ನವದೆಹಲಿ (ಪಿಟಿಐ): ಇಲ್ಲಿನ ಇಂಡಿಯಾ ಗೇಟ್ ಬಳಿ ಶನಿವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ವರ್ಷ ಅಧಿಕಾರಾವಧಿಯ ಸಾಧನೆಗಳ ‘ರಿಪೋರ್ಟ್ ಕಾರ್ಡ್’ ದೇಶದ ಮುಂದಿಟ್ಟರು.
ಸಂಜೆ ಐದು ಗಂಟೆಗೆ ಇಂಡಿಯಾಗೇಟ್ನಲ್ಲಿ ಆರಂಭವಾದ ‘ಎಕ್ ನಯೀ ಸುಬಹ’ (ಒಂದು ಹೊಸ ಮುಂಜಾನೆ) ಕಾರ್ಯಕ್ರಮದಲ್ಲಿ ಎನ್ಡಿಎ ಸರ್ಕಾರ ಎರಡು ವರ್ಷಗಳಲ್ಲಿ ಜಾರಿ ಮಾಡಿದ ಪ್ರಮುಖ ಯೋಜನೆಗಳನ್ನು ಪರಿಚಯಿಸಿದರು.
ಐದು ಗಂಟೆಗಳ ಕಾಲ ನಡೆದ ಸುದೀರ್ಘ ಸಮಾರಂಭದಲ್ಲಿ ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ರಾಯಭಾರಿಗಳಾಗಿದ್ದ ಚಿತ್ರನಟ–ನಟಿಯರು ಬಂದು ವೇದಿಕೆಯಲ್ಲಿ ಆಯಾ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ರೂಪಿಸಿರುವ ಬೇಟಿ ಬಚಾವೊ ಬೇಟಿ ಪಢಾವೊ ಆಂದೋಲನದ ರಾಯಭಾರಿಯಾಗಿರುವ ನಟ ಅಮಿತಾಬ್ ಬಚ್ಚನ್, ‘ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಸ್ತ್ರೀಯರನ್ನು ಕಡೆಗಣಿಸುವಂತಿಲ್ಲ. ‘ನಮ್ಮನ್ನು ಕಡೆಗಣಿಸಲಾಗುತ್ತಿದೆ, ನಾವು ಅಸಹಾಯಕರು’ ಎಂಬ ಭಾವನೆ ಅವರಲ್ಲಿ ಮೂಡಬಾರದು. ಎಲ್ಲ ವಿಚಾರಗಳಲ್ಲೂ ಅವರು ಸಮಾನ ಪಾಲುದಾರರು’ ಎಂದರು.