ಸೋನೆಪತ್/ ನವದೆಹಲಿ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕಣ್ಣಿಗೆ ಪೊರೆ ಕವಿದಿದ್ದು, ಹರಿಯಾಣದ ಕಾಂಗ್ರೆಸ್ ಸರ್ಕಾರದಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬಡಜನರ ರೋದನ ಅವರಿಗೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಟೀಕಿಸಿದ್ದಾರೆ.
‘ಕೃತಿಯಲ್ಲಿ ಮಾಡಿ ತೋರಿಸಲಾಗದವರು ಆಡಂಬರದ ಮಾತುಗಳನ್ನು ಆಡುತ್ತಾರೆ’ ಎಂದು ಪ್ರಧಾನಿ ಮೋದಿ ಅವರನ್ನು ಸೋನಿಯಾ ಶನಿವಾರ ಟೀಕಿಸಿದ್ದಕ್ಕೆ ಷಾ ಹೀಗೆ ತಿರುಗೇಟು ನೀಡಿದ್ದಾರೆ. ಹರಿಯಾಣದಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಗುರಿಯಾಗಿ ರೋದಿಸುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವೇ? ಅಲ್ಲಿನ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಂಡಿರುವುದು ಹಾಗೂ ಹೀಗೆ ಸಂಕಷ್ಟಕ್ಕೆ ಒಳಗಾಗಿರುವ ರೈತರು ಕಣ್ಣೀರು ಹಾಕುತ್ತಿರುವುದು ನಿಜವಲ್ಲವೇ?– ಎಂದು ಸೋನೆಪತ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್್ಯಾಲಿಯಲ್ಲಿ ಅವರು ಕೇಳಿದರು.
ನೀವು (ಸೋನಿಯಾ) ಹಳ್ಳಿಗೆ ಹೋಗುವುದಿಲ್ಲವಾದ್ದರಿಂದ ನಿಮಗೆ ಗ್ರಾಮಸ್ಥರ ಕಷ್ಟಗಳು ಗೊತ್ತಿಲ್ಲ. ಅಂದು ಚಹಾ ಮಾರುತ್ತಿದ್ದ ಮೋದಿ ಇಂದು ಈ ಹಂತ ಮುಟ್ಟಿದ್ದಾರೆ. ಹೀಗಾಗಿ ಅವರಿಗೆ ಜನರ ಕಷ್ಟಗಳು ಗೊತ್ತಾಗುತ್ತವೆ ಎಂದು ಷಾ ಹೇಳಿದರು.
ಸೋನಿಯಾ ಅವರು ಶನಿವಾರ ಚುನಾವಣಾ ಭಾಷಣದಲ್ಲಿ ಮಾತನಾಡಿ, ಎಲ್ಲ ಕೆಲಸಗಳೂ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆಯೇ ನಡೆಯುತ್ತಿವೆ ಎಂಬಂತೆ ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದರು.