ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಸಂಪುಟದ ನೂತನ ಸಚಿವರ ಪರಿಚಯ

Last Updated 18 ಮೇ 2013, 20:50 IST
ಅಕ್ಷರ ಗಾತ್ರ
ADVERTISEMENT



 

ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪ ಜನಿಸಿದ್ದು ದಾವಣಗೆರೆಯಲ್ಲಿ 1931ರ ಜೂನ್ 16ರಂದು. ಕಲ್ಲಪ್ಪ- ಸಾವಿತ್ರಮ್ಮ ದಂಪತಿಯ ಪುತ್ರ. ಪತ್ನಿ ಪಾರ್ವತಮ್ಮ ನಿಧನರಾಗಿದ್ದಾರೆ. ಮೂವರು ಪುತ್ರರಿದ್ದಾರೆ.

ಇಂಟರ್‌ಮೀಡಿಯೇಟ್‌ವರೆಗೆ ವ್ಯಾಸಂಗ ಮಾಡಿರುವ ಶಿವಶಂಕರಪ್ಪ, 1969ರಲ್ಲಿ ರಾಜಕೀಯ ಪ್ರವೇಶ. ನಗರಸಭಾ ಸದಸ್ಯರಾಗಿ ಆಯ್ಕೆ. 1972ರಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿಯಾಗಿ ನೇಮಕ. 1971-73ರವರೆಗೆ ದಾವಣಗೆರೆ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1978-80ರವರೆಗೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ. ಈಗ ಕೆಪಿಸಿಸಿ ಖಜಾಂಚಿ.

1998ರಿಂದ 99ರವರೆಗೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 1994-1998, 2004-2008, 2008-13ರ ಅವಧಿಯಲ್ಲಿ ಶಾಸಕರಾಗಿದ್ದು. 2013ರಲ್ಲಿ ನಡೆದ ಚುನಾವಣೆಯಲ್ಲಿಯೂ ಮರು ಆಯ್ಕೆಯಾಗಿದ್ದಾರೆ. ವೀರಶೈವ ಲಿಂಗಾಯತ ಜಾತಿಗೆ ಸೇರಿದ ಅವರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
.......

ರಮಾನಾಥ ರೈ

ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿರುವ ಬಿ.ರಮಾನಾಥ ರೈ (60) ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಮುನ್ನಡೆಸಿದವರು. 1985ರಿಂದಲೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಲೇ ಬಂದಿರುವ ಅವರು, 2004ರಲ್ಲಿ ಸೋಲುಂಡದ್ದು ಬಿಟ್ಟರೆ ಕ್ಷೇತ್ರದಲ್ಲಿ ಅಜೇಯರಾಗಿಯೇ ಮುನ್ನಡೆದಿದ್ದಾರೆ.

ವೀರಪ್ಪ ಮೊಯಿಲಿ ಸರ್ಕಾರದಲ್ಲಿ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ರಮಾನಾಥ ರೈ ಅವರು, ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದರು. ಜತೆಗೆ ಬಂದರು, ಮೀನುಗಾರಿಕೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಬಿಎ ಪದವೀಧರರಾದ ರಮಾನಾಥ ರೈ ಅವರು ಎನ್‌ಎಸ್‌ಯುಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು. ಬಂಟ್ವಾಳ ತಾಲ್ಲೂಕು ಭೂ ಅಭಿವೃದ್ಧಿ ಬ್ಯಾಂಕ್‌ನ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿ ಅವರು ಬಂಟ ಸಮುದಾಯದ ಬೆಳ್ಳಿಪ್ಪಾಡಿ ಮನೆತನದವರು. ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ಜತೆ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಪತ್ನಿ ಧನಭಾಗ್ಯ ಆರ್.ರೈ. ಪುತ್ರ ಚೈತ್ರದೀಪ ರೈ, ಪುತ್ರಿ ಚರಿಷ್ಮಾ ರೈ.
..........
 

ಪಿ.ಟಿ. ಪರಮೇಶ್ವರ

ಪಿ.ಟಿ. ಪರಮೇಶ್ವರ ನಾಯ್ಕ ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ (ಮೀಸಲು) ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಮೊದಲ ಬಾರಿ ಸಚಿವರಾಗಿದ್ದಾರೆ. ಮೊದಲು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ (ಮೀಸಲು) ವಿಧಾನಸಭೆ ಕ್ಷೇತ್ರದಿಂದ 1999 ಹಾಗೂ 2004ರಲ್ಲಿ ಸತತ ಎರಡು ಬಾರಿ ಶಾಸಕರಾಗಿದ್ದರು.

ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಹೂವಿನ ಹಡಗಲಿ ಕ್ಷೇತ್ರವು ಪರಿಶಿಷ್ಟ ಜಾತಿಗೂ, ಹರಪನಹಳ್ಳಿ ಕ್ಷೇತ್ರವು ಸಾಮಾನ್ಯ ವರ್ಗಕ್ಕೂ ಮೀಸಲಾಗಿದ್ದರಿಂದ, 2008ರಲ್ಲಿ ಎಂ.ಪಿ. ಪ್ರಕಾಶ್ ಅವರಿಗಾಗಿ ಕ್ಷೇತ್ರ ಬದಲಿಸಿ, ಹೂವಿನ ಹಡಗಲಿಯಲ್ಲಿ ಸ್ಪರ್ಧಿಸಿ ಸೋತಿದ್ದರು.

ಕಾಂಗ್ರೆಸ್‌ನಿಂದಲೇ ರಾಜಕೀಯ ಜೀವನ ಆರಂಭಿಸಿರುವ ಇವರು, 1987ರಲ್ಲಿ ಹಿರೇಮ್ಯಾಗಳಗೇರಿ ಮಂಡಲ ಪಂಚಾಯಿತಿ ಸದಸ್ಯರಾಗಿ, 1993ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಲಕ್ಷ್ಮಿಪುರ ತಾಂಡಾ ಪ್ರತಿನಿಧಿಸಿದ್ದರು. 1995ರಲ್ಲಿ  ತಾಲ್ಲೂಕು ಪಂಚಾಯಿತಿಯ ಹಿರೇ ಮ್ಯಾಗಳಗೇರಿ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದರಲ್ಲದೆ, 1997ರಲ್ಲಿ ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಹರಪನಹಳ್ಳಿ ಬಳಿಯ ಲಕ್ಷ್ಮಿಪುರ ತಾಂಡಾದ ಪಿ. ಥಾವರ‌್ಯಾ ನಾಯ್ಕ ಹಾಗೂ ಗಂಗಿಬಾಯಿ ದಂಪತಿಯ ಪುತ್ರನಾಗಿ 1964ರ ಮೇ 11ರಂದು ಜನನ. ಬಿ.ಎ. ಪದವೀಧರ. ಪತ್ನಿ ಪ್ರೇಮಾ . ಈ ದಂಪತಿಗೆ ಅವಿನಾಶ್ ಮತ್ತು ಭರತ್ ಎಂಬ ಮಕ್ಕಳು.
.........

