ಪ್ರಬೆಂಗಳೂರು: ‘ಕುಲಕಸುಬನ್ನು ನಿರ್ವಂಚನೆಯಿಂದ ಮಾಡುತ್ತ, ಸಮಾಜಸೇವೆ ಮಾಡುತ್ತಿರುವ ಮಡಿವಾಳ ಜನಾಂಗದವರಿಗೆ ಸಮಾಜದಲ್ಲಿರುವ ಕೊಳೆಯ ಕುರಿತು ಅಪಾರ ಸಿಟ್ಟಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಹೇಳಿದರು.
ನಗರದಲ್ಲಿ ಮಂಗಳವಾರ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕುಲದ ವೃತ್ತಿ ನೆಚ್ಚಿ, ವಿದ್ಯೆ ಮತ್ತು ಸಂಪತ್ತಿನಿಂದ ವಂಚಿತವಾಗಿ ಅನೇಕ ಸಾಮಾಜಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯದಡಿ ದೊರೆಯಬೇಕಾದ ಸವಲತ್ತುಗಳು ಈವರೆಗೆ ಸಿಗದಿರುವುದು ದುರಂತ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಜನಾಂಗವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಸಾಮಾಜಿಕ ನ್ಯಾಯ ದೊರೆಯಬೇಕಾದರೆ, ಸಮಾಜದ ದೌರ್ಬಲ್ಯಗಳನ್ನು ಗುರುತಿಸುವ ಸಮೀಕ್ಷೆ ಮಾಡುವ ಅಗತ್ಯವಿದೆ. ಅದಿಲ್ಲದೇ, ಯೋಜನೆಗಳ ಪ್ರಾಯೋಗಿಕ ಅನುಷ್ಠಾನ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜಾತಿವಾರು ಜನಗಣತಿಗೆ ಸಮೀಕ್ಷೆ ನಡೆಸುತ್ತಿದೆ’ ಎಂದರು.
ಎಸ್ಸೆಸ್ಸೆಲ್ಸಿ, ಪಿಯು ಮತ್ತು ಪದವಿಯಲ್ಲಿ ಅಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.