ನಿರ್ಮಾಪಕರು: ಶೈಲೇಂದ್ರ ಬಾಬು, ನಿರ್ದೇಶಕ: ಪಿ.ಕುಮಾರ್
ತಾರಾಗಣ: ಸುಮಂತ್, ಕೃತಿ ಖರಬಂಧ, ಅಶೋಕ್, ಸುಮಿತ್ರಾ, ಶರತ್ ಲೋಹಿತಾಶ್ವ, ಚಿಕ್ಕಣ್ಣ, ನವೀನ್ ಕೃಷ್ಣ, ಸಾಧುಕೋಕಿಲ ಬುಲೆಟ್ ಪ್ರಕಾಶ್ ಮತ್ತಿತರರು.
ತೆಲುಗಿನ ‘ವೆಂಕಟಾದ್ರಿ ಎಕ್ಸ್ಪ್ರೆಸ್’ ಚಿತ್ರದ ಕನ್ನಡ ರೂಪ ‘ತಿರುಪತಿ ಎಕ್ಸ್ಪ್ರೆಸ್’. ನಿರ್ದೇಶಕ ಕುಮಾರ್, ಸರಳ ಮತ್ತು ಸಾಮಾನ್ಯ ಕಥೆಯನ್ನು ಕಡತಂದು, ಆಡಂಬರವಿಲ್ಲದೆ ನಿರೂಪಿಸಿದ್ದಾರೆ. ಸರಳತೆಯ ಕಾರಣಕ್ಕೇ ಸಿನಿಮಾ ಆಪ್ತವಾಗುತ್ತದೆ. ಒಂದು ವೇಳೆ ಕಥೆ ಮತ್ತು ಪಾತ್ರಗಳಿಗೆ ಆಡಂಬರದ ಸ್ಪರ್ಶ ಹೆಚ್ಚು ಇದ್ದಿದ್ದರೆ ಎಕ್ಸ್ಪ್ರೆಸ್ ಹಳಿ ತಪ್ಪುತ್ತಿತ್ತು. ಒಳಿತಿನ ಉದ್ದೇಶದಿಂದ ‘ಕೌಟುಂಬಿಕ ಶಿಸ್ತು’ ರೂಪಿಸಿರುವ ಅಪ್ಪ, ಆ ಶಿಸ್ತನ್ನು ಸಾಂದರ್ಭಿಕ ಅನಿವಾರ್ಯತೆಯಿಂದ ಮುರಿಯುವ ಮಗ. ಈ ಎರಡು ಧ್ರುವಗಳಿಗೆ ಹೊಂದಿಕೊಂಡು ಬರುವ ಘಟನೆ–ಪಾತ್ರಗಳ ನಡುವೆ ಎಕ್ಸ್ಪ್ರೆಸ್ ಚಲಿಸುತ್ತದೆ. ಈ ಚಲನೆಯ ಹಾದಿಯ ಸನ್ನಿವೇಶಗಳು ಸಿನಿಮಾಕ್ಕೆ ರಸವನ್ನು ತುಂಬಿದೆ.
ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ರಾವ್ ತನ್ನ ಕುಟುಂಬ ಸದಸ್ಯರಿಗೆ ಶಿಸ್ತಿನ ಕಟ್ಟಳೆಗಳನ್ನು ವಿಧಿಸಿದವರು. ತಮ್ಮದೇ ಆದ ಕೌಟುಂಬಿಕ ನಿಯಮಗಳನ್ನು ಜಾರಿ ಮಾಡಿಕೊಂಡವರು. ಮನೆಯ ಯಾವೊಬ್ಬ ಸದಸ್ಯ ನೂರು ತಪ್ಪುಗಳನ್ನು ಮಾಡಿದರೆ, ಆತ ಮನೆಯಿಂದ ಹೊರ ನಡೆಯಬೇಕು. ಈ ನಿಯಮದ ಮೊದಲ ಪ್ರಯೋಗವನ್ನು ತಮ್ಮನ ಮೇಲೆ ನಡೆಸಿ ಆತನನ್ನು ಮನೆಯಿಂದಲೇ ದೂರ ನಿಲ್ಲಿಸುತ್ತಾರೆ. ಇಂತಿಪ್ಪ ಶ್ರೀನಿವಾಸ್ ರಾವ್ ಅವರ ಕಿರಿಯ ಪುತ್ರ ಸುಮಂತ್ ಪರರ ಸಂಕಷ್ಟಗಳಿಗೆ ತುಡಿಯುವ ಮನಸ್ಸಿನವ. ಈ ತುಡಿತವೇ ಆತನನ್ನು ತನ್ನ ತಂದೆಯ ನಿಯಮದ ಪ್ರಕಾರ 99 ತಪ್ಪುಗಳನ್ನು ಮಾಡಿದ ಸ್ಥಿತಿಗೆ ತಂದು ನಿಲ್ಲಿಸಿದೆ. ಇನ್ನೊಂದು ತಪ್ಪು ಮಾಡಿದರೆ ಮನೆಯ ಹೊಸ್ತಿಲು ದಾಟಬೇಕಾಗುತ್ತದೆ! ಇಲ್ಲಿ ತಂದೆ–ಮಗ ಎರಡು ಆಶಯಗಳ ಪ್ರತಿನಿಧಿಗಳಾಗಿ ಕಾಣುತ್ತಾರೆ. ನೂರನೇ ತಪ್ಪು ಯಾವ ರೀತಿ ಘಟಿಸುತ್ತದೆ, ಆ ನಡುವೆ ನಡೆಯುವ ಕಥೆ ಏನು ಎನ್ನುವುದೇ ಇಲ್ಲಿ ಕುತೂಹಲಕ್ಕೆ ಕಾರಣ.
ನೂರನೇ ತಪ್ಪಿನ ಭಯದಲ್ಲಿಯೇ ತನ್ನ ಅಣ್ಣನ ಮದುವೆಗಾಗಿ ಮೈಸೂರಿನಿಂದ ತಿರುಪತಿಗೆ ಪಯಣಿಸುವ ಸುಮಂತ್ನನ್ನು ಪ್ರಾರ್ಥನಾ ಒಗ್ಗೂಡುವಳು. ಈ ಮೈಸೂರು– ತಿರುಪತಿ ನಡುವಿನ ಪಯಣದಲ್ಲಿ ನಾಯಕ–ನಾಯಕಿಯ ಆಟ, ಪಡಿಪಾಟಲಿನ ಸನ್ನಿವೇಶಗಳನ್ನು ಹೊತ್ತುಕೊಂಡು ಸಿನಿಮಾ ಸರಳವಾಗಿ ಸಾಗುತ್ತದೆ. ‘ತಿರುಪತಿ ಎಕ್ಸ್ಪ್ರೆಸ್’ ವೇಗವಾಗಿಯೂ ಓಡುವುದಿಲ್ಲ, ನಿಧಾನಗತಿಯಲ್ಲೂ ಚಲಿಸುವುದಿಲ್ಲ. ಸಮತೂಕದ ತಾಳ್ಮೆಯ ಪಯಣ. ಚಿಕ್ಕಣ್ಣ, ಸಾಧುಕೋಕಿಲಾ, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್, ಸಿಹಿಕಹಿ ಚಂದ್ರು ಸೇರಿದಂತೆ ಹಾಸ್ಯ ನಟರ ದಂಡೇ ಇದೆ. ಇವರು ತಮ್ಮ ಸೀಮಿತ ಪಾತ್ರ ಪರಿಧಿಯಲ್ಲಿ ಪ್ರೇಕ್ಷಕನ ಮೊಗವನ್ನು ಅರಳಿಸುತ್ತಾರೆ. ತಮ್ಮ ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ ನಾಯಕ ಸುಮಂತ್ ನಟನೆ ಸುಧಾರಿಸಿದೆ. ನಾಯಕಿ ಕೃತಿ ಖರಬಂಧ ಸಿಕ್ಕಿರುವ ಪಾತ್ರಕ್ಕೆ ಒಗ್ಗಿಕೊಂಡಿದ್ದಾರೆ. ಕಥೆಯಲ್ಲಿ ಇಲ್ಲದ ಅದ್ದೂರಿತ ಇಲ್ಲಿನ ಎರಡು ಹಾಡುಗಳಲ್ಲಿದ್ದು, ಆ ಕ್ಷಣದಲ್ಲಿ ಇಷ್ಟವಾಗುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.