ಯು.ಟಿ.ಖಾದರ್

ಮಂಗಳೂರು: ಮಂಗಳೂರಿನ ಯುವ ನಾಯಕ ಯು.ಟಿ.ಅಬ್ದುಲ್ ಖಾದರ್ (44) ತಮ್ಮ ಮೂರನೇ ಅವಧಿಯ ಶಾಸಕತ್ವದಲ್ಲೇ ಸಚಿವ ಸ್ಥಾನ ಪಡೆದಿದ್ದಾರೆ. 2007ರಲ್ಲಿ ತಮ್ಮ ತಂದೆ ಯು.ಟಿ.ಫರೀದ್ ನಿಧನದ ನಂತರ ಉಳ್ಳಾಲ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದ ಅವರು ಬಳಿಕ ಸತತ ಎರಡು ಬಾರಿ ಮಂಗಳೂರು ಕ್ಷೇತ್ರದಿಂದ ಆರಿಸಿ ಬಂದರು. ಅವರು ಕಾನೂನು ಪದವೀಧರ.

ಎನ್‌ಎಸ್‌ಯುಐನಲ್ಲಿ ಸಕ್ರಿಯರಾಗಿದ್ದ ಅವರು 1992ರಲ್ಲಿ ಜಿಲ್ಲಾ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿಯಾಗಿ, 1994ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅದೇ ವರ್ಷ ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ನೇಮಕಗೊಂಡಿದ್ದರು. 2000ದಲ್ಲಿ ರಾಜ್ಯ ಎನ್‌ಎಸ್‌ಯುಐ ಉಪಾಧ್ಯಕ್ಷರಾಗಿದ್ದರು.

2002ರಲ್ಲಿ ಅಖಿಲ ಭಾರತ ಸೇವಾದಳದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು. ಮೋಟಾರ್ ಕ್ರಾಸಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಜನರೊಂದಿಗೆ ಸದಾ ಬೆರೆಯುವ ಸ್ವಭಾವ ಅವರನ್ನು ಇತರರಿಗಿಂತ ಭಿನ್ನ ಸ್ಥಾನದಲ್ಲಿ ನಿಲ್ಲಿಸಿದೆ. ಯು.ಟಿ.ಖಾದರ್ ಅವರ ಪತ್ನಿ ಲಾಮಿಸ್ ಖಾದರ್, ಪುತ್ರಿ ಹವ್ವಾ ನಸೀಮಾ.
...........

ಎಚ್.ಕೆ.ಪಾಟೀಲ

ಗದಗದಿಂದ ಆರಿಸಿ ಬಂದಿರುವ ಹಿರಿಯ ಸಹಕಾರ ಧುರೀಣ ಎಚ್.ಕೆ.ಪಾಟೀಲ (ಹನುಮಂತಗೌಡ ಕೃಷ್ಣಗೌಡ ಪಾಟೀಲ) ಮೂರು ದಶಕಗಳಿಂದ  ರಾಜಕೀಯದಲ್ಲಿದ್ದಾರೆ. 1984ರಿಂದ 2008ರ ವರೆಗೆ ವಿಧಾನ ಪರಿಷತ್ (ಪಶ್ಚಿಮ ಪದವೀಧರ ಕ್ಷೇತ್ರ) ಸದಸ್ಯರಾಗಿದ್ದರು.  1993ರ ಜನವರಿಯಿಂದ 1994ರ ಡಿಸೆಂಬರ್‌ವರೆಗೆ ವೀರಪ್ಪ ಮೊಯಿಲಿ ಸರ್ಕಾರದಲ್ಲಿ ಜವಳಿ ಖಾತೆ ರಾಜ್ಯ ಸಚಿವರಾಗಿದ್ದರು. 1994ರಿಂದ 1999ರ ವರೆಗೆ ಹಾಗೂ 2006 ರಿಂದ 2008ರ ವರೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದರು.

1999ರಿಂದ 2003ರ ವರೆಗೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ನಂತರ ಕೃಷಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬಿಎಸ್ಸಿ ಎಲ್‌ಎಲ್‌ಬಿ (ಸ್ಪೆಷಲ್) ಪದವೀಧರ. ಪತ್ನಿ ಹೇಮಾ. ಮಕ್ಕಳು- ಕೃಷ್ಣಗೌಡ, ಲಕ್ಷ್ಮಿ  ಮತ್ತು ರಾಜೇಶ್ವರಿ. ಕೆ.ಎಚ್.ಪಾಟೀಲ ಪ್ರತಿಷ್ಠಾನ ಮತ್ತು ರೂರಲ್ ಮೆಡಿಕಲ್ ಸೊಸೈಟಿ ಮೂಲಕ ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ 45 ಕಡೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಿದ್ದಾರೆ.
..........

ಅಭಯಚಂದ್ರ ಜೈನ್

ಬನಾರಸ್ ವಿಶ್ವವಿದ್ಯಾಲಯದ ಟೆನಿಸ್ ಆಟಗಾರರಾಗಿದ್ದ ಎಂ.ಕೆ. ಅನಂತರಾಜ್ ಜೈನ್ ಅವರ ಪುತ್ರ ಅಭಯಚಂದ್ರ ಜೈನ್ (64) ಮೂಡುಬಿದಿರೆ ಕ್ಷೇತ್ರದ ಸಚಿವ ಸ್ಥಾನದ ಬರವನ್ನು ನೀಗಿಸಿದ್ದಾರೆ. ಮಂಗಳೂರು ಕೆಪಿಟಿಯಲ್ಲಿ ಅಟೊಮೊಬೈಲ್ ಡಿಪ್ಲೊಮಾ ವ್ಯಾಸಂಗ ಮಾಡಿರುವ ಜೈನ್ ಅವರು ವೃತ್ತಿಯಲ್ಲಿ ಸಾರಿಗೆ ಉದ್ಯಮಿ, ಪ್ರವೃತ್ತಿಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ಜತೆಗೆ ಮೂಡುಬಿದಿರೆ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಪ್ರೇರಣೆಯಿಂದ 1972ರಲ್ಲಿ ಮೂಡುಬಿದಿರೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಅವರು, 1980ರಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದರು. 1991ರಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನಿಯುಕ್ತರಾದರು. 1992ರಲ್ಲಿ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಎಂಎಲ್‌ಸಿ ಆಗಿ ನೇಮಕಗೊಂಡರೆ, 1994ರಲ್ಲಿ ಮತ್ತೆ ಇದೇ ಸ್ಥಾನಕ್ಕೆ ಪುನರಾಯ್ಕೆಯಾದರು.

