆ? ನಮ್ಮ ವೃತ್ತಿಜೀವ ನದ ಭವಿಷ್ಯಕ್ಕೆ ಯಾರು ಜವಾಬ್ದಾರಿ? ನಾನೊಂದು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ. ಪಿಎಚ್.ಡಿ. ಪದವಿ ನನ್ನ ವೃತ್ತಿಜೀವನದ ಭವಿಷ್ಯಕ್ಕೂ ಅನಿವಾರ್ಯ.

ಈ ಅಡಾವುಡಿ ನಡುವೆ ಓಡಾಡಿಕೊಂಡು ನಾನು ಬರಿದೇ ಕಳೆದಿರುವ ಎರಡೂವರೆ ವರ್ಷವನ್ನು, ಮಾನಸಿಕ ನೆಮ್ಮದಿಯನ್ನು ನನಗೆ ತುಂಬಿಕೊಡುವವರು ಯಾರು? ಈ ದೀರ್ಘ ಅಲೆದಾಟದಲ್ಲಿ ನನ್ನ ಉತ್ಸಾಹವೇ ಉಡುಗಿದೆ. ನಿಜವಾದ ಅಧ್ಯಯನ ಆರಂಭವಾಗುವ ಮೊದಲೇ ಸಾಕಪ್ಪಾ ಸಾಕು ಈ ಪಿಎಚ್.ಡಿ. ಸಹವಾಸ ಎಂಬ ವಿಷಣ್ಣತೆ ಬಂದುಬಿಟ್ಟಿದೆ.

ಇದೇನಾ ನಮ್ಮ ವಿ.ವಿ.ಗಳು ಸಂಶೋಧನೆಯನ್ನು ಉತ್ತೇಜಿಸುವ ರೀತಿ? ಇದೇನಾ ಇವರು ಹೊಸ ತಲೆ ಮಾರಿನ ಸಂಶೋಧಕರನ್ನು ಬೆಳೆಸುವ ವಿಧಾನ? ಮಾತೆ ತ್ತಿದರೆ ಯುಜಿಸಿ ನಿಯಮ, ಗುಣಮಟ್ಟ, ಸಂಶೋಧನೆಗೆ ಪೂರಕ ವಾತಾವರಣ ಎಂದೆಲ್ಲ ಬಡಬಡಿಸುವ ವಿ.ವಿ.ಗಳು ತಾವು ಅನುಷ್ಠಾನಗೊಳಿಸಬೇಕಿರುವ ಸಂಶೋಧನಾ ಸಂಸ್ಕೃತಿಯನ್ನು ನಿಜದ ಅರ್ಥದಲ್ಲಿ ಜಾರಿಗೆ ತಂದಿವೆಯೇ?  ವ್ಯವಸ್ಥೆಯೊಳಗೆ ನಮ್ಮನ್ನು ನಾವೇ ಕಟ್ಟಿಹಾಕಿಕೊಳ್ಳುವ ಪರಿಸ್ಥಿತಿ ಬಂದರೆ ಅಂತಹ ವ್ಯವಸ್ಥೆಯ ಸುಸಂಬದ್ಧತೆ ಏನು?

ಶೈಕ್ಷಣಿಕ ಅರ್ಹತೆಗಾಗಿ ಒಂದು ಪಿಎಚ್.ಡಿ. ಇದ್ದ ರಾಯಿತಪ್ಪ ಎಂದು ಮಾರ್ಗದರ್ಶಕ- ಸಂಶೋಧಕ ಇಬ್ಬರೂ ಪರಸ್ಪರ ಭಾವಿಸಿಕೊಳ್ಳುವುದು, ಸಂಶೋ ಧನೆಯ ಗುಣಮಟ್ಟ ಪಾತಾಳ ತಲುಪಿರುವುದು, ಸಂಶೋ ಧನಾ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿಯಾಗುತ್ತಿರುವುದು ಎಲ್ಲವೂ ನಿಜ; ಇವೆಲ್ಲವುಗಳನ್ನೂ ಮೀರಿ ಹೋಗಬೇಕು ಎಂಬ ನೈಜ ಉತ್ಸಾಹದಲ್ಲಿರುವವರಿಗೆ ನಮ್ಮ ವಿ.ವಿ.ಗಳು ಏನು ಕೊಟ್ಟಿವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT