ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಿದ್ದರಾಮ'ನ ಹುಂಡಿಯಿಂದ ಹುದ್ದೆ ಸಿದ್ಧಿಯವರೆಗೆ.....

Last Updated 10 ಮೇ 2013, 13:54 IST
ಅಕ್ಷರ ಗಾತ್ರ

ಬೆಂಗಳೂರು : ಸಿದ್ದರಾಮಯ್ಯ ಕೇವಲ ಒಂದುವರ್ಗಕ್ಕೆ ಮಾತ್ರ ಸೀಮಿತರಾದವರಲ್ಲ. ಇಡಿ ರಾಜ್ಯದ ರಾಜಕೀಯದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅತ್ಯಂತ ವರ್ಣ ರಂಜಿತ ವ್ಯಕ್ತಿತ್ವದ ಜತೆಗೆ ಅನೇಕ ಏಳು ಬೀಳುಗಳನ್ನು ಕಂಡಿರುವ ಇವರು ಅಧಿಕಾರದ ವಿವಿಧ ಮಜಲುಗಳ ಅನುಭವಗಳನ್ನು ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ತಾವು ಅರ್ಹರು ಎಂಬುದನ್ನು ಸಾಬೀತುಮಾಡಿದ್ದಾರೆ.

ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ದರಾಮನ ಹುಂಡಿ ಎಂಬ ಗ್ರಾಮದಲ್ಲಿ 1948ರ ಆಗಸ್ಟ್ 12ರಂದು ಹುಟ್ಟಿದ ಇವರು ಓದಿದ್ದು ಕಾನೂನು. ಸ್ವಲ್ಪ ಕಾಲ ಮೈಸೂರಿನಲ್ಲಿ  ವಕೀಲ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿದ್ದರಾಮಯ್ಯ 1978ರಲ್ಲಿ ತಮ್ಮನ್ನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡರು.

ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳ ಪಕ್ಷದ ಟಿಕೆಟ್‌ನಿಂದ ಮೈಸೂರು ತಾಲ್ಲೂಕು ಮಂಡಳಿಗೆ ಸದಸ್ಯರಾಗಿ ಚುನಾಯಿತರಾದ ಸಿದ್ದರಾಮಯ್ಯನವರ ರಾಜಕೀಯ ಜೀವನ ಏರುಪೇರಿನದು.

1983ರಲ್ಲಿ ಇವರು ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿ ನಂತರದಲ್ಲಿ ಜನತಾ ಪಕ್ಷವನ್ನು ಸೇರಿದರು. ಈ ಅವಧಿಯಲ್ಲಿ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿ ಆಡಳಿತ ಭಾಷೆಯಾಗಿ ಕನ್ನಡವನ್ನು ತರುವುದಕ್ಕಾಗಿ ಬಹುವಾಗಿ ಶ್ರಮಿಸಿದರು.

1985ರಲ್ಲಿ ಬಂದ ಮಧ್ಯಂತರ ಚುನಾವಣೆಯಲ್ಲೂ ವಿಧಾನಸಭೆಗೆ ಆರಿಸಿ ಬಂದ ಸಿದ್ದರಾಮಯ್ಯ ರಾಮಕೃಷ್ಣಹೆಗಡೆ ಅವರ ಸಚಿವ ಸಂಪುಟದಲ್ಲಿ ಪಶು ಸಂಗೋಪನಾ ಖಾತೆಯ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ಈ ಅವಧಿಯಲ್ಲೇ ಅವರು ಪಶುಸಂಗೋಪನೆ ಖಾತೆಯ ಜತೆಗೆ ರೇಷ್ಮೆ ಖಾತೆ, ಸಾರಿಗೆ ಖಾತೆಗಳನ್ನು ನಿಭಾಯಿಸಿ ತಮ್ಮ ರಾಜಕೀಯ ಅನುಭವಗಳನ್ನು ಪಡೆದರು.

ಆದರೆ 1989ರ ವಿಧಾನಸಭಾ ಚುನಾವಣೆಯಲ್ಲಿ ಮೊದಲಬಾರಿಗೆ ಇವರು ಸೋಲು ಕಾಣಬೇಕಾಯಿತು. ರಾಜಶೇಖರಮೂರ್ತಿ ಇವರನ್ನು ಮಣಿಸಿದರು.

1992ರಲ್ಲಿ ಜನತಾದಳದ ಮಹಾಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು.

1994ರಲ್ಲಿ ಮತ್ತೆ ವಿಧಾನಸಭೆಯನ್ನು ಪ್ರವೇಶಿಸಿದ ಸಿದ್ದರಾಮಯ್ಯ ಅವರಿಗೆ ಒಲಿದಿದ್ದು ಮಹತ್ವದ ಹಣಕಾಸು ಖಾತೆ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದ ಇವರು ದೇವೇಗೌಡರು ಪ್ರಧಾನಿಯಾದಾಗ ರಾಜ್ಯದಲ್ಲಿ ಮುಖ್ಯಮಂತ್ರಿಯಾದ ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ 1996ರಲ್ಲಿ ಉಪಮುಖ್ಯಮಂತ್ರಿ ಹುದ್ದೆಗೇರಿದರು.

ನಂತರ ಜನತಾದಳ ವಿಭಜನೆಗೊಂಡಾಗ ದೇವೇಗೌಡರ ಜಾತ್ಯತೀತ ಜನತಾದಳವನ್ನು ಸೇರಿ ಅಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ಆದರೆ ಮತ್ತೆ 1999ರ ಚುನಾವಣೆಯಲ್ಲಿ ಇವರು ಸೋಲು ಕಾಣಬೇಕಾಗಿ ಬಂದಿತು. ಆದರೆ ಕಂಗೆಡದ ಸಿದ್ದರಾಮಯ್ಯ 2004ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕೂದಲೆಳೆಯುವ ಅಂತರದಲ್ಲಿ ತಪ್ಪಿಸಿಕೊಂಡರು. ಅವರು ಮತ್ತೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು.

2006ರಲ್ಲಿ ದೇವೇಗೌಡರೊಂದಿಗೆ ಮೂಡಿದ ವಿರಸದ ಕಾರಣ ಕಾಂಗ್ರೆಸ್ ಪಕ್ಷ ಸೇರಿ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿ ಬರೇ 257 ಮತಗಳ ಅಂತರದಿಂದ ಜಯ ಸಾಧಿಸಿದರು.

2008ರಲ್ಲಿನ ಚುನಾವಣೆಯಲ್ಲಿ ಮತ್ತೆ ಜಯ ಸಾಧಿಸಿ ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದರು. ಸತತವಾಗಿ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗುತ್ತಲೇ ಬಂದ ಸಿದ್ದರಾಮಯ್ಯನವರ ಪಾಲಿಗೆ ಮುಖ್ಯಮಂತ್ರಿ ಗಾದಿ ಈ ಬಾರಿ ಕಟ್ಟಕಡೆಗೂ ಒಲಿದು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT