ನವದೆಹಲಿ (ರಾಯಿಟರ್ಸ್): ಹಣದುಬ್ಬರಕ್ಕೆ ಕಾರಣವಾದ ಅಂಶಗಳನ್ನು ಹದ್ದುಬಸ್ತಿಗೆ ತರಲು ಭಾರತ ಬದ್ಧವಾಗಿದೆ. ಸಗಟು ದರ ಏರಿಕೆಗೆ ಇಂಧನ ವೆಚ್ಚಗಳು ಮತ್ತು ಕಾಳಸಂತೆ ಕಾರಣ ಎಂದು ಹೇಳಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸೋಮವಾರ ರೂಪಾಯಿ ಮೌಲ್ಯವು ಡಾಲರ್ ಎದುರಿಗೆ 60 ರೂಪಾಯಿಗಳಿಗಿಂತಲೂ ಕೆಳಕ್ಕೆ ಇಳಿದದ್ದು ಭಾರಿ ಕಳವಳಕ್ಕೆ ಕಾರಣವಾಗಿತ್ತು. ಹಣದುಬ್ಬರ ಇನ್ನಷ್ಟು ತೀವ್ರಗೊಳ್ಳಬಹುದೆಂಬ ಆತಂಕದಿಂದ ಒಂದೇ ದಿನ ಹಲವಾರು ಮಂದಿ ತಮ್ಮಲ್ಲಿದ್ದ ಸರ್ಕಾರಿ ಬಾಂಡ್ ಗಳನ್ನು ಮಾರಾಟ ಮಾಡಿದ್ದರು.
ಜೊತೆಗೆ ಮುಂಗಾರು ಮಳೆ ದುರ್ಬಲವಾಗಿದೆಯೆಂಬ ಹವಾಮಾನ ವರದಿಗಳು ಹಾಗೂ ಇರಾಕ್ ಹಿಂಸಾಚಾರದ ಪರಿಣಾಮವಾಗಿ ಭಾರತ ಆಮದು ಮಾಡಿಕೊಳ್ಳುವ ತೈಲ ಬೆಲೆ ಏರಿಕೆಯಾಗಬಹುದೆಂಬ ವರದಿಗಳು ಹಣದುಬ್ಬರದ ಉರಿಗೆ ತುಪ್ಪ ಎರೆದಿದ್ದವು. ದುರ್ಬಲ ಮುಂಗಾರು ಕುರಿತ ಹವಾಮಾನ ವರದಿಗಳ ಪರಿಣಾಮವಾಗಿ ತರಕಾರಿಗಳ ಬೆಲೆ ಕೂಡಾ ಏರಿದೆ.
ಚುನಾವಣೆಯಲ್ಲಿ ಬೆಲೆ ಏರಿಕೆಯನ್ನೇ ತಮ್ಮ ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡ ಹಿನ್ನೆಲೆಯಲ್ಲೇ ಜಯಗಳಿಸಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೆ ಹಣದುಬ್ಬರ ನಿಯಂತ್ರಣ ಆದ್ಯತೆಯ ವಿಚಾರವಾಗಿದೆ.
'ದುರ್ಬಲ ಮುಂಗಾರು ಭೀತಿ ಹಿನ್ನೆಲೆ ಕೂಡಾ ಕಾಳಸಂತೆಗೆ ಕಾರಣವಾಗಿದ್ದು ಆಹಾರೋತ್ಪನ್ನಗಳ ಬೆಲೆ ಏರಿಕೆಗೆ ಕಾಣಿಕೆ ನೀಡಿದೆ' ಜೇಟ್ಲಿ ಸೋಮವಾರ ರಾತ್ರಿ ತಡವಾಗಿ ಫೇಸ್ ಬುಕ್ ನಲ್ಲಿ ಬರೆದ್ದಾರೆ.
'ಊಹಾಪೋಹಗಳನ್ನು ಆಧರಿಸಿ ಅಕ್ರಮ ದಾಸ್ತಾನು ನಡೆಯದಂತೆ ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು' ಎಂದೂ ಜೇಟ್ಲಿ ಬರೆದಿದ್ದಾರೆ.