1999ರಿಂದೀಚೆಗೆ ಅವರು ಸತತವಾಗಿ ಮೂಡುಬಿದಿರೆ-ಮೂಲ್ಕಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2004ರಲ್ಲಿ ವಿಧಾನಸಭೆ ಸಚೇತಕರಾಗಿ ಹಾಗೂ 2009ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರಿಗೆ ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿದೆ. ಅಭಯಚಂದ್ರರ ಪತ್ನಿ ಮಂಜುಳಾ. ಆಯುಷ್ ಮತ್ತು ಕ್ಷಮಾ ಅವರ ಮಕ್ಕಳು.
.............

ದೇಶಪಾಂಡೆ

ಹಳಿಯಾಳ ಕ್ಷೇತ್ರದಿಂದ ಏಳು ಬಾರಿ ಜಯಗಳಿಸಿ ದಾಖಲೆ ನಿರ್ಮಿಸಿರುವ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೆ ಸಚಿವ ಸ್ಥಾನ ಅಲಂಕರಿಸಿದ್ದಾರೆ.

1983ರಿಂದ 2004ರ ವರೆಗೆ ದೇಶಪಾಂಡೆಯವರು ಸತತ ಆರು ಸಲ ಗೆದ್ದು ಎರಡೆರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದರು. 1985ರಲ್ಲಿ ಮೊದಲ ಬಾರಿಗೆ ಸಚಿವರಾದರು.

1989ರ ಚುನಾವಣೆಯಲ್ಲಿ ಜಯ ಗಳಿಸಿ ನಗರಾಭಿವೃದ್ಧಿ ಖಾತೆ ಸಚಿವರಾದರು, 1994, 98 ಹಾಗೂ 2004ರಲ್ಲಿ ಗೆದ್ದು ಸತತ ಮೂರು ಅವಧಿಗೆ ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ನಿಭಾಯಿಸಿದ್ದಾರೆ. ಎಲ್‌ಎಲ್‌ಬಿ ಪದವೀಧರರಾದ ದೇಶಪಾಂಡೆ (66) ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯಕ್ಕೆ ಸೇರಿದವರು.

ಹಳಿಯಾಳದಲ್ಲಿ ವಕೀಲ ವೃತ್ತಿ ಆರಂಭಿಸಿ, ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. ಪತ್ನಿ ರಾಧಾ. ಈ ದಂಪತಿಗೆ ಪ್ರಸಾದ್ ಹಾಗೂ ಪ್ರಶಾಂತ್ ಎಂಬ ಪುತ್ರರು. ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರು ದೇಶಪಾಂಡೆಯವರ ಬೀಗರು.

ದೇಶಪಾಂಡೆಯವರ ಇಡೀ ರಾಜಕೀಯ ಜೀವನಕ್ಕೆ ಕಹಿ ನೀಡಿದ್ದು 2008ರ ಚುನಾವಣೆ. ಜೆಡಿಎಸ್ ಅಭ್ಯರ್ಥಿ ಸುನಿಲ್ ಹೆಗಡೆ ವಿರುದ್ಧ ಸೋತರು.
..........

ವಿನಯ ಕುಮಾರ್ ಸೊರಕೆ

ಉಡುಪಿ: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ (1985 ಮತ್ತು 1994) ಆಯ್ಕೆಯಾದ ಮತ್ತು ಉಡುಪಿ ಲೋಕಸಭಾ ಕ್ಷೇತ್ರದಿಂದ 1999ರಲ್ಲಿ ಆಯ್ಕೆಯಾದ ವಿನಯಕುಮಾರ್ ಸೊರಕೆ (58) ಬಿಲ್ಲವ ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರು. ಬಿಎಸ್‌ಸಿ ಎಲ್‌ಎಲ್‌ಬಿ ಪದವೀಧರರಾದ ಅವರು ಈ ಬಾರಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಎದುರಿಸಿ ಗೆದ್ದು ಬಂದವರು.

1982-1987ರ ವರೆಗೆ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸೊರಕೆ ಅವರು ಭೂ ಸುಧಾರಣಾ ಚಳವಳಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದವರು. ಅವರು ಭೂ ನ್ಯಾಯಮಂಡಳಿ ಸದಸ್ಯರೂ ಆಗಿದ್ದರು. 1989ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್‌ನ ಜಂಟಿ ಕಾರ್ಯದರ್ಶಿಯಾದ ಅವರು, 1991-2000 ಅವಧಿಯಲ್ಲಿ ರಾಜ್ಯ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಸಿಂಡಿಕೇಟ್ ಬ್ಯಾಂಕ್‌ನ ನಿರ್ದೇಶಕರಾಗಿದ್ದ ಅವರು ಸದ್ಯ ಎಐಸಿಸಿಯ ಕಾರ್ಯದರ್ಶಿ ಮತ್ತು ದಕ್ಷಿಣ ಭಾರತದ ಸೇವಾದಳದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಬೇರನ್ನು ಆಳಕ್ಕೆ ಇಳಿಸುವಲ್ಲಿ ಸೊರಕೆ ಅವರು ಮಾಡಿದ ಪ್ರಯತ್ನ ಉಲ್ಲೇಖನೀಯ.
............

