ನವದೆಹಲಿ (ಪಿಟಿಐ): ಯುವಕರಿಬ್ಬರ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಪ್ರಕರಣ ದಾಖಲಿಸುವಂತೆ ದೆಹಲಿಯ ನ್ಯಾಯಾಲಯ ಆದೇಶಿಸಿದ ಅಪರೂಪದ ಘಟನೆ ಸೋಮವಾರ ನಡೆದಿದೆ.
ಯುವಕರಿಬ್ಬರು ತಂಪು ಪಾನೀಯದಲ್ಲಿ ಮದ್ಯ ಸೇರಿಸಿ ಕುಡಿಸಿದ ನಂತರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬಳು ದೆಹಲಿಯ ದ್ವಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ತನ್ನ ಮೇಲೆ ಯುವಕರು ಅತ್ಯಾಚಾರ ನಡೆಸಿಲ್ಲ ಎಂದು ಆ ಮಹಿಳೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. ವಿಪರೀತ ಮದ್ಯ ಸೇವಿಸಿದ್ದ ಮಹಿಳೆ ತನ್ನನ್ನು ವಾಹನದಲ್ಲಿ ಮನೆಗೆ ಬಿಡುವಂತೆ ಯುವಕರಿಗೆ ದುಂಬಾಲು ಬಿದ್ದಿದ್ದಳು. ಆದರೆ, ಯುವಕರು ಮಹಿಳೆಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಲು ಒಪ್ಪದಿದ್ದಾಗ ಯುವಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಅತ್ಯಾಚಾರದ ನಾಟಕ ಹೂಡಿದ್ದಳು ಎಂಬ ಕುತೂಹಲಕಾರಿ ಸಂಗತಿ ವಿಚಾರಣೆ ವೇಳೆ ಬಹಿರಂಗವಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮಹಿಳೆಗೆ ಛೀಮಾರಿ ಹಾಕಿ, ನಿರಪರಾಧಿ ಯುವಕರನ್ನು ಬಿಡುಗಡೆಗೊಳಿಸಿದೆ. ಮಹಿಳೆ ವಿರುದ್ಧ ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ದೂರು ದಾಖಲಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸುಳ್ಳು ಅತ್ಯಾಚಾರ ಆರೋಪ ಮಾಡುವ ಮಹಿಳೆಯರಿಗೂ ಶಿಕ್ಷೆಯಾಗಬೇಕು ಎಂದರು.
ಸುಳ್ಳು ಅತ್ಯಾಚಾರ ಆರೋಪಕ್ಕೆ ಗುರಿಯಾದ ವ್ಯಕ್ತಿ ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾದ ಮೇಲೂ ಆತನನ್ನು ಸಮಾಜ ಶಂಕೆಯಿಂದ ನೋಡುತ್ತದೆ. ಆತ ನಿರಂತರ ಮಾನಸಿಕ ಯಾತನೆ ಅನುಭವಿಸಬೇಕಾಗುತ್ತದೆ. ವಿಚಾರಣೆ ವೇಳೆಯೂ ಆರೋಪಿಗಳನ್ನು ಅತ್ಯಾಚಾರಿಗಳಂತೆ ಕಾಣಲಾಗುತ್ತದೆ ಎಂದು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು.
ವೈಯಕ್ತಿಕ ಹಿತಾಸಕ್ತಿಗಾಗಿ ನಿರಪರಾಧಿಗಳ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ಮಾಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಕಾಲ ಬಂದಿದೆ ಎಂದು ಅಭಿಪ್ರಾಯಪಟ್ಟರು.