ಬೆಂಗಳೂರು: ನಿಗದಿತ ಕಾಲಮಿತಿಯಲ್ಲಿ ಆಸ್ತಿ ವಿವರ ಸಲ್ಲಿಸದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಸಂಬಂಧ ಶುಕ್ರವಾರ ನಡೆಯಲಿರುವ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.
ನ್ಯಾಯಾಂಗ ಬಡಾವಣೆಯ ವಿ. ಶಶಿಧರ್ ಎಂಬುವವರು 2012–13ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಕೆ ಸಂಬಂಧ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ವಿವರಣೆ ಕೇಳಿದ್ದರು. ವಾರ್ಡ್ ನಂ. 37ರ ಸದಸ್ಯ ಮುನಿರತ್ನ (ಈಗ ಶಾಸಕ), ವಾರ್ಡ್ ನಂ. 92ರ ಸದಸ್ಯೆ ಫರೀದಾ ಹಾಗೂ ವಾರ್ಡ್ ನಂ. 141ರ ಸದಸ್ಯೆ ಗೌರಮ್ಮ ವಿವರ ಸಲ್ಲಿಸಿಲ್ಲ ಎಂಬ ಮಾಹಿತಿಯನ್ನು ಕೊಡಲಾಗಿತ್ತು.
ಆಸ್ತಿ ವಿವರ ಸಲ್ಲಿಸದ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂಬ ನಿಯಮ ಕೆಎಂಸಿ ಕಾಯ್ದೆಯಲ್ಲಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಶಶಿಧರ್ ಪ್ರಶ್ನಿಸಿದ್ದರು. ಈ ಕುರಿತು ಆಯುಕ್ತರು ಕಾನೂನು ಘಟಕದಿಂದ ಸಲಹೆ ಕೇಳಿದ್ದರು.
‘ಕೆಎಂಸಿ ಕಾಯ್ದೆಯ 19(2) ಕಲಂ ಪ್ರಕಾರ ಯಾವುದೇ ಸದಸ್ಯರು ಚುನಾವಣೆಯಾದ ಒಂದು ತಿಂಗಳೊಳಗೆ ಮತ್ತು ಪ್ರತಿ ವರ್ಷ ಅದೇ ತಿಂಗಳು ಆಸ್ತಿ ವಿವರ ಸಲ್ಲಿಸಬೇಕು. ಒಂದುವೇಳೆ ವಿವರ ಸಲ್ಲಿಸದಿದ್ದಲ್ಲಿ ಅಥವಾ ತಪ್ಪು ಮಾಹಿತಿ ಕೊಟ್ಟಲ್ಲಿ ಅಂತಹ ಸದಸ್ಯರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಈ ಸಂಬಂಧ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬಹುದು’ ಎಂದು ಕಾನೂನು ಘಟಕ ಅಭಿಪ್ರಾಯಪಟ್ಟಿದೆ. ಹೀಗಾಗಿ ಈ ವಿಷಯವನ್ನು ಆಯುಕ್ತರು ಕೌನ್ಸಿಲ್ ಸಭೆಯ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.