ಜಯಚಂದ್ರ

ಆರನೇ ಬಾರಿ ಶಾಸಕರಾಗಿರುವ ಟಿ.ಬಿ.ಜಯಚಂದ್ರ ರಾಜ್ಯದ ಹಿರಿಯ ಶಾಸಕರಲ್ಲಿ ಒಬ್ಬರು. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವರಾಗಿ ಕೃಷಿ, ತೋಟಗಾರಿಕೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಒಂದು ವರ್ಷ (2002-03) ನವದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದರು. ಈಗ ಎರಡನೇ ಸಲ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಡ ಕೃಷಿ ಕುಟುಂಬದ ಹಿನ್ನೆಲೆಯ ಜಯಚಂದ್ರ ಬಿಎಸ್ಸಿ, ಎಲ್‌ಎಲ್‌ಬಿ ಪದವೀಧರ. ತಂದೆ ದಿವಂಗತ ಬೋರೇಗೌಡ, ತಾಯಿ ಲಕ್ಷ್ಮಮ್ಮ. ಮೂವರು ಪುತ್ರರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಾಯಿ ತಿಮ್ಮನಹಳ್ಳಿ ಊರು. ಕೆಲ ಕಾಲ ವಕೀಲರಾಗಿದ್ದರು. ಕಳ್ಳಂಬೆಳ್ಳ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ನಂತರ ಶಿರಾ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿದ್ದಾರೆ.

ಕೃಷ್ಣ ಕೊಳ್ಳ ನೀರಾವರಿ ಸಮಿತಿ, ಪಶ್ಚಿಮಘಟ್ಟ ನೀರಾವರಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಮೂರು ಸಲ ಎಐಸಿಸಿ ಸದಸ್ಯರಾಗಿದ್ದರು. ಕೆಪಿಸಿಸಿ ಕಾಯಂ ಆಹ್ವಾನಿತ ಸದಸ್ಯ. 1994 ಹಾಗೂ 2003ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿದ್ದರು.
...........

ಉಮಾಶ್ರೀ

ಚಿತ್ರ ನಟಿ ಉಮಾಶ್ರೀ ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶಿಸುತ್ತಿದ್ದಂತೆಯೇ ಅವರಿಗೆ ಸಚಿವೆ ಸ್ಥಾನವೂ ಒಲಿದಿದೆ. ಅವರು ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದ ಶಾಸಕಿ. ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ನೊಣವಿನಕೆರೆ ಗ್ರಾಮದವರು.

ರಾಜ್ಯಶಾಸ್ತ್ರದಲ್ಲಿ ಪದವೀಧರೆ. ಅವರ ಬದುಕೇ ಒಂದು ಸಿನಿಮಾ ಕಥೆಯಂತಿದೆ. ಕಷ್ಟಗಳ ನಡುವೆ ಎದೆಗುಂದದೇ ಬೆಳೆದು ಬಂದ ಅವರಿಗೆ ಈಗ 57 ವರ್ಷ ವಯಸ್ಸು. ಮಗ ವಿಜಯಕುಮಾರ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಗಳು ಗಾಯತ್ರಿ ದಂತ ವೈದ್ಯೆ.

350ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಅವರು ನಾಟಕ ರಂಗದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಎರಡು ದಶಕಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು  ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

2001ರಿಂದ 2006ರ ವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಉಮಾಶ್ರೀ 2008ರಲ್ಲಿ ತೇರದಾಳ ಕ್ಷೇತ್ರದಿಂದ ಚುನಾವಣೆ ಎದುರಿಸಿ, ಬಿಜೆಪಿಯ ಸಿದ್ದು ಸವದಿ ಅವರಿಂದ ಸೋಲನುಭವಿಸಿದ್ದರು.
.............

ಆಂಜನೇಯ

ಎಚ್. ಆಂಜನೇಯ ಜನಿಸಿದ್ದು ದಾವಣಗೆರೆಯ ಗಾಂಧಿನಗರದಲ್ಲಿ. 1955ರ ಏ. 15ರಂದು ಜನನ. ಪದವಿಪೂರ್ವ ಶಿಕ್ಷಣ ಪಡೆದ ಅವರು, ವ್ಯವಸಾಯವನ್ನು ವೃತ್ತಿಯಾಗಿಸಿಕೊಂಡವರು. ನಂತರ ರಾಜಕೀಯ ರಂಗ ಪ್ರವೇಶ.

1974ರಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯ. 1976- 80ರವರೆಗೆ ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ. 1982-87ರವರೆಗೆ ದಾವಣಗೆರೆ ನಗರಸಭೆ ಸದಸ್ಯ. 1986-89ರವರೆಗೆ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ. 1989-95ರವರೆಗೆ ರಾಜ್ಯ ಯುವ ಕಾಂಗ್ರೆಸ್ ಸದಸ್ಯ. 1996-98ರಿಂದ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಸೇವೆ. 1998-2004ರವರೆಗೆ ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ.

1999ರಲ್ಲಿ ಚಿತ್ರದುರ್ಗದ ಅಂದಿನ ಭರಮಸಾಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ. 2003-04ರವರೆಗೆ ರಾಜ್ಯ ಪ.ಜಾತಿ ಮತ್ತು ಪ.ಪಂಗಡದ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ. 2004ರಲ್ಲಿ ಭರಮಸಾಗರ ಕ್ಷೇತ್ರದ ಶಾಸಕನಾಗಿ ಆಯ್ಕೆ. 2008ರಲ್ಲಿ ಹೊಳಲ್ಕೆರೆ ಮೀಸಲು ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ. 2012ರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಿಂದ ಆಯ್ಕೆ.
...........

ಡಾ.ಶರಣ ಪ್ರಕಾಶ

`ಹ್ಯಾಟ್ರಿಕ್ ವೀರ' ಡಾಕ್ಟರ್
ಗುಲ್ಬರ್ಗ:
ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ, ವಿಧಾನಸಭೆಗೆ `ಹ್ಯಾಟ್ರಿಕ್' ಪ್ರವೇಶದ ಮೂಲಕ ಹಂತ ಹಂತವಾಗಿ ರಾಜಕೀಯ ಮೆಟ್ಟಿಲೇರಿದವರು ಡಾ. ಶರಣಪ್ರಕಾಶ ಪಾಟೀಲ ಊಡಗಿ. ಸರಳ, ಸಜ್ಜನ, ಮಿತಭಾಷಿ. ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಚರ್ಮ ವಿಜ್ಞಾನದಲ್ಲಿ ಸ್ನಾತಕೋತ್ತರ (ಎಂ ಡಿ) ಪದವೀಧರರು.

