ಬೆಂಗಳೂರು: ರಾಜ್ಯ ಸಹಕಾರಿ ಮಹಾಮಂಡಳಿಯ 14 ನಿರ್ದೇಶಕರ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.
14 ನಿರ್ದೇಶಕ ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ, ಜೆಡಿಎಸ್ನ ಶಾಸಕ ಜಿ.ಟಿ.ದೇವೇಗೌಡರ ಬಣ ಹಾಗೂ ವಸತಿ ಮಹಾಮಂಡಳದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಅವರ ಬಣ ತೀವ್ರ ಪೈಪೋಟಿ ನಡೆಸಿದವು.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿನ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ನಡೆಯಿತು. ಜಿ.ಟಿ.ದೇವೇಗೌಡರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಬೆಳಗಾವಿ ವಿಭಾಗಕ್ಕೆ ಒಳಪಟ್ಟ ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್ ಪ್ರತಿನಿಧಿ ಶಿವನಗೌಡ ಎಸ್.ಬಿರಾದಾರ ಚುನಾವಣೆಗೆ ಗೈರು ಹಾಜರಾಗಿದ್ದು ವಿಶೇಷವಾಗಿತ್ತು.
ಹೈಕೋರ್ಟ್ ತಡೆಯಾಜ್ಞೆ: ಮೈಸೂರು ವಲಯದ ಮೂರು ಸ್ಥಾನಗಳ ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್ ತಡೆ ಆದೇಶ ಇದೆ. ಹೀಗಾಗಿ ಪೂರ್ಣ ಫಲಿತಾಂಶವನ್ನು ಹೈಕೋರ್ಟ್ ಆದೇಶ ಬಂದ ಬಳಿಕ ಪ್ರಕಟಿಸುವ ನಿರೀಕ್ಷೆ ಇದೆ.
ರಾಹುಕಾಲದ ಪ್ರಭಾವ..!: ಬೆಳಿಗ್ಗೆ 9 ಗಂಟೆಯಿಂದ 10.30ರವರೆಗೆ ರಾಹುಕಾಲ ಇದ್ದುದರಿಂದ ಯಾವುದೇ ಮತದಾರರು ಮತ ಹಾಕಲು ಮತಗಟ್ಟೆಯೊಳಗೆ ಬರದೇ ಹೋದದ್ದು ವಿಶೇಷವಾಗಿತ್ತು.
*
ಸರ್ಕಾರ ಸಹಕಾರ ಸಂಘಗಳ ಚುನಾವಣೆಗಳಲ್ಲಿ ಅಕ್ರಮ ನಡೆಸಲು ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ. ಈ ಅಕ್ರಮಗಳನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಿದ್ದೇವೆ.
-ಜಿ.ಟಿ.ದೇವೇಗೌಡ,
ಹಾಲಿ ಸಹಕಾರಿ ಮಹಾಮಂಡಳಿಯ ಅಧ್ಯಕ್ಷರು