ಇಸ್ಲಾಮಾಬಾದ್ (ಪಿಟಿಐ):ಮುಂಬೈ ದಾಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಭಾರತವನ್ನು ಕೋರಲಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.
‘2008ರ ನವೆಂಬರ್ 26ರಂದು ಉಗ್ರರು ಮುಂಬೈನಲ್ಲಿ ನಡೆಸಿದ ದಾಳಿ ಕುರಿತ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಲು ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಂತೆ ವಿದೇಶಾಂಗ ಕಾರ್ಯದರ್ಶಿಯು ಭಾರತದ ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಭಾರತದ ಉತ್ತರಕ್ಕಾಗಿ ಕಾಯುತ್ತಿದ್ದೇವೆ’ ಎಂದು ವಿದೇಶಾಂಗ ಕಚೇರಿ ವಕ್ತಾರ ನಫೀಸ್ ಝಕಾರಿಯಾ ತಿಳಿಸಿದ್ದಾರೆ.
ಭಾರತದಲ್ಲಿ ಪಾಕಿಸ್ತಾನದ ಕಲಾವಿದರಿಗೆ ಬೆದರಿಕೆ ಹಾಕುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಭಾರತದಲ್ಲಿ ಹಲವಾರು ಕಲಾ ಆಸಕ್ತರು ಪಾಕಿಸ್ತಾನದ ಕಲಾವಿದರನ್ನು ಸ್ವಾಗತಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ಕೆಲವರ ಹೇಳಿಕೆ ಬಗ್ಗೆ ಗಮನ ನೀಡಬೇಕಾಗಿಲ್ಲ’ ಎಂದರು.
‘ಸಂಬಂಧ ಸುಧಾರಣೆಯಾಗಬೇಕು ಮತ್ತು ಜನರ ನಡುವೆ ಸಂಪರ್ಕ ಹೆಚ್ಚಬೇಕು ಎನ್ನುವುದು ಉಭಯ ದೇಶಗಳ ಆಶಯವಾಗಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ’ ಎಂದು ತಿಳಿಸಿದರು.