ಆದಿ ಲಿಂಗಾಯತ ಸಮುದಾಯಕ್ಕೆ ಸೇರಿದ ಅವರು ಜನಿಸಿದ್ದು 1967ರಲ್ಲಿ ಸೇಡಂ ತಾಲ್ಲೂಕಿನ ಊಡಗಿಯಲ್ಲಿ. ತಂದೆ ರುದ್ರಪ್ಪ ಪಾಟೀಲರು ಸೇಡಂ ಕ್ಷೇತ್ರದಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ತಾಯಿ ಮಲಕಮ್ಮ. ಪತ್ನಿ ಭಾಗ್ಯಶ್ರೀ ಗುಲ್ಬರ್ಗ ನಗರದಲ್ಲಿ ವೈದ್ಯರು.

ಗುಲ್ಬರ್ಗದ ವೈದ್ಯ ಕಾಲೇಜಿನಲ್ಲಿ ಓದುವಾಗಲೇ ವಿದ್ಯಾರ್ಥಿ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದ ಪಾಟೀಲರು, 1994ರಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದರು. 2000ದಲ್ಲಿ ಗುಲ್ಬರ್ಗ ಜಿಲ್ಲಾ ಪಂಚಾಯಿತಿಗೆ ಆಯ್ಕೆ. 2002ರಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ. 2004ರಲ್ಲಿ ಸೇಡಂ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಅವರು 2008 ಮತ್ತು 2013ರಲ್ಲಿಯೂ ಸತತವಾಗಿ ಗೆದ್ದರು.
.........

ಭಾರಿ ಅದೃಷ್ಟವಂತ
 

ಎಸ್.ತಂಗಡಗಿ

ಕೊಪ್ಪಳ: ಕನಕಗಿರಿ ಕ್ಷೇತ್ರದಿಂದ ಸತತ ಎರಡನೇ ಬಾರಿ ಆಯ್ಕೆಯಾಗಿದ್ದಾರೆ ಶಿವರಾಜ ಸಂಗಪ್ಪ ತಂಗಡಗಿ. ಹುನಗುಂದ ತಾಲ್ಲೂಕಿನ ಇಳಕಲ್ಲದಲ್ಲಿ 10 ಜೂನ್ 1971ರಂದು ಜನನ. ಬಿಎಸ್‌ಸಿ ಪದವೀಧರ. ವೃತ್ತಿಯಲ್ಲಿ ಗ್ರಾನೈಟ್ ಉದ್ಯಮಿ.

2001ರಲ್ಲಿ ಇಳಕಲ್ಲ ಪುರಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸದಸ್ಯರಾದರು. ನಂತರ ಬಿಜೆಪಿಗೆ ಸೇರಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 2008ರಲ್ಲಿ ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದರು. 2008ರಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದರು. ಬಿಜೆಪಿ ಟಿಕೆಟ್ ನಿರಾಕರಿಸಿತು. ಆದರೆ ಪಟ್ಟು ಬಿಡದ ತಂಗಡಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

ಅದಕ್ಕಾಗಿ ಬಿಜೆಪಿಯಿಂದ ಉಚ್ಚಾಟನೆ. ಪಕ್ಷೇತರ ಶಾಸಕರಾಗಿ ಆಯ್ಕೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಜೆಪಿಯು ತಂಗಡಗಿ ಅವರ ಬೆಂಬಲ ಯಾಚಿಸಿತು. ಬೆಂಬಲ ನೀಡಿದ ತಂಗಡಗಿ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2013ರ ಏಪ್ರಿಲ್‌ನಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಸಫಲರಾದರು. ಮರು ಆಯ್ಕೆಯೂ ಆದರು.

ಶಿವರಾಜ್ ಅವರು ಸಂಗಪ್ಪ ಮತ್ತು ಹುಲಿಗಮ್ಮ ದಂಪತಿಯ ಪುತ್ರ. ಶಿವರಾಜ್ ಮತ್ತು ವಿದ್ಯಾ ದಂಪತಿಗೆ ಇಬ್ಬರು ಪುತ್ರರು (ಶಶಾಂಕ್, ಕಿರಣ್) ಮತ್ತು ಪುತ್ರಿ (ತನುಷಾ) ಇದ್ದಾರೆ.
...........

ಮಂತ್ರಿಗಿರಿ ತಂದ 2ನೇ ಗೆಲುವು

ಕಿಮ್ಮನೆ ರತ್ನಾಕರ

ಶಿವಮೊಗ್ಗ: ಕಿಮ್ಮನೆ ರತ್ನಾಕರ ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕು ಮೇಗರವಳ್ಳಿಯಲ್ಲಿ 1951ರ ಜುಲೈ 17ರಂದು. ಕಿಮ್ಮನೆ ಮಂಜಪ್ಪಗೌಡ- ಶೇಷಮ್ಮ ದಂಪತಿಯ ಏಳನೇ ಪುತ್ರ. ಪತ್ನಿ ಎಸ್.ಸಿ.ಅರುಂಧತಿ. ಎಸ್ಸೆಸ್ಸೆಲ್ಸಿಯವರೆಗೆ ತೀರ್ಥಹಳ್ಳಿಯಲ್ಲೇ ವ್ಯಾಸಂಗ. ಪಿಯುಸಿ ಶಿವಮೊಗ್ಗದ ಎನ್‌ಇಎಸ್‌ನಲ್ಲಿ.

ಕಾರ್ಕಳದ ಭುವನೇಶ್ವರ ಕಾಲೇಜಿನಲ್ಲಿ ಬಿಎಸ್‌ಸಿ. ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ.1978ರಲ್ಲಿ ಶಿವಮೊಗ್ಗದಲ್ಲಿ ವಕೀಲ ವೃತ್ತಿ.  ಅದೇ ವರ್ಷ ಆರಗ ತಾಲ್ಲೂಕು ಪಂಚಾಯ್ತಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು.  1986ರಲ್ಲಿ ಆರಗ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧೆ, ಸೋಲು.

1987ರಲ್ಲಿ ತೀರ್ಥಹಳ್ಳಿ ತಾಲ್ಲೂಕು ಘಟಕದ ಜನತಾದಳದ ಕಾರ್ಯಾಧ್ಯಕ್ಷ, 1989ರಲ್ಲಿ  ಜನತಾದಳ ಹೋಳಾದಾಗ ದೇವೇಗೌಡ ಬಣದಿಂದ ತಾಲ್ಲೂಕು ಅಧ್ಯಕ್ಷ, 1999ರಲ್ಲಿ ಜನತಾದಳದಿಂದ ಸ್ಪರ್ಧೆ, ಆರಗ ಜ್ಞಾನೇಂದ್ರ ವಿರುದ್ಧ ಸೋಲು. 2004ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆ, ಸೋಲು. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಆರಗ ಜ್ಞಾನೇಂದ್ರ ವಿರುದ್ಧ ಮೊದಲ ಗೆಲುವು ದಾಖಲಿಸಿದರು. 2013ರಲ್ಲಿ ಮತ್ತೆ ಗೆಲುವು.
..........

ಮತ್ತೆ ಒಲಿದ ಸಚಿವ ಸ್ಥಾನ
 

ಖಮರುಲ್

ಗುಲ್ಬರ್ಗ: ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗುಲ್ಬರ್ಗ ಉತ್ತರ ಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ ಎಂಜಿನಿಯರಿಂಗ್ ಪದವೀಧರ. 1978ರಲ್ಲಿ ಮುಸ್ಲಿಂ ಲೀಗ್ ಮೂಲಕ ಗುಲ್ಬರ್ಗ ಕ್ಷೇತ್ರದಿಂದ ಜಯಿಸಿದರು. 1983 ಮತ್ತು 1985ರಲ್ಲಿ ಜನತಾ ಪಕ್ಷದ ಎಸ್.ಕೆ. ಕಾಂತಾ ವಿರುದ್ಧ ಸೋಲುಂಡರು. 1989ರಲ್ಲಿ ಗೆಲುವು. 1994ರಲ್ಲಿ ಇಂಡಿಯನ್ ನ್ಯಾಷನಲ್ ಲೀಗ್‌ನಿಂದ ಸ್ಪರ್ಧಿಸಿ ವಿಜಯದ ನಗೆ ಬೀರಿದರು.

1996ರಲ್ಲಿ ಜನತಾದಳ ಸೇರಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆ. 1998ರಲ್ಲಿ ಸೋಲು. ಬಳಿಕ ಕಾಂಗ್ರೆಸ್ ಸೇರಿ 1999ರಲ್ಲಿ ಮತ್ತೆ ಗುಲ್ಬರ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. 2004ರಲ್ಲಿ ಸೋಲುಂಡರು. ಕ್ಷೇತ್ರ ಮರು ವಿಂಗಡಣೆ ಬಳಿಕ ಗುಲ್ಬರ್ಗ ಉತ್ತರ ಕ್ಷೇತ್ರದಿಂದ 2008 ಮತ್ತು 2013ರಲ್ಲಿ ಸತತವಾಗಿ ಗೆಲುವು.

ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ವಸತಿ ಮತ್ತು ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಹೈದರಾಬಾದ್ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮುಸ್ಲಿಂ ಕಾಂಗ್ರೆಸ್ ಶಾಸಕ ಇವರು. ಖಮರುಲ್ ಅವರ ಪತ್ನಿ ಖನೀಫಾ ಫಾತಿಮಾ. ಈ ದಂಪತಿಯ ದತ್ತು ಪುತ್ರ ಫರಾದ್ ಸದ್ಯ ಎಂಬಿಎ ವಿದ್ಯಾರ್ಥಿ. ಇವರು ಕಟ್ಟಿ ಬೆಳೆಸಿದ `ನೋಬೆಲ್ ಶಿಕ್ಷಣ ಸಂಸ್ಥೆ'ಯನ್ನು ಸಹೋದರರು ನೋಡಿಕೊಳ್ಳುತ್ತಿದ್ದಾರೆ.
..........

ಸಿರಿವಂತನಿಗೆ ಮಂತ್ರಿಪಟ್ಟ

ಸಂತೋಷ್  ಲಾಡ್

ಹುಬ್ಬಳ್ಳಿ: ದುಬಾರಿಯ ಬಿಎಂಡಬ್ಲು ಕಾರಿನಲ್ಲಿ ಓಡಾಟ, ಬಾಡಿಗೆ ವಿಮಾನ ಮತ್ತು ಹೆಲಿಕಾಪ್ಟರ್‌ನಲ್ಲಿ ಸುತ್ತಾಟ. ಇದು ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಸತತ ಎರಡನೇ ಬಾರಿಗೆ ಶಾಸಕನಾಗಿರುವ ಗಣಿ ಉದ್ಯಮಿ ಸಂತೋಷ್ ಎಸ್. ಲಾಡ್ ಅವರ ಸಿರಿವಂತಿಕೆಯ ಪುಟ್ಟ ಪರಿಚಯ.

1996ರಲ್ಲಿ ಸಂಡೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು, 2000ದಲ್ಲಿ ಅದೇ ಪಟ್ಟಣ ಪಂಚಾಯ್ತಿಯ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದು ಆರಿಸಿ ಬಂದಿದ್ದರು. 2004ರ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆ ಆದರು. ರಾಜಕೀಯ ಸ್ಥಿತ್ಯಂತರದಲ್ಲಿ ಎಂ.ಪಿ.ಪ್ರಕಾಶ್ ಜೊತೆ ಸಂತೋಷ್ ಲಾಡ್ ಕೂಡಾ  ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದರು. 2008ರಲ್ಲಿ ಕ್ಷೇತ್ರ ವಿಂಗಡಣೆಯ ಬಳಿಕ ಸಂಡೂರು ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲುಗೊಂಡಿದ್ದರಿಂದ ಕಲಘಟಗಿ ಕ್ಷೇತ್ರಕ್ಕೆ `ರಾಜಕೀಯ'ವಾಗಿ ವಲಸೆ ಬಂದಿದ್ದರು.

ತಂದೆ ದಿವಂಗತ ಶಿವಾಜಿ ಲಾಡ್. ತಾಯಿ ಶೈಲಜಾ. ಜನನ 1975 ಫೆ. 27. ಪತ್ನಿ ಕೀರ್ತಿ ಎಸ್.ಲಾಡ್. ಮಗ ಕರಣ್ ಲಾಡ್.  ಲಾಡ್ ಅವರು ವಾಣಿಜ್ಯ ಶಾಸ್ತ್ರ ಪದವೀಧರ.
..........

ಪ್ರಥಮ ಬಾರಿಗೆ ಸಚಿವ

ಪಾಟೀಲ್

ವಿಜಾಪುರ: ಎಂ.ಬಿ. ಪಾಟೀಲ ಎಂದೇ ಖ್ಯಾತರಾಗಿರುವ ಮಲ್ಲನಗೌಡ ಬಸನಗೌಡ ಪಾಟೀಲ ಬಿ.ಇ. (ಸಿವಿಲ್) ಪದವೀಧರ. ಜನನ 7ನೇ ಅಕ್ಟೋಬರ್ 1964. ಲಿಂಗಾಯತ ಒಳಪಂಗಡ ಕುಡು ಒಕ್ಕಲಿಗ ಜಾತಿಗೆ ಸೇರಿದವರು. ಲಿಂಗಾಯತ ರಡ್ಡಿ ಜಾತಿಯ ಆಶಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಒಮ್ಮೆ ಸಂಸದ, ನಾಲ್ಕು ಬಾರಿ ಶಾಸಕರಾಗಿದ್ದು, ಇದೇ ಪ್ರಥಮ ಬಾರಿಗೆ ಸಚಿವರಾಗಿದ್ದಾರೆ.

1991ರಲ್ಲಿ ತಿಕೋಟಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1998ರಲ್ಲಿ ವಿಜಾಪುರ ಕ್ಷೇತ್ರದಿಂದ ಲೋಕಸಭೆಗೆ, 2004ರಲ್ಲಿ ತಿಕೋಟಾ, 2008ರಲ್ಲಿ ಬಬಲೇಶ್ವರ (ಕ್ಷೇತ್ರ ಪುನರ್ ವಿಂಗಡಣೆ)ದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈಗ ಬಬಲೇಶ್ವರ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ. ಎಐಸಿಸಿ, ಕೆಪಿಸಿಸಿ ಸಮನ್ವಯ ಸಮಿತಿ ಸದಸ್ಯರಾಗಿದ್ದಾರೆ.

ವಿಜಾಪುರ ತಾಲ್ಲೂಕು ತೊರವಿ ಗ್ರಾಮದ ಸಂಪ್ರದಾಯಸ್ಥ, ಪ್ರಭಾವಿ ಕುಟುಂಬದಿಂದ ಬಂದ ಎಂ.ಬಿ. ಪಾಟೀಲ, ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ವಿಜಾಪುರದ ದರಬಾರ ಪ್ರೌಢ ಶಾಲೆಯಲ್ಲಿ, ಬಿ.ಇಯನ್ನು ತಮ್ಮದೇ ಸಂಸ್ಥೆಯ ಬಿ.ಎಲ್.ಡಿ.ಇ. ಎಂಜಿನಿಯರಿಂಗ್ ಕಾಲೇಜನಲ್ಲಿ ಪಡೆದಿದ್ದಾರೆ.
...........

ಆತ್ಮೀಯತೆಗೆ ಸಿಕ್ಕ ಮಂತ್ರಿಪಟ್ಟ

ಜಾರಕಿಹೊಳಿ

ಬೆಳಗಾವಿ: ಯಮಕನಮರಡಿ ಮೀಸಲು (ಎಸ್‌ಟಿ) ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಸಚಿವರಾಗುವುದರೊಂದಿಗೆ ಗೋಕಾಕಿನ `ಸಿಂಡಿಕೇಟ್ ರಾಜಕಾರಣ'ಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಿದೆ.

ಗೋಕಾಕ ಕ್ಷೇತ್ರದಿಂದ ಸತತವಾಗಿ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಹಾಗೂ ಯಮಕನಮರಡಿ ಕ್ಷೇತ್ರದಿಂದ 2ನೇ ಬಾರಿಗೆ ಆಯ್ಕೆಯಾದ ಸತೀಶ ಜಾರಕಿಹೊಳಿ ನಡುವೆ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇತ್ತು. ಆದರೆ, ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಸತೀಶ ಜಾರಕಿಹೊಳಿ ಅವರು ಸಚಿವ ಸಂಪುಟ ದರ್ಜೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ವಾಲ್ಮೀಕಿ (ಬೇಡರ) ಸಮುದಾಯಕ್ಕೆ ಸೇರಿರುವ ಸತೀಶ ಜಾರಕಿಹೊಳಿ ಅವರು ಓದಿದ್ದು ದ್ವಿತೀಯ ಪಿಯುಸಿ. 2004ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಧರ್ಮಸಿಂಗ್ ಮಂತ್ರಿಮಂಡಲದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಜವಳಿ ಖಾತೆಯ (ಸ್ವತಂತ್ರ) ರಾಜ್ಯ ಸಚಿವ ಸ್ಥಾನ ಲಭಿಸಿತ್ತು. ಕ್ಷೇತ್ರ ವಿಂಗಡಣೆಯ ಬಳಿಕ 2008ರಲ್ಲಿ ನಡೆದ ಚುನಾವಣೆಯಲ್ಲಿ ಯಮಕನಮರಡಿ ಎಸ್‌ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
.............

2 ನೇ ಬಾರಿಗೆ ಮಂತ್ರಿಯೋಗ
 

ಪ್ರಕಾಶ ಹುಕ್ಕೇರಿ

ಚಿಕ್ಕೋಡಿ:  ಚಿಕ್ಕೋಡಿ-ಸದಲಗಾ ಕ್ಷೇತದಿಂದ ಶಾಸಕರಾಗಿ ಆಯ್ಕೆಯಾಗಿ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಪ್ರಕಾಶ ಹುಕ್ಕೇರಿ ಅವರು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದಾರೆ. ಓದಿದ್ದು ಎಸ್ಸೆಸ್ಸೆಲ್ಸಿ. 1983ರಲ್ಲಿ ತಾಲ್ಲೂಕಿನ ಯಕ್ಸಂಬಾ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗುವುದರೊಂದಿಗೆ ಆರಂಭಿಸಿದ ಅವರ ರಾಜಕೀಯ ಪಯಣವು, ಎರಡನೇ ಬಾರಿಗೆ ಸಚಿವರಾಗುವ ಹಂತಕ್ಕೆ ಬಂದು ತಲುಪಿದೆ.

1986 ಬೆಳಗಾವಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, 1988ರಿಂದ 1994ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿ, 1992ರಿಂದ 1994ರ ವರೆಗೆ ವಿಧಾನ ಪರಿಷತ್‌ನ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2000ರಿಂದ 2004ರ ವರೆಗೆ ಬೆಳಗಾವಿ ಕಾಡಾ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

1994, 1999 ಮತ್ತು 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಸದಲಗಾ ಮತಕ್ಷೇತ್ರದಿಂದ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 2004 ಧರ್ಮಸಿಂಗ್ ಮಂತ್ರಿಮಂಡಲದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಚಿವರಾಗ್ದ್ದಿದರು. ಕ್ಷೇತ್ರ ಪುನರ್ವಿಂಗಡಣೆ ಬಳಿಕ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
...........

ದಿನೇಶ ಗುಂಡೂರಾವ್

ಜಿಲ್ಲೆ : ಬೆಂಗಳೂರು ನಗರ (ಗಾಂಧಿನಗರ)

ಜನ್ಮ ದಿನಾಂಕ : 9 ಅಕ್ಟೋಬರ್ 1969
ಜನ್ಮಸ್ಥಳ : ಸಾತನೂರು, ಬೆಂಗಳೂರು  ಗ್ರಾಮಾಂತರ ಜಿಲ್ಲೆ
ಶಿಕ್ಷಣ : ಬಿ.ಇ
ಜಾತಿ : ಬ್ರಾಹ್ಮಣ

ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಪುತ್ರರಾದ ದಿನೇಶ್ ಗುಂಡೂರಾವ್, ಎಂಜಿನಿಯರಿಂಗ್ ಪದವೀಧರ. ಮುಸ್ಲಿಂ ಸಮುದಾಯದ ತಬಸ್ಸುಮ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ದಿನೇಶ್, ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಸಿದ್ದಾರೆ. 1999ರಲ್ಲಿ ಪ್ರಥಮ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಇವರು, ಸತತವಾಗಿ 2004, 2008 ಹಾಗೂ 2013ರ ಚುನಾವಣೆಗಳಲ್ಲಿ ಪುನರಾಯ್ಕೆಯಾಗಿದ್ದಾರೆ.
...........

ಕೆ.ಜೆ.ಜಾರ್ಜ್
ಜಿಲ್ಲೆ : ಬೆಂಗಳೂರು ನಗರ (ಸರ್ವಜ್ಞನಗರ)

ಜನ್ಮ ದಿನಾಂಕ : 24 ಆಗಸ್ಟ್ 1946
ಜನ್ಮಸ್ಥಳ : ಕೋನೇನಹಳ್ಳಿ
ಶಿಕ್ಷಣ : ಬಿ.ಎ
ಜಾತಿ :  ಕ್ರೈಸ್ತ

ಮಾಜಿ ಸಚಿವ ಕೆ.ಜೆ.ಜಾರ್ಜ್ 5ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಕೆ.ಸಿ.ಜೋಸೆಫ್ ಹಾಗೂ ಮಾರಿಯಮ್ಮ ಅವರ ಪುತ್ರ. ಪತ್ನಿ: ಸುಜಾ. ಇವರಿಗೆ ಒಬ್ಬ ಪುತ್ರ, ಪುತ್ರಿ ಇದ್ದಾರೆ. 1985, 1989, 2004, 2008 ಹಾಗೂ 2013ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1990ರಿಂದ 92ರವರೆಗೆ ಆಹಾರ ಮತ್ತು ನಾಗರಿಕ ಸರಬರಾಜು (ಸ್ವತಂತ್ರ ನಿರ್ವಹಣೆ) ಹಾಗೂ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿರುವ ಅವರು ಕ್ರೀಡೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ.
.............

ರಾಮಲಿಂಗಾರೆಡ್ಡಿ

ಜಿಲ್ಲೆ : ಬೆಂಗಳೂರು ನಗರ (ಬಿ.ಟಿ.ಎಂ.ಲೇಔಟ್)

ಜನ್ಮ ದಿನಾಂಕ : 12 ಜೂನ್ 1953
ಜನ್ಮಸ್ಥಳ : ಶೆಟ್ಟಿಹಳ್ಳಿ, ಆನೇಕಲ್ ತಾಲ್ಲೂಕು
ಶಿಕ್ಷಣ : ಬಿಎಸ್ಸಿ
ಜಾತಿ : ಒಕ್ಕಲಿಗ (ರೆಡ್ಡಿ)

ರಾಮಲಿಂಗಾರೆಡ್ಡಿ ಅವರು, 1989ರಿಂದ ಒಟ್ಟು 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1983ರಲ್ಲಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ರೆಡ್ಡಿ, 1989, 1994, 1999 ಹಾಗೂ 2004ರವರೆಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಬಿ.ಟಿ.ಎಂ.ಲೇಔಟ್ ಕ್ಷೇತ್ರದಿಂದ 2008 ಹಾಗೂ 2013ರಲ್ಲಿ ಆಯ್ಕೆಯಾಗಿದ್ದಾರೆ.

ಎಂ. ವೀರಪ್ಪ ಮೊಯಿಲಿ ಅವರ ಸಚಿವ ಸಂಪುಟದಲ್ಲಿ ಹಣಕಾಸು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೃಷ್ಣ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ, ಧರ್ಮಸಿಂಗ್ ಸರ್ಕಾರದಲ್ಲಿ ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
............

ಕೃಷ್ಣ ಬೈರೇಗೌಡ
ಜಿಲ್ಲೆ : ಬೆಂಗಳೂರು ನಗರ (ಬ್ಯಾಟರಾಯನಪುರ)

ಜನ್ಮ ದಿನಾಂಕ : 4 ಏಪ್ರಿಲ್ 1973ಜನ್ಮಸ್ಥಳ : ಗರುಡಪಾಳ್ಯ, ಕೋಲಾರ ಜಿಲ್ಲೆ
ಶಿಕ್ಷಣ : ಎಂ.ಎ (ಅಂತರರಾಷ್ಟ್ರೀಯ ವಿಚಾರಗಳು, ಅಮೆರಿಕದಲ್ಲಿ)
ಜಾತಿ : ಒಕ್ಕಲಿಗ

ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರ ಪುತ್ರರಾದ ಕೃಷ್ಣ ಬೈರೇಗೌಡ 4ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಪತ್ನಿ:  ಮೀನಾಕ್ಷಿ ಶೇಷಾದ್ರಿ. ತಂದೆ ನಿಧನದ ನಂತರ 2003ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ವೇಮಗಲ್ ಕ್ಷೇತ್ರದಿಂದ  ವಿಧಾನಸಭೆ ಪ್ರವೇಶಿಸಿದರು. 2004ರಲ್ಲಿ ಪುನರಾಯ್ಕೆಯಾದರು.

2008ರಲ್ಲಿ ನಡೆದ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ವೇಮಗಲ್ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತ್ತು. 2008ರಲ್ಲಿ ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕಣಕ್ಕೆ ಇಳಿದ ಕೃಷ್ಣ ಬೈರೇಗೌಡ ಜಯಶಾಲಿಯಾದರು.

2013ರ ಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ. ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. 2009ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ವಿರುದ್ಧ ಕಡಿಮೆ ಅಂತರದಲ್ಲಿ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT